ADVERTISEMENT

ನೌಕಾನೆಲೆ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 14:10 IST
Last Updated 18 ಅಕ್ಟೋಬರ್ 2021, 14:10 IST
ನೌಕಾನೆಲೆಯ ಸಿ ಮತ್ತು ಡಿ ದರ್ಜೆ ಸಿಬ್ಬಂದಿ ನೇಮಕಾತಿಯಲ್ಲಿ ನಿರಾಶ್ರಿತರ ಕುಟುಂಬಗಳ ಯುವಕರಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಮೀನುಗಾರರ ಮುಖಂಡರು ಸೋಮವಾರ ಮನವಿ ಸಲ್ಲಿಸಿದರು
ನೌಕಾನೆಲೆಯ ಸಿ ಮತ್ತು ಡಿ ದರ್ಜೆ ಸಿಬ್ಬಂದಿ ನೇಮಕಾತಿಯಲ್ಲಿ ನಿರಾಶ್ರಿತರ ಕುಟುಂಬಗಳ ಯುವಕರಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಮೀನುಗಾರರ ಮುಖಂಡರು ಸೋಮವಾರ ಮನವಿ ಸಲ್ಲಿಸಿದರು   

ಕಾರವಾರ: ‘ನೌಕಾನೆಲೆಯ ಸಿ ಮತ್ತು ಡಿ ದರ್ಜೆಯ ಸಿಬ್ಬಂದಿ ನೇಮಕಾತಿಯಲ್ಲಿ ಯೋಜನೆಗೆ ನಿರಾಶ್ರಿತವಾದ ಕುಟುಂಬಗಳ ಯುವಕರಿಗೆ ಆದ್ಯತೆ ನೀಡಬೇಕು. ಈ ಸಂಬಂಧ ನೌಕಾನೆಲೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಬೇಕು’ ಎಂದು ಸೀಬರ್ಡ್ ನಿರಾಶ್ರಿತರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಮನವಿ ಸಲ್ಲಿಸಲಾಯಿತು.

‘2019ರ ಆಗಸ್ಟ್‌ನಲ್ಲಿ ಕಾರವಾರದ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಸೀಬರ್ಡ್ ಯೋಜನೆಯ ನಿರಾಶ್ರಿತರ ಕುಟುಂಬಗಳ ಯುವಕರಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಅಂತೆಯೇ ನಿರಾಶ್ರಿತ ಕುಟುಂಬಗಳ ಯುವಕರ ಮಾಹಿತಿ ಸಂಗ್ರಹಿಸಿದ್ದ ಕಂದಾಯ ಇಲಾಖೆಯು, ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಣಿ ಮಾಡಿಸಿತ್ತು. ಆದರೆ, ಈಗ ನೌಕಾನೆಲೆಯಲ್ಲಿ ನೇಮಕಾತಿ ಸಂದರ್ಭದಲ್ಲಿ ಈ ಯುವಕರನ್ನು ಕಡೆಗಣಿಸಲಾಗುತ್ತಿದೆ’ ಎಂದು ದೂರಿದ್ದಾರೆ.

ADVERTISEMENT

‘ಈ ಯುವಕರಿಗೆ ವಯೋಮಿತಿ ಆಗುತ್ತಿದ್ದು, ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಬೇರೆ ಪ್ರದೇಶಗಳ ಯುವಕರ ಬದಲು ಸ್ಥಳೀಯರನ್ನೇ ಪರಿಗಣಿಸಬೇಕು. ಈ ಬಗ್ಗೆ ನೌಕಾನೆಲೆಯ ಅಧಿಕಾರಿಗಳ ಜೊತೆ ಚರ್ಚಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರಮುಖರಾದ ರಾಜು ಟಿ.ಹರಿಕಂತ್ರ, ಶ್ರೀಧರ ಹರಿಕಂತ್ರ, ವೆಂಕಟೇಶ ಈರ ನಾಯ್ಕ, ಅವಿನಾಶ ಪಿ.ಮಾಂಗ್ರೆ, ಪೃಥ್ವಿರಾಜ ಪಿ.ಹರಿಕಂತ್ರ, ಚೇತನ ಹರಿಕಂತ್ರ, ಅಭಿಷೇಕ ಹರಿಕಂತ್ರ, ನಾಗರದರ್ಶನ ತಾಂಡೇಲ ಸೇರಿದಂತೆ ಹತ್ತಾರು ಯುವಕರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.