ADVERTISEMENT

ಕಾಳಿ ನದಿ ತಿರುವು ಪ್ರಸ್ತಾವಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 7 ಮೇ 2019, 13:20 IST
Last Updated 7 ಮೇ 2019, 13:20 IST
ರವಿ ರೇಡ್ಕರ್
ರವಿ ರೇಡ್ಕರ್   

ಜೊಯಿಡಾ:‘ತಾಲ್ಲೂಕಿನ ಜೀವನದಿ ಕಾಳಿಯ ನೀರನ್ನು ಘಟಪ್ರಭಾ– ಮಲಪ್ರಭಾ ನದಿಗಳಿಗೆ ಸೇರಿಸುವ ಬೃಹತ್ ಯೋಜನೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ’ ಎಂದು ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ರವಿ ರೇಡ್ಕರ್ ತಿಳಿಸಿದ್ದಾರೆ.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಕೆಲವು ಮಠಾಧೀಶರು ಬೆಳಗಾವಿಯಲ್ಲಿ ಇತ್ತೀಚೆಗೆ ಸಭೆ ನಡೆಸಿ, ಈ ಯೋಜನೆ ಜಾರಿಗೆ ಒತ್ತಾಯಿಸಿದ್ದಾರೆ.ಸೂಪಾ ಅಣೆಕಟ್ಟಿನಹೊರಹರಿವಿನ 100 ಟಿಎಂಸಿ ಅಡಿ ನೀರನ್ನು ಅರಣ್ಯ ಪ್ರದೇಶದ ಮೂಲಕ ಘಟಪ್ರಭಾ– ಮಲಪ್ರಭಾ ನದಿಗೆ ಸಾಗಿಸುವ ಮೂರ್ಖತನದ ಯೋಜನೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಸ್ವಾರ್ಥ ಪ್ರಭಾವಿ ರಾಜಕೀಯ ನಾಯಕರು ಹಾಗೂ ಉದ್ಯಮಿಗಳು ಬೆಂಬಲಿಸುತ್ತಿರುವ ಬಗ್ಗೆ ತಿಳಿದುಬಂದಿದೆ. ಇದಕ್ಕೆ ತೀವ್ರ ವಿರೋಧವಿದೆ’ ಎಂದರು.

‘ಕಾಳಿ ನಮಗೆ ಜೀವ ಜಲವಾಗಿದ್ದು, ಇದನ್ನೇಅವಲಂಬಿಸಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಇದರ ಸುತ್ತ ಇರುವ ಜೊಯಿಡಾ, ದಾಂಡೇಲಿ, ಯಲ್ಲಾಪುರ, ಕಾರವಾರ, ಹಳಿಯಾಳ ತಾಲ್ಲೂಕಿನ ಜನರು ತ್ಯಾಗಮಾಡಿಕೊಂಡು ಬಂದವರಾಗಿದ್ದಾರೆ. ಅವರ ತ್ಯಾಗಕ್ಕೆ ತಕ್ಕ ಪ್ರತಿಫಲ ಸಿಗದೆ ನೋವು ಅನುಭವಿಸುತ್ತಿದ್ದಾರೆ.ಶೇ 90ರಷ್ಟು ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರಿನ ಸರಿಯಾದ ವ್ಯವಸ್ಥೆ ಇಲ್ಲ. ಜೊಯಿಡಾ, ರಾಮನಗರಗಳಲ್ಲಿ 10– 15 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ದಾಂಡೇಲಿಯಲ್ಲಿ ವಾರಕ್ಕೊಮ್ಮೆ ಸಿಗುತ್ತಿದೆ’ ಎಂದು ದೂರಿದರು.

ADVERTISEMENT

ಇಂತಹ ಯೋಜನೆ ಕೈಗೆತ್ತಿಕೊಳ್ಳುವ ಮೊದಲು ಅರಣ್ಯ ಇಲಾಖೆಯ ಅನುಮತಿ ಪಡೆಯದೇಜಿಲ್ಲಾಡಳಿತವು ಸರ್ವೇಕ್ಷಣೆಗೆ ಅವಕಾಶ ನೀಡಬಾರದು. ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ವರದಿತಯಾರಿಸಿ ಸಾರ್ವಜನಿಕರಿಗೆ ನೀಡಬೇಕು. ಸಾರ್ವಜನಿಕರಿಂದ ಅಹವಾಲು ಆಲಿಸಬೇಕು ಎಂದು ಆಗ್ರಹಿಸಿದರು.

ಈ ಸಂಬಂಧ ಕೇಂದ್ರ ಸಚಿವರು,ಗ್ರಾಮ ಪಂಚಾಯ್ತಿ ಪ್ರತಿನಿಧಿಗಳು, ಸ್ಥಳೀಯ ಸಂಘ ಸಂಸ್ಥೆಗಳು ತಮ್ಮ ವಿರೋಧ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾಳಿಬ್ರಿಗೇಡ್‌ನ ತಾಲ್ಲೂಕು ಘಟಕದಪ್ರಮುಖರಾದ ಸುನೀಲ ದೇಸಾಯಿ, ವಿಷ್ಣು ದೇಸಾಯಿ, ಕಿರಣ ನಾಯ್ಕ, ನಾರಾಯಣ ದಬಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.