ಶಿರಸಿ: ತಾಲ್ಲೂಕಿನ ಗಡಿಗ್ರಾಮ ಮೊಗವಳ್ಳಿಗೆ ನೆರೆ ಭೀತಿ ಎದುರಾಗಿದೆ. ಸಾಗರ ಭಾಗದಲ್ಲಿಯೂ ಅಧಿಕ ಮಳೆ ಸುರಿಯುತ್ತಿರುವ ಪರಿಣಾಮ ವರದಾ ನದಿ ಉಕ್ಕಿದೆ.
ಮೊಗವಳ್ಳಿಯ ಸಣ್ಣಮನೆ ಭಾಗದ ಹಲವು ಮನೆಗಳ ಆವರಣಕ್ಕೆ ನೀರು ನುಗ್ಗಿದೆ. ಮಣ್ಣಿನ ಗೋಡೆಯ ಕೆಲ ಮನೆಗಳು ಕುಸಿದು ಬೀಳುವ ಆತಂಕ ಎದುರಾಗಿದೆ. ನೂರಾರು ಎಕರೆ ಕೃಷಿಭೂಮಿ ಸಂಪೂರ್ಣ ಜಲಾವೃತವಾಗಿದೆ.
ಭಾಶಿ ಭಾಗದಲ್ಲಿಯೂ ನಿರಂತರ ಮಳೆ ಸುರಿಯುತ್ತಿದ್ದು ನೀರಿನ ಮಟ್ಟ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
‘ನೀರಿನ ಮಟ್ಟ ಇನ್ನಷ್ಟು ಏರಿಕೆಯಾದರೆ ಗ್ರಾಮಸ್ಥರನ್ನು ಹೊಸಕೇರಿಯ ಗಂಜಿಕೇಂದ್ರಕ್ಕೆ ಸ್ಥಳಾನಮತರಿಸಲಾಗುವುದು’ ಎಂದು ಕಂದಾಯ ನಿರೀಕ್ಷಕ ಡಿ.ಆರ್.ಬೆಳ್ಳಿಮನೆ ತಿಳಿಸಿದ್ದಾರೆ.
‘ನೆರೆ ಪರಿಸ್ಥಿತಿಯ ಮುನ್ಸೂಚನೆ ಇದ್ದರೂ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿಲ್ಲ. ಕೊನೆಕ್ಷಣದಲ್ಲಿ ಸ್ಥಳಾಂತರ ಕಷ್ಟ. ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಬೇಕು’ ಎಂದು ಭಾಶಿ ಗ್ರಾಮ ಪಂಚಾಯ್ತಿ ಸದಸ್ಯ ವಿನಯ ಗೌಡರ್ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.