ADVERTISEMENT

ಕಾರವಾರ ಮಹಾ ಯೋಜನೆ ಪರಿಷ್ಕರಣೆಗೆ ಸಿದ್ಧತೆ

105 ಚದರ ಕಿ.ಮೀ ವ್ಯಾಪ್ತಿಯಲ್ಲಿ ಶೇ 3ರಷ್ಟೇ ವಾಣಿಜ್ಯ ಪ್ರದೇಶ: ಕೃಷಿ ಭೂಮಿ ಅಧಿಕ

ಗಣಪತಿ ಹೆಗಡೆ
Published 4 ಫೆಬ್ರುವರಿ 2026, 5:16 IST
Last Updated 4 ಫೆಬ್ರುವರಿ 2026, 5:16 IST
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ.
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ.   

ಕಾರವಾರ: ಸೀಮಿತ ಪ್ರಮಾಣದ ನಿವೇಶನ, ಭೂ ಪರಿವರ್ತನೆಗೆ ನಿಯಮಾವಳಿಯ ತೊಡಕು ಸೇರಿದಂತೆ ಹತ್ತಾರು ಸಮಸ್ಯೆ ಎದುರಿಸುತ್ತಿರುವ ನಗರಕ್ಕೆ ಪರಿಷ್ಕೃತ ಮಹಾ ಯೋಜನೆ (ಮಾಸ್ಟರ್ ಪ್ಲ್ಯಾನ್) ರೂಪಿಸುವ ಸಲುವಾಗಿ ಪ್ರಸ್ತಾವ ಸಲ್ಲಿಕೆಗೆ ಸಿದ್ಧತೆಗಳು ನಡೆದಿವೆ.

ಅಧಿಕಾರಿ, ಸಿಬ್ಬಂದಿ ಕೊರತೆಯ ನಡುವೆಯೇ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರ (ಕೆಡಿಎ) ಪರಿಷ್ಕೃತ ಮಹಾ ಯೋಜನೆಗೆ ಪ್ರಸ್ತಾವ ಸಿದ್ಧಪಡಿಸಲು ತಯಾರಿ ಕೈಗೆತ್ತಿಕೊಂಡಿದೆ. 2018ರಲ್ಲಿ ಈ ಹಿಂದಿನ ಮಹಾ ಯೋಜನೆ ರೂಪಿಸಲಾಗಿತ್ತು. ಪ್ರತಿ 10 ವರ್ಷಕ್ಕೊಮ್ಮೆ ಯೋಜನೆ ಪರಿಷ್ಕರಿಸಲಾಗುತ್ತಿದೆ.

ಮಹಾ ಯೋಜನೆಯು ಕೇವಲ ಕಾರವಾರ ನಗರಕ್ಕೆ ಸೀಮಿತವಾಗಿರದೆ ಕೆಡಿಎ ವ್ಯಾಪ್ತಿಯ ಚಿತ್ತಾಕುಲ ಗ್ರಾಮ ಪಂಚಾಯಿತಿ, ಚೆಂಡಿಯಾ ಗ್ರಾಮ ಪಂಚಾಯಿತಿ ಒಳಗೊಂಡು 10 ಗ್ರಾಮಗಳನ್ನೂ ಒಳಗೊಂಡಿರಲಿದೆ. 105 ಚದರ ಕಿ.ಮೀ ವ್ಯಾಪ್ತಿಯ 10,500 ಹೆಕ್ಟೇರ್ ಪ್ರದೇಶ ಪರಿಗಣಿಸಿ ಮಹಾ ಯೋಜನೆ ರೂಪಿಸಲಾಗುತ್ತದೆ. ಮಹಾ ಯೋಜನೆ ಆಧರಿಸಿ ಕಟ್ಟಡಗಳು, ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತದೆ.

ADVERTISEMENT

‘ನಗರದ ಅಭಿವೃದ್ಧಿಗೆ ಪೂರಕವಾಗಿ ಬಡಾವಣೆಗಳ ನಿರ್ಮಾಣ, ಉದ್ಯಾನ, ರಸ್ತೆಗೆ ಜಾಗ ಮೀಸಲಿಗೆ ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಲು ಮಹಾ ಯೋಜನೆ ನೆರವಾಗುತ್ತದೆ.  ಜನವಸತಿ, ಕೃಷಿ ಭೂಮಿ, ವಾಣಿಜ್ಯ, ಕೈಗಾರಿಕೆ, ಉದ್ಯಾನ ಸೇರಿದಂತೆ ಒಟ್ಟೂ 9 ವಲಯಗಳನ್ನಾಗಿ ಭೂಮಿ ವಿಂಗಡಿಸಲಾಗುತ್ತಿದೆ’ ಎಂದು ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಭಾರ ಆಯುಕ್ತ ನೌಫಾಲ್ ಅಹ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘2018ರಲ್ಲಿ ರೂಪಿಸಿದ ಮಹಾ ಯೋಜನೆ ಪ್ರಕಾರ ಕೆಡಿಎ ವ್ಯಾಪ್ತಿಯ ಶೇ 52ರಷ್ಟು ಪ್ರದೇಶ ಜನವಸತಿ (ಹಳದಿ ವಲಯ), ಶೇ 42–45 ಪ್ರದೇಶ ಕೃಷಿ ಭೂಮಿ (ಹಸಿರು ವಲಯ), ಶೇ 3ರಷ್ಟು ಪ್ರಮಾಣದ ವ್ಯಾಪ್ತಿ ಮಾತ್ರವೇ ಕೈಗಾರಿಕೆ ಮತ್ತು ವಾಣಿಜ್ಯ ಉದ್ದೇಶ ಭೂಮಿಯಾಗಿದ್ದವು. ಪರಿಷ್ಕೃತ ಯೋಜನೆಗೆ ಮುನ್ನ ಸರ್ವೆ ನಡೆಸಿ ಪ್ರಸ್ತಾವ ಸಲ್ಲಿಸಲಾಗುತ್ತದೆ’ ಎಂದರು.

