ADVERTISEMENT

ಸಂಕಷ್ಟದಲ್ಲಿ ಮಲ್ಲಿಗೆ ಬೆಳೆಗಾರರು: ಮಂಗಳೂರಿನಲ್ಲೂ ಬೇಡಿಕೆಯಿಲ್ಲ

ಸದ್ಯಕ್ಕೆ ನೆರೆಯ ಮಂಗಳೂರಿನಲ್ಲೂ ಬೇಡಿಕೆಯಿಲ್ಲ

​ಪ್ರಜಾವಾಣಿ ವಾರ್ತೆ
Published 11 ಮೇ 2021, 12:29 IST
Last Updated 11 ಮೇ 2021, 12:29 IST
ಮಲ್ಲಿಗೆ ಅಟ್ಟೆ
ಮಲ್ಲಿಗೆ ಅಟ್ಟೆ   

ಭಟ್ಕಳ: ತಾಲ್ಲೂಕಿನಲ್ಲಿ ಮಲ್ಲಿಗೆ ಬೆಳೆ ಪ್ರಮುಖ ಬೇಸಾಯಗಳಲ್ಲಿ ಒಂದಾಗಿದೆ. ಗೊರ್ಟೆಯಿಂದ ಬೈಲೂರಿನ ತನಕ ಎಲ್ಲರೂ ಮಲ್ಲಿಗೆ ಕೃಷಿ ಮಾಡಿಕೊಂಡಿದ್ದಾರೆ. ಅದರಲ್ಲಿ ಹೆಚ್ಚಿನವರು ಅದನ್ನೇ ಮುಖ್ಯ ವ್ಯಾಪಾರವಾಗಿ ಮಾಡಿಕೊಂಡಿದ್ದಾರೆ.

ಮಲ್ಲಿಗೆ ವ್ಯಾಪಾರಿಗಳು ಜನವರಿಯಿಂದ ಜೂನ್‌ ತನಕ ಉತ್ತಮ ಇಳುವರಿಯಿಂದ ಆದಾಯ ಗಳಿಸುವ ಸಮಯವಾಗಿರುತ್ತದೆ. ಕಳೆದ ಬಾರಿ ಇದೇ ಸಮಯದಲ್ಲಿ ಲಾಕ್‌ಡೌನ್ ರೈತರನ್ನು ಸಂಕಷ್ಟಕ್ಕೆ ನೂಕಿತ್ತು. ಈಗಷ್ಟೇ ಚೇತರಿಸಿಕೊಳ್ಳುವಾಗಲೇ ಕೋವಿಡ್‌ ಕರ್ಫ್ಯೂ ಮಲ್ಲಿಗೆ ಬೆಳೆಗಾರರನ್ನು ಕಂಗೆಡಿಸುವಂತೆ ಮಾಡಿದೆ.

ಭಟ್ಕಳದಲ್ಲಿ ಬೆಳೆಯುವ ಎಲ್ಲ ಮಲ್ಲಿಗೆಯನ್ನು ಇಲ್ಲಿಯೇ ವ್ಯಾಪಾರ ಮಾಡುವುದಿಲ್ಲ. ಭಟ್ಕಳದ ಮಲ್ಲಿಗೆಗೆ ಪ್ರಮುಖ ಬೇಡಿಕೆ ಇರುವುದು ನೆರೆಯ ಮಂಗಳೂರಿನಲ್ಲಿ. ದಿನನಿತ್ಯ ಇಲ್ಲಿಂದ 7,000 ದಿಂದ 8,000 ಅಟ್ಟೆ(ಒಂದು ಅಟ್ಟೆಯಲ್ಲಿ 10 ಮೊಳ ಹೂ) ಹೂಗಳನ್ನು ವಾಹನದಲ್ಲಿ ಮಂಗಳೂರಿಗೆ ತಲುಪಿಸುತ್ತಾರೆ. ಬೇಡಿಕೆಗೆ ತಕ್ಕಂತೆ ಹೊರ ರಾಜ್ಯ ಹಾಗೂ ಹೋರದೇಶಗಳಿಗೆ ಅಲ್ಲಿಂದ ರಪ್ತು ಮಾಡಲಾಗುತ್ತದೆ.

ADVERTISEMENT

ಲಕ್ಷಾಂತರ ರೂಪಾಯಿ ನಷ್ಟ: ಮಲ್ಲಿಗೆ ಬೆಳೆಗಾರರು ಹೇಳುವಂತೆ, ಈ ಸಮಯದಲ್ಲಿ ಪ್ರತಿ ಮಲ್ಲಿಗೆ ಮೊಳದ ದರ ₹50 ರಿಂದ 60 ಇರುತ್ತಿತ್ತು. ಮಂಗಳೂರಿಗೆ ಸಾಗಿಸುವ ಏಜೆಂಟರು ಮಲ್ಲಿಗೆಗೆ ಉತ್ತಮ ದರ ನೀಡಿ ಖರೀದಿ ಮಾಡುತ್ತಿದ್ದರು. ಈ ಬಾರಿ ಜನತಾ ಕರ್ಫ್ಯೂ ಇದ್ದರೂ ಕೂಡ ಬೇಡಿಕೆ ಕಡಿಮೆ ಆಗಿರಲಿಲ್ಲ. ದರ ಕಡಿಮೆ ಇದ್ದರೂ ಬೆಳೆ ನಷ್ಟವಾಗುತ್ತಿಲ್ಲ ಎಂಬ ಸಮಾಧಾನವಿತ್ತು. ಆದರೆ ಕಳೆದ ಬುಧವಾರದಿಂದ ಏಜೆಂಟರು ಮಲ್ಲಿಗೆ ಖರೀದಿ ಮಾಡಲು ಬರುತ್ತಿಲ್ಲ. ಕೇಳಿದರೆ ಮಂಗಳೂರಿನಲ್ಲಿ ನಾವು ತೆಗೆದುಕೊಂಡ ಹೋದ ಮಲ್ಲಿಗೆಗೆ ಬೇಡಿಕೆ ಇಲ್ಲ ಎನ್ನುತ್ತಾರೆ ಎಂದು ದೂರಿದರು.

ಬೆಳೆ ನಷ್ಟ ಪರಿಹಾರಕ್ಕೆ ಬೇಡಿಕೆ: ಈ ಸಂಕಷ್ಟದಿಂದ ಕಳೆದ ಎರಡು ವರ್ಷಗಳಿಂದ ಬೆಳೆ ನಷ್ಟ ಅನುಭವಿಸುತ್ತಿದ್ದೇವೆ. ವರ್ಷಕ್ಕೆ ಗೊಬ್ಬರ, ರಾಸಾಯನಿಕ ಔಷಧಿ ಸೇರಿದಂತೆ ರೈತ ಕಾರ್ಮಿಕರ ಸಂಬಳ ಸೇರಿದಂತೆ ಸಾವಿರಾರೂ ರೂಪಾಯಿ ಖರ್ಚು ಮಾಡಿ ಇಳುವರಿ ನೀಡುವ ಸಮಯದಲ್ಲಿ ನಷ್ಟ ಅನುಭವಿಸುತ್ತಿದ್ದೇವೆ. ಸರ್ಕಾರ ನಮ್ಮ ನಷ್ಟಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು. ಇಲ್ಲವೇ ನಮ್ಮ ಬೆಳೆಗೆ ಮಾರುಕಟ್ಟೆ ಕಲ್ಪಿಸಬೇಕು ಎಂದು ಮಲ್ಲಿಗೆ ಬೆಳೆಗಾರರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.