ADVERTISEMENT

ಸಿಎಂ ಬೊಮ್ಮಾಯಿ ಕೇಂದ್ರ ಗೃಹ ಸಚಿವರ ಸಭೆಗೆ ತೆರಳಿದ್ದು ತಪ್ಪು: ಎಚ್.ಕೆ.ಪಾಟೀಲ್

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2022, 11:04 IST
Last Updated 17 ಡಿಸೆಂಬರ್ 2022, 11:04 IST
ಎಚ್.ಕೆ.ಪಾಟೀಲ್
ಎಚ್.ಕೆ.ಪಾಟೀಲ್   

ಶಿರಸಿ: 'ಗಡಿ ವಿವಾದ ವಿಚಾರದಲ್ಲಿ ಕೇಂದ್ರ ಗೃಹ ಸಚಿವರು ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಕರೆದಿರುವುದು ಅಪರಾಧ. ಸಭೆಗೆ ತೆರಳಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿರುವ ಪ್ರಮಾದ' ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಗಡಿ ವಿವಾದ ವಿಚಾರದಲ್ಲಿ ಸುಪ್ರಿಂಕೋರ್ಟ್ ಮಹಾರಾಷ್ಟ್ರದ ವಾದವನ್ನು ಎರಡು ಬಾರಿ ತಳ್ಳಿಹಾಕಿದೆ. ಇಂತಹ ಸಂದರ್ಭದಲ್ಲಿ ಅಶಾಂತಿ ಇದೆ ಎಂಬುದನ್ನು ಬಿಂಬಿಸಲು ಪ್ರಯತ್ನ ನಡೆದಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಸಮಿತಿ ರಚಿಸಲು ಹೊರಟಿದೆ. ಇದಕ್ಕೆ ರಾಜ್ಯ ಸರ್ಕಾರ ಸಮ್ಮತಿಸಬಾರದು' ಎಂದರು.

'ಗಡಿ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಅಥವಾ ಮಹಾಜನ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂಬುದು ಕರ್ನಾಟಕದ ಧ್ಯೇಯವಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿರಬೇಕು. ಅದರ ಹೊರತಾದ ಯಾವುದೇ ಪ್ರಕ್ರಿಯೆಗೆ ಸರ್ಕಾರ ಒಪ್ಪಬಾರದು. ಈ ಅಂಶಗಳನ್ನೇ ಪ್ರಧಾನಿ, ಕೇಂದ್ರ ಗೃಹ ಸಚಿವರಿಗೆ ಸ್ಪಷ್ಟಪಡಿಸಬೇಕು' ಎಂದರು.

ADVERTISEMENT

'ಭಾಷೆಯ ವಿಚಾರ ಮುಂದಿಟ್ಟು ಶಾಂತಿ ಕದಡುವ ಪ್ರಯತ್ನ ನಡೆದಿದೆ. ಗಡಿವಿವಾದದಲ್ಲಿ ಕರ್ನಾಟಕ ಸಂಪೂರ್ಣ ಸಹಕರಿಸಿದೆ. ಆದರೆ ಮಹಾರಾಷ್ಟ್ರ ಸರ್ಕಾರ ಜನರನ್ನು ಪ್ರಚೋದಿಸಿದೆ. ಇಂತಹ ಕೃತ್ಯದಲ್ಲಿ ತೊಡಗಿದವರಿಗೆ ಇತಿಹಾಸದ ಅರಿವಿಲ್ಲ' ಎಂದರು.

'ಗಡಿವಿವಾದ ಮುಗಿದ ಅಧ್ಯಾಯ. ತಪ್ಪು ಹೆಜ್ಜೆ ಇಟ್ಟು ಸರ್ಕಾರ ಸೂಕ್ಷ್ಮ ಸ್ಥಿತಿಯನ್ನು ಕದಡಬಾರದು. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗುವುದು' ಎಂದರು.

'ಬೆಳಗಾವಿಯಲ್ಲಿ ರಾಜ್ಯ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ಗಡಿ ವಿವಾದ ಇತ್ಯರ್ಥದ ಬಗ್ಗೆ ಚರ್ಚಿಸಬೇಕು' ಎಂದು ಆಗ್ರಹಿಸಿದರು.

ಆರ್.ಎಂ.ಹೆಗಡೆ ಬಾಳೇಸರ, ಎಸ್.ಕೆ.ಭಾಗವತ, ನಾಗರಾಜ ನಾರ್ವೇಕರ, ವಸಂತ ನಾಯ್ಕ, ಇದ್ದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.