
ಕಾರವಾರ: ಏಳು ವರ್ಷಗಳ ಬಳಿಕ ನಡೆಯುತ್ತಿರುವ ‘ಕರಾವಳಿ ಉತ್ಸವ’ಕ್ಕೆ ಇಲ್ಲಿನ ಟ್ಯಾಗೋರ್ ಕಡಲತೀರದ ಮಯೂರ ವರ್ಮ ವೇದಿಕೆ ಸಜ್ಜುಗೊಂಡಿದೆ. ಒಂದು ವಾರ ಕಾಲ ನಡೆಯುವ ಅದ್ದೂರಿ ಉತ್ಸವಕ್ಕೆ ಸೋಮವಾರ ರಾತ್ರಿ ಚಾಲನೆ ದೊರೆಯಲಿದೆ.
ಉತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಯೂರ ವರ್ಮ ವೇದಿಕೆಗೆ ಹೊಂದಿಕೊಂಡು ಬೃಹತ್ ಗಾತ್ರದ ವೇದಿಕೆ ನಿರ್ಮಿಸಲಾಗಿದೆ. ಅದರ ಎದುರು ಅತಿ ಗಣ್ಯರಿಗೆ (ವಿವಿಐಪಿ) ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.
ಗಣ್ಯರು (ವಿಐಪಿ), ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಗ್ಯಾಲರಿಗಳಲ್ಲಿ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆಯ ಮೇಲ್ಭಾಗದಲ್ಲೇ ಕಲಾವಿದರಿಗೆ ವಿಶ್ರಾಂತಿ ಕೊಠಡಿ, ಅಲಂಕಾರ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿದಿನ ಸಂಜೆ 5.30ರಿಂದ ಸ್ಥಳೀಯ ಕಲಾವಿದರ ಕಾರ್ಯಕ್ರಮ ಪ್ರದರ್ಶನ ನಡೆಯಲಿದ್ದು, ರಾತ್ರಿ 9 ಗಂಟೆಯ ಬಳಿಕ ಖ್ಯಾತನಾಮ ಕಲಾವಿದರ ಕಾರ್ಯಕ್ರಮ ನಡೆಯಲಿದೆ.
‘ಕರಾವಳಿ ಉತ್ಸವಕ್ಕೆ ಸಾವಿರಾರು ಜನರು ಪಾಲ್ಗೊಳ್ಳುವುದರಿಂದ ಭದ್ರತೆ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ನಿಯೋಜಿಸಲಾಗಿದೆ. ಇಬ್ಬರು ಡಿಎಸ್ಪಿಗಳು, 10 ಇನ್ಸ್ಪೆಕ್ಟರ್ಗಳು, 300ಕ್ಕೂ ಹೆಚ್ಚು ಸಿಬ್ಬಂದಿ ಜೊತೆಗೆ ಕೆಎಸ್ಆರ್ಪಿ, ಡಿಎಆರ್ ತುಕಡಿ ನಿಯೋಜಿಸಿದ್ದೇವೆ. ಸುರಕ್ಷತೆ ನಿಗಾ ಇಡಲು ಉತ್ಸವ ನಡೆಯುವ ಸ್ಥಳಗಳ ಸುತ್ತಮುತ್ತ 32 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ವೇದಿಕೆಯ ಹಿಂಭಾಗ, ಲಂಡನ್ ಸೇತುವೆ ಸಮೀಪದ ಮೈದಾನ, ಜಿಲ್ಲಾಧಿಕಾರಿ ಕಚೇರಿ ಸಮೀಪ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಮಧ್ಯಾಹ್ನ 4 ಗಂಟೆಗೆ ಸುಭಾಷ್ ವೃತ್ತದಿಂದ ಮಯೂರ ವರ್ಮ ವೇದಿಕೆಯ ವರೆಗೆ 14 ಕಲಾ ತಂಡಗಳಿಂದ ಮೆರವಣಿಗೆ
ಮೀನುಗಾರರ ಲಾಟೀನು ಪ್ರದರ್ಶನ
ರಾತ್ರಿ 8 ಗಂಟೆಗೆ ಕರಾವಳಿ ಉತ್ಸವದ ಉದ್ಘಾಟನೆ
ರಾತ್ರಿ 9.30ರಿಂದ ಶಂಕರ ಮಹಾದೇವನ್ ಅವರಿಂದ ಸಂಗೀತ ಕಾರ್ಯಕ್ರಮ
ಉತ್ಸವದ ಅಂಗವಾಗಿ ಡಿ.26ರಂದು ಟ್ಯಾಗೋರ್ ಕಡಲತೀರದಲ್ಲಿ ಪುರುಷರು ಮತ್ತು ಮಹಿಳೆಯರಿಗೆ 21 ಕೀ.ಮೀ 10 ಕೀ.ಮೀ 5 ಕೀ.ಮೀ ಮ್ಯಾರಥಾನ್ ಗುಂಪು ಸ್ಪರ್ಧೆಗಳಾದ ಹಗ್ಗ ಜಗ್ಗಾಟ ವಾಲಿಬಾಲ್ ಮತ್ತು ಪುರುಷರಿಗೆ ಮಾಲಾದೇವಿ ಮೈದಾನದಲ್ಲಿ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಪಂದ್ಯಾವಳಿಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು 24ರ ಸಂಜೆ 6 ಗಂಟೆಯೊಳಗಾಗಿ ಹೆಸರನ್ನು ಗೂಗಲ್ ಫಾರ್ಮ ಲಿಂಕ್ https://forms.gle/UFkdjPcouTYvqyyB6 ಅಥವಾ ಅಥ್ಲೆಟಿಕ್ ತರಬೇತುದಾರರಾದ ಶಿವಾನಂದ ನಾಯ್ಕ (8722516856) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿ (9480886551) ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.