ಮಹಾ ಯೋಜನೆ ಪ್ರಸ್ತಾವ ಸಿದ್ಧಪಡಿಸುವ ಮುನ್ನ ಎಂಜಿನಿಯರ್‌ಗಳು ನಿರ್ಮಾಣ ಕ್ಷೇತ್ರದ ಪ್ರಮುಖರು ಸಾರ್ವನಿಕರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಆಲಿಸಲಾಗುತ್ತದೆ. ಕಟ್ಟಡಗಳ ಎತ್ತರ ಮಿತಿ ಎಫ್‌ಎಆರ್ ಹೆಚ್ಚಿಸುವ ಬಗ್ಗೆ ಅಭಿಪ್ರಾಯ ಪಡೆಯಲಾಗುತ್ತದೆ
ನೌಫಾಲ್ ಅಹ್ಮದ್ ಕೆಡಿಎ ಪ್ರಭಾರ ಆಯುಕ್ತ

ಎಫ್‌ಎಆರ್ ಎರಡು ಪಟ್ಟು ಹೆಚ್ಚಿಸಲಿ

‘ಕಾರವಾರದಲ್ಲಿ ಒಂದೆಡೆ ಸಮುದ್ರ ಇನ್ನೊಂದೆಡೆ ಪರ್ವತ ಶ್ರೇಣಿ ಇರುವ ಕಾರಣಕ್ಕೆ ಸೀಮಿತ ಭೂ ಪ್ರದೇಶ ಬಳಕೆಗೆ ಲಭ್ಯವಿದೆ. ಇಲ್ಲಿನ ಭೌಗೋಳಿಕ ಸ್ಥಿತಿಗೆ ಅನಗುಣವಾಗಿ ಮಹಾ ಯೋಜನೆ ಸಿದ್ಧಪಡಿಸಬೇಕಿದೆ. ಆದರೆ ಇದು ಕಾಲಘಟ್ಟಕ್ಕೆ ಸರಿಯಾಗಿ ಬದಲಾಗಿಲ್ಲ.

ನಿವೇಶನದ ಕೊರತೆ ಇರುವ ಕಾರಣದಿಂದ ವಿಸ್ತೀರ್ಣಕ್ಕೆ ಅನುಗುಣವಾಗಿ ಕಟ್ಟಡ ನಿರ್ಮಾಣಕ್ಕೆ ನೀಡುವ ಮಹಡಿ ಪ್ರದೇಶ ಅನುಪಾತ (ಎಫ್‍ಎಆರ್) ಎರಡು ಪಟ್ಟು ಹೆಚ್ಚಿಸಬೇಕು. ಸದ್ಯ ಕಾರವಾರದಲ್ಲಿ ಎಫ್‌ಎಆರ್ 2.5 ರಷ್ಟಿದೆ. ಇದನ್ನು ಮಂಗಳೂರು ಮಾದರಿಯಲ್ಲಿ 5ಕ್ಕೆ ಏರಿಕೆ ಮಾಡಬೇಕು. ಕಟ್ಟಡಗಳ ಎತ್ತರದ ಮಿತಿಯನ್ನು 15 ಮೀಟರ್‌ವರೆಗೆ ಏರಿಕೆ ಮಾಡಲು ಅವಕಾಶ ಕಲ್ಪಿಸಬೇಕು. ಅಂದಾಗ ಮಾತ್ರ ಇಲ್ಲಿನ ಬೆಳಣಿಗೆಗೆ ಪೂರಕವಾಗಿ ವಸತಿ ಪ್ರದೇಶ ಲಭ್ಯತೆಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಸಂಘಗಳ ಒಕ್ಕೂಟದ (ಕ್ರೆಡಾಯ್) ಕಾರವಾರ ಘಟಕದ ಮಾಜಿ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ.

8 ವರ್ಷದಿಂದ ಅಧ್ಯಕ್ಷರಿಲ್ಲ!

ಕಾರವಾರ ನಗರಾಭಿವೃಧ್ಧಿ ಪ್ರಾಧಿಕಾರಕ್ಕೆ ಸರ್ಕಾರ ಅಧ್ಯಕ್ಷರನ್ನು ನೇಮಿಸದೆ 8 ವರ್ಷ ಕಳೆದಿದೆ. ಅಧಿಕಾರದಲ್ಲಿರುವ ಪಕ್ಷಗಳ ಪ್ರಭಾವಿ ವ್ಯಕ್ತಿಗಳು ಈ ಹಿಂದೆ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು. 2018ರಲ್ಲಿ ನಗರಸಭೆಗೆ ಹಲವು ಬಾರಿ ಸದಸ್ಯರಾಗಿದ್ದ ಸಂದೀಪ ತಳೇಕರ ಅಧ್ಯಕ್ಷರಾಗಿ ಆಡಳಿತ ನಿಭಾಯಿಸಿದ್ದರು. ಆ ಬಳಿಕ ಎರಡು ಸರ್ಕಾರಗಳು ಬದಲಾದರೂ ಅಧ್ಯಕ್ಷ ಹುದ್ದೆ ಖಾಲಿಯೇ ಇದೆ. ಸದ್ಯ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.