ಗೋಕರ್ಣ: ಇಲ್ಲಿಯ ಮುಖ್ಯ ಸಮುದ್ರ ತೀರದಲ್ಲಿರುವ ರಾಮತೀರ್ಥದ ದೇವಸ್ಥಾನದ ಬಳಿ, ಕಳೆದ ವರ್ಷದ ಜುಲೈನಲ್ಲಿ ಬಂದ ಭಾರಿ ಮಳೆಗೆ ಕುಸಿದು ಬಿದ್ದ ಗುಡ್ಡದ ಕಲ್ಲು, ಮಣ್ಣುನ್ನು ಇನ್ನೂ ತೆರವುಗೊಳಿಸದ ಮತ್ತು ಇನ್ನೂ ಗುಡ್ಡ ಕುಸಿಯುವ ಆತಂಕವಿರುವ ಕಾರಣ ಸಾರ್ವಜನಿಕರಿಗೆ ರಾಮತೀರ್ಥಕ್ಕೆ ನಿರ್ಬಂಧ ವಿಧಿಸಿ ಕಂದಾಯ ಇಲಾಖೆ ಶುಕ್ರವಾರ ಬ್ಯಾರಿಕೇಡ್ ಅಳವಡಿಸಿದೆ.
ಈ ಸಂಬಂಧ ಜಿಯೋಲೋಜಿಕ್ ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳು ಕಳೆದ ಮೇ ತಿಂಗಳಿನಲ್ಲಿ ಸ್ಥಳಕ್ಕೆ ಭೇಟಿಯಿತ್ತು, ಈ ಪ್ರದೇಶದ ಸಮೀಕ್ಷೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದರು. ಈ ಬಗ್ಗೆ ಪ್ರಜಾವಾಣಿಯಲ್ಲಿ ವರದಿ ಪ್ರಕಟಿಸಲಾಗಿತ್ತು. ಜಿಯೋಲೋಜಿಕ್ ಅಧಿಕಾರಿಗಳ ವರದಿ ಆಧಾರದ ಮೇಲೆ, ಜಿಲ್ಲಾಡಳಿತದ ಸೂಚನೆಯಂತೆ, ಕುಮಟಾ ತಹಶೀಲ್ದಾರ್ ಆದೇಶದಂತೆ ಸ್ಥಳೀಯ ಕಂದಾಯ ಅಧಿಕಾರಿಗಳು ರಾಮತೀರ್ಥಕ್ಕೆ ಹೋಗಲು ನಿರ್ಬಂಧ ವಿಧಿಸಿದ್ದಾರೆ.
ಇಲ್ಲಿ ಶಾಂಡಿಲ್ಯ ಮಹಾರಾಜರ ಸಮಾಧಿಯೂ ಇದೆ. ಶಾಂಡಿಲ್ಯ ಮಹಾರಾಜರ ಭಕ್ತರು ಕರಸೇವೆ ಮೂಲಕ ಕಳೆದ ಆಗಸ್ಟ್ ತಿಂಗಳಲ್ಲಿ ಕಲ್ಲು, ಮಣ್ಣನ್ನು ತೆರವುಗೊಳಿಸಿದ್ದರು. ದೇವಸ್ಥಾನದ ಸುತ್ತಲೂ ಪ್ರದಕ್ಷಣೆ ಹಾಕಲು ಅನುಕೂಲ ಮಾಡಿಕೊಟ್ಟಿದ್ದರು. ಇನ್ನಾದರೂ ಸಂಬಂಧ ಪಟ್ಟವರು ಉಳಿದ ಮಣ್ಣನ್ನು ತೆರವುಗೊಳಿಸಿ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬೇಕೆಂದು ಸ್ಥಳೀಯರು ಮತ್ತು ಅಲ್ಲಿಯ ಅರ್ಚಕರು ಮನವಿ ಮಾಡಿದ್ದಾರೆ.
ಸ್ಥಳೀಯರ ಅಸಮಾಧಾನ
ಅಧಿಕಾರಿಗಳು ರಾಮ ಮಂದಿರದ ಬಳಿ ಗುಡ್ಡ ಕುಸಿದ ಸ್ಥಳದಲ್ಲಿ ಸಾರ್ವಜನಿಕರು ಹೋಗದಂತೆ ಬ್ಯಾರಿಕೇಡ್ ಅಳವಡಿಸಬೇಕಿತ್ತು. ಅದನ್ನು ಬಿಟ್ಟು ರಾಮತೀರ್ಥಕ್ಕೆ ಹೋಗುವ ರಸ್ತೆಯಲ್ಲಿಯೇ ನಿರ್ಬಂಧ ವಿಧಿಸಿ ಬ್ಯಾರಿಕೇಡ್ ಅಳವಡಿಸಿದ್ದಾರೆ. ಇದರಿಂದ ರಾಮತೀರ್ಥ ಸ್ನಾನಕ್ಕೆ ಹೋಗುವ ಕುಡಿಯಲು ನೀರು ತೆಗೆದುಕೊಂಡು ಹೋಗುವವರಿಗೂ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.