ADVERTISEMENT

ಕಾರವಾರ | ಅಕಾಲಿಕ ಮಳೆ: ಫಸಲು ಸಿಗುವ ಹೊತ್ತಲ್ಲಿ ಮಗುಚಿದ ಭತ್ತ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 2:49 IST
Last Updated 10 ನವೆಂಬರ್ 2025, 2:49 IST
<div class="paragraphs"><p>ಹಳಿಯಾಳದ ತೇಗ್ನಳ್ಳಿ ಗ್ರಾಮದ ಗದ್ದೆಯೊಂದರಲ್ಲಿ ಮಳೆಗೆ ಸಿಲುಕಿದ ಭತ್ತದ ಸಸಿಗಳು ನೆಲಕ್ಕುರುಳಿರುವುದು.</p></div>

ಹಳಿಯಾಳದ ತೇಗ್ನಳ್ಳಿ ಗ್ರಾಮದ ಗದ್ದೆಯೊಂದರಲ್ಲಿ ಮಳೆಗೆ ಸಿಲುಕಿದ ಭತ್ತದ ಸಸಿಗಳು ನೆಲಕ್ಕುರುಳಿರುವುದು.

   

ಕಾರವಾರ: ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿ ಉಂಟಾಗದಿದ್ದರೂ ಮುಂಗಾರಿನ ಬಳಿಕ ಸುರಿಯುತ್ತಿರುವ ಮಳೆಯು ಫಸಲು ನಷ್ಟಕ್ಕೆ ಕಾರಣವಾಗುತ್ತಿದೆ. ಹತ್ತಾರು ಹೆಕ್ಟೇರ್ ಭತ್ತದ ಬೆಳೆ ನಾಶವಾಗಿರುವುದು ಒಂದೆಡೆ ಯಾದರೆ, ತೇವಾಂಶದ ವಾತಾವರಣ ಅಡಿಕೆಗೆ ಎಲೆಚುಕ್ಕಿ ರೋಗ ಉಲ್ಬಣಿಸಲು ದಾರಿಮಾಡಿಕೊಟ್ಟಿದೆ.

ಹದವಾದ ಮಳೆ ಬಿದ್ದಿದ್ದರಿಂದ ಭತ್ತದ ಉತ್ತಮ ಫಸಲು ಪಡೆಯಬಹುದು ಎಂಬ ನಿರೀಕ್ಷೆಯಲ್ಲಿ ಇದ್ದ ರೈತ ಸಮೂಹಕ್ಕೆ ಅಕ್ಟೋಬರ್ ತಿಂಗಳೀಡಿ ಸುರಿದ ಮಳೆಯು ಆತಂಕ ಉಂಟುಮಾಡಿದೆ. ಜಿಲ್ಲೆಯ ಹಲವೆಡೆ 60 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಭತ್ತದ ಬೆಳೆ ನೀರಿಗೆ ಸಿಲುಕಿ ಹಾನಿಗೀಡಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.

ADVERTISEMENT

ಕಳೆದ ನಾಲ್ಕೈದು ವರ್ಷಗಳಿಂದ ಬಾಧಿಸುತ್ತಿರುವ ಎಲೆಚುಕ್ಕಿ ರೋಗ ಮಳೆಗಾಲ ಮುಗಿದ ಬೆನ್ನಲ್ಲೇ ಹತೋಟಿಗೆ ಬರಬಹುದು ಎಂದು ನಂಬಿದ್ದ ರೈತರಿಗೂ ಮಳೆ, ಮೋಡದ ವಾತಾವರಣ ಮರಗಳನ್ನೇ ಕಳೆದುಕೊಳ್ಳುವ ಚಿಂತೆ ತಂದಿದೆ. ಜಿಲ್ಲೆಯಲ್ಲಿ 8 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ವ್ಯಾಪಿಸಿರುವ ಎಲೆಚುಕ್ಕಿ ರೋಗವು ಮತ್ತಷ್ಟು ಹರಡಲು ಅಕಾಲಿಕ ಮಳೆ ಕಾರಣವಾಗಿದೆ.

