ADVERTISEMENT

ಯಕ್ಷಗಾನ ‘ಗುರು’ವನ್ನು ಅರಸಿ ಬಂದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 16:22 IST
Last Updated 29 ಆಗಸ್ಟ್ 2022, 16:22 IST
ಉಮೇಶ ಭಟ್ಟ ಬಾಡ
ಉಮೇಶ ಭಟ್ಟ ಬಾಡ   

ಕುಮಟಾ: ಯಕ್ಷಗಾನ ಕಲೆಯ ಎಲ್ಲ ಪ್ರಕಾರಗಳಲ್ಲಿ ಪರಿಣಿತಿ ಹೊಂದಿ ಸಾವಿರಾರು ಜನರಿಗೆ ಆ ಕಲೆಯ ತರಬೇತಿ ನೀಡುತ್ತಿರುವ ಯಕ್ಷಗಾನ ‘ಗುರು’ ಎನಿಸಿಕೊಂಡಿರುವ ಭಾಗವತ ಬಾಡದ ಉಮೇಶ ಭಟ್ಟ ಅವರನ್ನು ಯಕ್ಷಗಾನ ಅಕಾಡೆಮಿಯ ಗೌರವ ಪುರಸ್ಕಾರ ಅರಸಿ ಬಂದಿದೆ.

40 ವರ್ಷಗಳಿಂದ ಯಕ್ಷಗಾನ ಭಾಗವತರಾಗಿ ಈಚೆಗೆ ಎಲ್ಲ ವಯೋಮಾನದವರಿಗೆ ಯಕ್ಷಗಾನ ಕಲಿಸುತ್ತಿರುವ ಉಮೇಶ ಭಟ್ಟ ಬಾಡ ಅವರ ಮೊದಲ ಗುರು ಕಡತೋಕಾ ನಾರಾಯಣ ಭಂಡಾರಿ. ನಂತರ ಅವರು ಕೋಟದ ಯಕ್ಷಗಾನ ಕಲಾ ಕೇಂದ್ರದಲ್ಲಿ ನಾರಾಣಪ್ಪ ಉಪ್ಪೂರು ಅವರಲ್ಲಿ ಭಾಗವತಿಕೆ ಕಲಿತರು. ನಂತರ ಸಾಲಿಗ್ರಾಮ, ಪಂಚಲಿಂಗ, ಬಚ್ಚಗಾರು, ಮಾರಿಕಾಂಬಾ, ಮುಲ್ಕಿ, ಗೋಳಿಗರಡಿ, ಗುಂಡಬಾಳ ಹಾಗೂ ಕುಮಟಾ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದರು.

‘ನನ್ನ 24ನೇ ವಯಸ್ಸಿನಲ್ಲಿ ಕೋಟದ ಯಕ್ಷಗಾನ ಕಲಾ ಕೇಂದ್ರಕ್ಕೆ ಸೇರಿದಾಗ ಅಲ್ಲಿ ನಾರಾಣಪ್ಪ ಉಪ್ಪೂರು ಪ್ರಾಚಾರ್ಯರು. ಯಕ್ಷಗಾನದಲ್ಲಿ ವಸಂತಸೇನೆ ಪಾತ್ರದಲ್ಲಿ ಪ್ರಸಿದ್ಧ ಸ್ತ್ರೀ ಪಾತ್ರಧಾರಿ ಕೋಟ ವೈಕುಂಠ ಅವರು ಭಾಗವತರು, ಮದ್ದಲೆ ವಾದಕರು ಕಡ್ಡಾಯವಾಗಿ ನೃತ್ಯಾಭ್ಯಾಸ ಕಲಿಯಬೇಕು ಎಂದರು. ಆಗ ನಾನು, ಮದ್ದಲೆ ವಾದಕರಾಗಿದ್ದ ದುರ್ಗಪ್ಪ ಗುಡಿಗಾರ ಅವರು ನೃತ್ಯಾಭ್ಯಾಸ ಕಲಿಯಬೇಕಾಯಿತು. ಯಕ್ಷಗಾನ ಕಲೆಯ ಅಂಥ ಮಹಾನ್ ಕಲಾವಿದರ ಒಡನಾಟ ಇಂದು ಪ್ರಶಸ್ತಿಯವರೆಗೂ ನನ್ನನ್ನು ಕರೆತಂದಿದೆ’ ಎಂದು ಉಮೇಶ ಭಟ್ಟ ‘ಪ್ರಜಾವಾಣಿ’ಯೊಂದಿಗೆ ನೆನಪು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.