
ಕಾರವಾರ: ತಾಲ್ಲೂಕಿನ ಅರಗಾದಲ್ಲಿರುವ ನೌಕಾನೆಲೆಯ ಐ.ಎನ್.ಎಸ್. ಪತಂಜಲಿ ಆಸ್ಪತ್ರೆ ಆವರಣದಲ್ಲಿದ್ದ ನೂರು ವರ್ಷ ಹಳೆಯದಾದ ಆಲದ ಮರವನ್ನು ಬುಡ ಸಮೇತ ಇತ್ತೀಚೆಗೆ ಸ್ಥಳಾಂತರಿಸಲಾಯಿತು.
ನೌಕಾನೆಲೆಯ ಎರಡನೇ ಹಂತದ ವಿಸ್ತರಣೆಯ ಭಾಗವಾಗಿ ಐ.ಎನ್.ಎಸ್. ಪತಂಜಲಿ ಆಸ್ಪತ್ರೆಯೂ ವಿಸ್ತರಣೆಗೊಳ್ಳುತ್ತಿದೆ. ಇದರಿಂದ ಆಸ್ಪತ್ರೆ ಆವರಣದಲ್ಲಿದ್ದ ಆಲದ ಮರವನ್ನು ತೆರವು ಮಾಡುವ ಅನಿವಾರ್ಯ ಎದುರಾಗಿತ್ತು.
ಆದರೆ, ಬೃಹತ್ ಗಾತ್ರದ ಮರವನ್ನು ಕಡಿದು ಹಾಕುವ ಬದಲು ಬುಡ ಸಮೇತ ಪಕ್ಕದಲ್ಲಿರುವ ಖಾಲಿ ಜಾಗಕ್ಕೆ ಸ್ಥಳಾಂತರಿಸಲು ನೌಕಾನೆಲೆಯ ಅಧಿಕಾರಿಗಳು ಯೋಚಿಸಿದರು. ಕೆಲವು ದಿನಗಳ ಕಾರ್ಯಾಚರಣೆ ನಡೆಸಿ ಮರದ ಬುಡವನ್ನು ಬಿಡಿಸಲಾಗಿತ್ತು. ಬಳಿಕ ಎರಡು ಜೆಸಿಬಿಗಳ ಮೂಲಕ ಮರವನ್ನು ಮೇಲಕ್ಕೆತ್ತಿ, ಈಗಿದ್ದ ಸ್ಥಳಕ್ಕಿಂತ ಸ್ವಲ್ಪ ದೂರದಲ್ಲಿ ನೆಡಲಾಯಿತು.
‘ನೂರು ವರ್ಷದಷ್ಟು ಹಳೆಯದಾಗಿದ್ದ ಆಲದ ಮರದ ಕೊಂಬೆಗಳು 80 ಚದರ ಅಡಿಯಷ್ಟು ವಿಸ್ತಾರದಲ್ಲಿ ಚಾಚಿಕೊಂಡಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳ ಸಲಹೆ ಪಡೆದು ಕೊಂಬೆಗಳನ್ನು ಕತ್ತರಿಸಿ ಮರವನ್ನು ಸ್ಥಳಾಂತರಿಸಿದ್ದೇವೆ’ ಎಂದು ನೌಕಾದಳ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.
‘ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಮರವನ್ನು ಕತ್ತರಿಸದೆ ಸ್ಥಳಾಂತರಿಸುವ ಮಾದರಿ ಕೆಲಸವನ್ನು ನೌಕಾದಳ ಮಾಡಿದೆ. ಪರಿಸರ ದಿನಾಚರಣೆಯ ಹೊಸ್ತಿಲಲ್ಲಿ ಇಂತಹ ಕೆಲಸ ಮಾಡಿದ್ದು ಉತ್ತಮ ಸಂದೇಶ ನೀಡಿದಂತಾಗಿದೆ’ ಎಂದು ನೌಕಾನೆಲೆ ಪ್ರದೇಶದ ಆರ್.ಎಫ್.ಒ. ಭವ್ಯಾ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.