ಶಿರಸಿ ತಾಲ್ಲೂಕಿನಲ್ಲಿ ಭತ್ತಕ್ಕೆ ಕಂದು ಜಿಗಿಹುಳು ಬಾಧೆ, ಅಡಿಕೆಗೆ ಎಲೆಚುಕ್ಕಿ, ಕೊಳೆ ರೋಗ ಬಾಧಿಸಿದೆ. 2 ಸಾವಿರ ಹೆಕ್ಟೇರ್‌‍‍ಗೂ ಹೆಚ್ಚಿನ ಪ್ರದೇಶದಲ್ಲಿ ಎಲೆಚುಕ್ಕಿ ಬಾಧಿಸಿದ್ದು, ಕಡಿಮೆಯಾಗುವ ಲಕ್ಷಣ ಇಲ್ಲ. ಬನವಾಸಿ ಹೋಬಳಿಯಲ್ಲಿ 6-7 ಸಾವಿರ ಎಕರೆ ಪ್ರದೇಶದಲ್ಲಿ ಭತ್ತದ ಬೆಳೆಯಿದ್ದು, 1,500 ಎಕರೆಗೂ ಮಿಕ್ಕಿದ ಪ್ರದೇಶದಲ್ಲಿ ಕಂದು ಜಿಗಿಹುಳು, ಬೆಂಕಿರೋಗ ವ್ಯಾಪಿಸಿದೆ.

ಹೊನ್ನಾವರದಲ್ಲಿ ನಿರಂತರ ಮಳೆಯಿಂದ ಅಡಿಕೆ ಒಣಗಿಸಲಾಗದೇ ಹಲವೆಡೆ ಇಟ್ಟಲ್ಲೇ ಅವು ಮೊಳಕೆಯೊಡೆದಿವೆ. ಕೊಳೆ ರೋಗ ಕೂಡ ವ್ಯಾಪಕವಾಗಿ ಬಾಧಿಸಿದ್ದು 3 ಸಾವಿರ ಹೆಕ್ಟೇರ್ ಪ್ರದೇಶ ಕೊಳೆರೋಗ ಬಾಧಿತವಾಗಿರಬಹುದು ಎಂದು ತೋಟಗಾರಿಕಾ ಇಲಾಖೆ ಅಂದಾಜಿಸಿದೆ. ಹೊದ್ಕೆಶಿರೂರು, ಚಂದಾವರ, ಹಳದೀಪುರ ಮೊದಲಾದೆಡೆ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ಅಕಾಲಿಕ ಮಳೆಯಿಂದ ಹಾನಿಗೀಡಾಗಿದ್ದು 6.84 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ನೆಲಕಚ್ಚಿದೆ.

ಭಟ್ಕಳ ತಾಲ್ಲೂಕಿನ ಶಿರಾಲಿ ಭಾಗದಲ್ಲಿ ಮಳೆಯ ಆತಂಕದಲ್ಲಿ ಯಂತ್ರಗಳನ್ನು ಬಳಸಿ ತುರಾತುರಿಯಲ್ಲಿ ಭತ್ತ ಕಟಾವು ಮಾಡಲಾಗುತ್ತಿದೆ. ಅಡಿಕೆಗೆ ಎಲೆಚುಕ್ಕಿ ರೋಗದ ಭಾದೆ ಕಾಡುತ್ತಿದ್ದು ರೈತರು ಕಂಗಲಾಗಿದ್ದಾರೆ. ಫಸಲು ಕೈಸೇರದ ಆತಂಕದಲ್ಲಿದ್ದಾರೆ.

ಗೋಕರ್ಣ ಹೋಬಳಿಯ ಬಹುತೇಕ ಕಡೆ ಭತ್ತ ಕಟಾವಿಗೆ ಬಂದಿದ್ದು, ಅಕಾಲಿಕ ಮಳೆ ಅಡ್ಡಿ ಪಡಿಸಿದೆ. ಅನೇಕ ಕಡೆ ಭತ್ತದ ಸಸಿ ಗದ್ದೆಯಲ್ಲಿಯೇ ಮಗುಚಿದೆ. ಬಾವಿಕೊಡ್ಲ, ಮೂಲೆಕೆರಿ, ಬರ್ಗಿ, ಹಿರೇಗುತ್ತಿ, ದಂಡೆಭಾಗ, ಬೇಲೆಗದ್ದೆ, ಸಣ್ಣಬಿಜ್ಜೂರಿನ ಹಲವು ಗದ್ದೆಗಳಲ್ಲಿ ಮಳೆಯಿಂದ ಈ ಪರಿಸ್ಥಿತಿ ಉಂಟಾಗಿದೆ. ಅಕಾಲಿಕ ಮಳೆಯಿಂದ 4.27 ಹೆಕ್ಟೇರ್ ಬೆಳೆ ನಾಶವಾಗಿದೆ ಎಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ. ಹಳಿಯಾಳ ತಾಲ್ಲೂಕಿನಲ್ಲಿ ಒಟ್ಟು 6,200 ಹೆಕ್ಟರ್ ಜಮೀನಿನಲ್ಲಿ ಭತ್ತ ಬೆಳೆಸಲಾಗಿದ್ದು, ಕಳೆದ 15 ದಿನಗಳಿಂದ ಮಳೆ ಗಾಳಿಯಿಂದ ಭತ್ತದ ಬೆಳೆ ನೆಲಕ್ಕುರುಳಿದೆ.

