ADVERTISEMENT

‘ಕಗ್ಗ’ದ ರಕ್ಷಣೆಗೆ ಬೃಹತ್ ಒಡ್ಡು ನಿರ್ಮಾಣ

ಸಣ್ಣ ನೀರಾವರಿ ಇಲಾಖೆಯ ಯೋಜನೆಗೆ ವಿಶ್ವಬ್ಯಾಂಕ್ ನೆರವು: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಸದಾಶಿವ ಎಂ.ಎಸ್‌.
Published 15 ಮೇ 2019, 19:47 IST
Last Updated 15 ಮೇ 2019, 19:47 IST
ಕುಮಟಾ ತಾಲ್ಲೂಕಿನ ಅಘನಾಶಿನಿ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನೀಡಿದ ವಿವಿಧ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಕುಮಟಾ ತಾಲ್ಲೂಕಿನ ಅಘನಾಶಿನಿ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನೀಡಿದ ವಿವಿಧ ಅಧಿಕಾರಿಗಳು ಪರಿಶೀಲನೆ ನಡೆಸಿದರು.   

ಕಾರವಾರ:ಅಪರೂಪದ ಕಗ್ಗ ಭತ್ತ ಬೆಳೆಯ ಸಂರಕ್ಷಣೆಸಲುವಾಗಿ ಅಘನಾಶಿನಿ ನದಿಯ ಹಿನ್ನೀರಿಗೆಒಡ್ಡು ನಿರ್ಮಿಸುವಮಹತ್ವಾಕಾಂಕ್ಷಿ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆ ಕೈಗೆತ್ತಿಕೊಂಡಿದೆ. ಮಾಣಿಕಟ್ಟಾ ಗ್ರಾಮದಿಂದ ಆರಂಭವಾಗುವ ಕಾಮಗಾರಿಯು, ಬರೋಬ್ಬರಿ 7.8 ಕಿ.ಮೀ ಉದ್ದ ಇರಲಿದೆ. ಇದರಿಂದ ಸುಮಾರು 600 ಹೆಕ್ಟೇರ್ ಜಮೀನಿಗೆ ಪ್ರಯೋಜನವಾಗಲಿದೆ ಎಂದು ಅಂದಾಜಿಸಲಾಗಿದೆ.

‘ಈ ಯೋಜನೆಗೆ ವಿಶ್ವಬ್ಯಾಂಕ್‌ನಿಂದ ಆರ್ಥಿಕನೆರವು ಪಡೆಯಲಾಗಿದ್ದು, ₹ 34.14 ಕೋಟಿ ವೆಚ್ಚವಾಗಲಿದೆ. ಕಾಮಗಾರಿಗೆ ಮೂರು ತಿಂಗಳ ಒಳಗೆಜಾಗತಿಕ ಟೆಂಡರ್ ಕರೆಯಲಾಗುತ್ತದೆ. ಈಗಾಗಲೇ ವಿಶ್ವಬ್ಯಾಂಕ್‌ನ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಚಂಡಮಾರುತ ಅಪಾಯ ನಿರ್ವಹಣಾ ಯೋಜನೆಯ (ಎನ್‌ಸಿಆರ್‌ಎಂಪಿ) ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಉದ್ದೇಶಿತ ಕಾಮಗಾರಿಯ ವಿನ್ಯಾಸಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮನೋಹರ ಪಿ ಕಳಸ್ ತಿಳಿಸಿದರು.

ವಿಶ್ವಬ್ಯಾಂಕ್‌ನ ದೆಹಲಿ ಕಚೇರಿಯಲ್ಲಿ ಪರಿಸರ ಅಧಿಕಾರಿಯಾಗಿರುವ ವೆಂಕರಟರಾವ್,ಎನ್‌ಸಿಆರ್‌ಎಂಪಿಯ ಬೆಂಗಳೂರು ಘಟಕದ ಪ್ರಮುಖ ಅಧಿಕಾರಿ ಹರ್ಷ, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕೆ.ಎಲ್.ಕಟ್ಟೀಮನಿ ಹಾಗೂ ವಿವಿಧ ಅಧಿಕಾರಿಗಳ ತಂಡ ಈಗಾಗಲೇ ಭೇಟಿ ನೀಡಿದೆ. ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆಯೂ ಅಧ್ಯಯನ ಮಾಡಲಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಆ ಭಾಗದ ರೈತರ ಜತೆಗೂ ಚರ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಮಾಣಿಕಟ್ಟಾದದಿಂದ ಸಾಗುವಕಾಮಗಾರಿಯು ಹೊರೆಉಳಿ, ಕಲ್ಕಟ್ಟ, ತುಂಬ್ರಿಕಟ್ಟ ಹಾಗೂ ಕಾಗಾಲ್ ಗ್ರಾಮದ ಕೆಲವು ಭಾಗಗಳಲ್ಲಿ ಕೂಡ ನಡೆಯಲಿದೆ. ಈ ಯೋಜನೆಯಿಂದ ಕಗ್ಗ ಭತ್ತ ಬೆಳೆಯುವ ರೈತರಿಗೆ, ಮೀನುಗಾರರಿಗೆ ಅನುಕೂಲವಾಗಲಿದೆ. ಏಡಿ, ಸೀಗಡಿ ಕೃಷಿಗೂ ಸಹಕಾರಿಯಾಗಲಿದೆ. ಸಮುದ್ರದ ಉಪ್ಪು ನೀರು ಮತ್ತು ನದಿಯ ಸಿಹಿ ನೀರನ್ನು ನಿಯಮಿತ ಪ್ರಮಾಣದಲ್ಲಿ ಗದ್ದೆಗೆ ಹರಿಸಲು ಅನುಕೂಲವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎರಡು ಬಾಗಿಲಿನ ಏಳು ಕಿಂಡಿ:ಅಘನಾಶಿನಿ ನದಿಗೆ ಸಮಾನಾಂತರವಾಗಿ 7.8 ಕಿ.ಮೀ ಉದ್ದಕ್ಕೆ ಒಡ್ಡು ನಿರ್ಮಿಸಲಾಗುತ್ತದೆ. ಅದಕ್ಕೆ ತಲಾ ಎರಡು ಬಾಗಿಲುಗಳು ಇರುವ ಏಳು ಕಿಂಡಿಗಳನ್ನು ಇಡಲಾಗುತ್ತದೆ. ಅವುಗಳ ಬಾಗಲಿಗೆ ಕೊಂಡಿಗಳನ್ನು ಮಾಡಿ ಉಪ್ಪು ನೀರು ಮತ್ತು ಸಿಹಿ ನೀರಿನ ಹರಿವನ್ನು ನಿಯಂತ್ರಿಸಲಾಗುತ್ತದೆ. ಒಡ್ಡು ಸುಮಾರು 3.8 ಮೀಟರ್ ಅಗಲ ಹಾಗೂನಾಲ್ಕು ಮೀಟರ್ ಅಗಲ ಇರಲಿದೆ. ಅದರಲ್ಲಿ 1.8 ಕಿ.ಮೀ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಸಿಗಲಿದೆ ಎಂದುಮನೋಹರ ಪಿ ಕಳಸ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.