ಸಿದ್ದಾಪುರ: ‘ಪ್ರಕೃತಿ ಮನುಷ್ಯನಿಗಾಗಿ ಮಾತ್ರ ಇಲ್ಲ. ಅಸಂಖ್ಯಾತ ಜೀವಿಗಳಿಗೆ ಪರಿಸರ ಅವಶ್ಯ. ಕಾಡು ನಾಶವಾದರೆ ಮನುಕುಲದ ನಾಶವೂ ಆಗುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಹೇಳಿದರು.
ತಾಲ್ಲೂಕಿನ ಬಿದ್ರಕಾನಿನ ಮಹಾತ್ಮಗಾಂಧಿ ಶತಾಬ್ಧಿ ಸ್ಮಾರಕ ಪ್ರೌಢಶಾಲೆಯ ಸಹಕಾರದೊಂದಿಗೆ ಮಹಾಬಲ ಫೌಂಡೇಷನ್ ಹಾಗೂ ಪ್ರಯೋಗ ಸ್ವಯಂಸೇವಾ ಸಂಸ್ಥೆ ಈಚೆಗೆ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಕಾಡು ನಶಿಸಿರುವುದರಿಂದಲೇ ಕೃಷಿ ಕ್ಷೇತ್ರದ ಮೇಲೆ ಕಾಡುಪ್ರಾಣಿಗಳು ದಾಳಿ ನಡೆಸುತ್ತಿವೆ. ವಿದ್ಯಾರ್ಥಿಗಳು ಪರಿಸರದ ಕುರಿತು ಕುತೂಹಲ ಹೊಂದಿರಬೇಕು’ ಎಂದರು.
ಡಿ.ಆರ್.ಎಫ್.ಒ ನರೇಂದ್ರನಾಥ್ ಕದಂ ಮಾತನಾಡಿ, ‘ಪರಿಸರವನ್ನು ಒಮ್ಮೆ ಹಾಳುಗೆಡವಿದರೆ ಸರಿಪಡಿಸಲು ಬಹಳ ಕಾಲ ಬೇಕು. ವಿದ್ಯಾರ್ಥಿ ದೆಸೆಯಿಂದಲೇ ಪರಿಸರದ ಮಹತ್ವ ತಿಳಿದಾಗ ಪರಿಸರ ಸಂರಕ್ಷಣೆ ಸಾಧ್ಯವಿದೆ’ ಎಂದು ಹೇಳಿದರು.
ನಿವೃತ್ತ ಮುಖ್ಯಶಿಕ್ಷಕ ಎಂ.ಆರ್. ಭಟ್ಟ, ಪ್ರಯೋಗ ಸಂಸ್ಥೆಯ ಅಧ್ಯಕ್ಷ ಗಂಗಾಧರ ಕೊಳಗಿ ಮಾತನಾಡಿದರು. ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಆರ್.ಎಸ್. ಹೆಗಡೆ ಉಳ್ಳಾನೆ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಬಿ. ನಾಯ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಗಜಾನನ ಹೆಗಡೆ, ಮಹಾಬಲ ಫೌಂಡೇಷನ್ ಅಧ್ಯಕ್ಷ ಮಂಜುನಾಥ ಭಟ್, ಮುಖ್ಯಶಿಕ್ಷಕ ಜನಾರ್ಧನ ಸಿ., ಶಿಕ್ಷಕಿಯರಾದ ವಿಜಯಲಕ್ಷ್ಮೀ, ಸಂಧ್ಯಾ ಶಾಸ್ತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.