‘ಉತ್ತಮ ಬೆಳೆ ಬಂದಿದ್ದರೂ ಮಳೆ ಆಗಿದ್ದರಿಂದ ಗದ್ದೆಯಲ್ಲಿ ಮಳೆನೀರು ನಿಂತು ಭತ್ತದ ಬೆಳೆ ಹಾನಿಯಾಗಿದೆ’ ಎಂದು ಖಾಮಡೊಳ್ಳಿ ಗ್ರಾಮದ ತುಕಾರಾಮ ಬಿಷ್ಟೇಕರ ಹೇಳಿದರು.

ಅಂಕೋಲಾ ತಾಲ್ಲೂಕಿನಲ್ಲಿಯೂ ಕೊಯ್ಲಿಗೆ ಬಂದ ಭತ್ತದ ಬೆಳೆ ನೆಲಕಚ್ಚಿ ರೈತರು ಕಂಗಾಲಾಗುವಂತೆ ಮಾಡಿದೆ. ಕಟಾವು ಮಾಡಲು ಸ್ಥಳೀಯ ಕೂಲಿಕಾರರ ಕೊರತೆ ಒಂದೆಡೆಯಾದರೆ, ಸಣ್ಣಮಟ್ಟದ ರೈತರಿಗೆ ಯಂತ್ರಗಳನ್ನು ತರಿಸಿ ಕಟಾವು ಮಾಡುವುದು ಹೊರೆಯಾಗುತ್ತಿದೆ. ಜನಪ್ರತಿನಿಧಿಗಳಾಗಲಿ, ಅಧಿಕಾರಿಗ ಳಾಗಲಿ ಜಮೀನುಗಳಿಗೆ ಭೇಟಿ ನೀಡಿ ಸರಿಯಾಗಿ ಬೆಳೆಹಾನಿ ಸಮೀಕ್ಷೆ ನಡೆಸಿಲ್ಲ ಎಂಬುದು ರೈತ ಜಗದೀಶ್ ಭಾವಿಕೇರಿ ದೂರು.

ಕುಮಟಾದಲ್ಲಿಯೂ ಅಕಾಲಿಕ ಮಳೆ ಬೆಳೆದು ನಿಂತ ಭತ್ತದ ಫಸಲು ನಾಶ ಮಾಡಿದೆ. ಮಳೆಗೆ ಹೆದರಿ ಬೆಳೆದು ನಿಂತ ಭತ್ತ ಕಟಾವು ಮಾಡದಿದ್ದರೆ ಭತ್ತ ಗದ್ದೆಯಲ್ಲೇ ಉದುರಿ ಹೋಗುತ್ತದೆ. ಕಟಾವು ಮಾಡಿದರೆ ಅದನ್ನು ಬೇರೆಡೆ ಸಾಗಿಸಿ ಗೊಣಬೆ ಹಾಕುವುದಕ್ಕೂ ಮಳೆ ಬಿಡುತ್ತಿಲ್ಲ ಎನ್ನುತ್ತಾರೆ ವನ್ನಳ್ಳಿಯ ಕೃಷಿಕ ಬಾಬು ನಾಯ್ಕ. ಸಿದ್ದಾಪುರ ತಾಲ್ಲೂಕಿನಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದ್ದು ಭತ್ತ ಮತ್ತು ಅಡಿಕೆ ಬೆಳೆಗಾರರಿಗೆ ಶಾಪವಾಗಿ ಪರಿಣಮಿಸಿದೆ. ಭತ್ತದ ನಾಟಿಯ ಸಂದರ್ಭದಲ್ಲಿ ವಿಪರೀತ ಮಳೆಯಾದ್ದರಿಂದ ನಾಟಿ ಕಾರ್ಯ ವಿಳಂಬವಾಗಿದೆ. ಇದರಿಂದ ಇಳುವರಿ ಕುಂಠಿತವಾಗುವ ನಿರೀಕ್ಷೆ ಇದೆ. ಪುನಃ ಮಳೆಯಾದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎನ್ನುತ್ತಾರೆ ತಾಲ್ಲೂಕಿನ ದಾಸನಗದ್ದೆ ರೈತ ಹನುಮಂತ ಗೌಡ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ರವಿ ಸೂರಿ, ಎಂ.ಜಿ.ನಾಯ್ಕ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ಮೋಹನ ನಾಯ್ಕ, ಜ್ಞಾನೇಶ್ವರ ದೇಸಾಯಿ, ಸುಜಯ್ ಭಟ್, ಅಜಿತ್ ನಾಯಕ.

ಒದ್ದೆಯಾದ ಗದ್ದೆಯಲ್ಲಿ ಓಡದ ಯಂತ್ರ

ಮುಂಡಗೋಡ ತಾಲ್ಲೂಕಿನಲ್ಲಿ ಗೋವಿನಜೋಳ ಬೆಳೆದ ರೈತರು ಹಾನಿ ಅನುಭವಿಸಿದ್ದಾರೆ. ಅಲ್ಪಸ್ವಲ್ಪ ಕೈಗೆ ಬಂದ ಬೆಳೆಯನ್ನು ಒಣಗಿಸಲು ಮಳೆ ಅಡ್ಡಿಯಾಗಿದೆ. ಕೊಯ್ಲಿಗೆ ಬಂದಿರುವ ಭತ್ತವನ್ನು ಕಟಾವು ಮಾಡಲು ಮಳೆ ಅಡ್ಡಿಯಾಗಿದೆ. ಹಲವೆಡೆ ಭತ್ತದ ಗದ್ದೆಗಳು ಹಸಿಯಾಗಿರುವುದರಿಂದ, ಭತ್ತ ಕೊಯ್ಲು ಮಾಡುವ ಯಂತ್ರಗಳು ಗದ್ದೆಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ.

‘ಮಳೆಗೆ ಜೋಳದ ಕಾಳುಗಳು ಹಸಿಯಾಗಿದ್ದು ದರ ಕುಸಿದಿದೆ. ಅತಿಯಾದ ಮಳೆಯಿಂದ ಇಳುವರಿ ಕುಂಠಿತಗೊಂಡಿತ್ತು. ಈಗ, ರಾಶಿ ಮಾಡಲು ಹಾಕಿದ್ದ ಗೋವಿನಜೋಳ ಮಳೆಗೆ ಸಿಲುಕಿ ಮತ್ತಷ್ಟು ಹಾನಿ ಅನುಭವಿಸುವಂತಾಗಿದೆ’ ಎಂದು ರೈತ ಷಣ್ಮುಖ ಹೊಸಮನಿ ಹೇಳಿದರು.

‘ವಿಮೆ ಪರಿಹಾರ ನೀಡಲಿ’

ಜೊಯಿಡಾ ತಾಲ್ಲೂಕಿನಲ್ಲಿ ಸುಮಾರು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು ಕೆಲವು ಭಾಗಗಳಲ್ಲಿ ಭತ್ತ ಕಟಾವಿಗೆ ಬಂದಿದ್ದು, ಮಳೆಗೆ ಕೆಲವು ಭಾಗಗಳಲ್ಲಿ ಬೆಳೆದು ನಿಂತ ಭತ್ತದ ತೆನೆಗಳು ನೆಲಕಚ್ಚುತ್ತಿವೆ. ಗುಂದ, ಉಡಸಾ ಶಿವಪುರ, ನಂದಿಗದ್ದೆ, ಪ್ರಧಾನಿ ಭಾಗದಲ್ಲಿ ಅಡಿಕೆಗೆ ಕೊಳೆರೋಗ ಕಾಣಿಸಿಕೊಂಡಿದ್ದು ಮಳೆಗೆ ಅಡಿಕೆ ಉದುರಿ ಬಿಳುತ್ತಿದೆ.

‘ಅಕಾಲಿಕ ಮಳೆ ಸುರಿದಿದೆ. ಕಾಡು ಪ್ರಾಣಿಗಳ ಹಾವಳಿಯೂ ಇದೆ. ಇದನ್ನು ಪ್ರಕೃತಿ ವಿಕೋಪ ಎಂದು ಪರಿಗಣಿಸಿ ವಿಮೆ ಕಂಪನಿಗಳು ಪರಿಹಾರ ನೀಡಬೇಕು’ ಎನ್ನುತ್ತಾರೆ ಕುಂಬಾರವಾಡದ ರೈತ ಸುರೇಶ್ ಗಾವಡಾ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ರವಿ ಸೂರಿ, ಎಂ.ಜಿ.ನಾಯ್ಕ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ಮೋಹನ ನಾಯ್ಕ, ಜ್ಞಾನೇಶ್ವರ ದೇಸಾಯಿ, ಸುಜಯ್ ಭಟ್, ಅಜಿತ್ ನಾಯಕ.