ADVERTISEMENT

ಶಿರಸಿ | ಕೆಡಿಸಿಸಿ ಬ್ಯಾಂಕ್: ₹25.11 ಕೋಟಿ ಲಾಭ

ಮೊದಲ ಬಾರಿಗೆ ಅನುತ್ಪಾದಕ ಆಸ್ತಿ ಪ್ರಮಾಣ ಶೇ 0.94ಕ್ಕೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 4:33 IST
Last Updated 17 ಸೆಪ್ಟೆಂಬರ್ 2025, 4:33 IST
ಶಿವರಾಮ ಹೆಬ್ಬಾರ
ಶಿವರಾಮ ಹೆಬ್ಬಾರ   

ಶಿರಸಿ: ಶತಮಾನದ ಇತಿಹಾಸವಿರುವ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ 2024- 25ನೇ ಸಾಲಿನಲ್ಲಿ ಮೊದಲ ಬಾರಿಗೆ ಅನುತ್ಪಾದಕ ಆಸ್ತಿ ಪ್ರಮಾಣವನ್ನು ಶೇ 0.94ಕ್ಕೆ ಇಳಿಸಿಕೊಳ್ಳುವ ಮೂಲಕ ₹25.11 ಕೋಟಿ ನಿವ್ವಳ ಲಾಭ ಗಳಿಸಿದೆ.

ನಗರದ ಕೆಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಶಿವರಾಮ ಹೆಬ್ಬಾರ, ‘ಬ್ಯಾಂಕ್‍ನ ಶೇರು ಬಂಡವಾಳ ಕಳೆದ ಐದು ವರ್ಷಗಳಲ್ಲಿ ₹131.28 ಕೋಟಿಗಳಿಂದ ₹1145.11 ಕೋಟಿಗೆ, ನಿಧಿಗಳು ₹324.08 ಕೋಟಿಗಳಿಂದ ₹351.44 ಕೋಟಿಗೆ ಹಾಗೂ ಠೇವುಗಳು ₹3,330.41 ಕೋಟಿಗಳಿಂದ ₹3,569.45 ಕೋಟಿಗೆ ಏರಿಕೆಯಾಗಿದೆ. ಒಟ್ಟೂ ಆದಾಯ ₹375.32 ಕೋಟಿ ಆಗಿದೆ. ₹3,280.62 ಕೋಟಿ ಸಾಲ ಬಾಕಿ ಇದೆ. ದುಡಿಯುವ ಬಂಡವಾಳ ₹4,929.41 ಕೋಟಿ ತಲುಪಿದೆ’ ಎಂದರು. 

‘ಬ್ಯಾಂಕ್ ಪ್ರಾಥಮಿಕ ಸಹಕಾರ ಸಂಘಗಳ ಮೂಲಕ ರೈತರಿಗೆ ಎಲ್ಲಾ ವಿಧದ ಕೃಷಿ ಸಾಲ ಪೂರೈಸುತ್ತಿದ್ದು, 19 ವರ್ಷಗಳಿಂದ ನಬಾರ್ಡ್ ಮಾರ್ಗಸೂಚಿ ಮೇರೆಗೆ ಕೃಷಿ ಭೂಮಿ ಖರೀದಿ ಬಗ್ಗೆ ವ್ಯವಸಾಯ ಸಾಲದಡಿ ಮಾಧ್ಯಮಿಕ ಸಾಲ ನೀಡಲಾಗುತ್ತಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ವಿಮಾ ವ್ಯಾಪ್ತಿಗೆ ಜಿಲ್ಲೆಯ 38,766 ರೈತರ 51,799 ಎಕರೆ 30 ಗುಂಟೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಗೆ 45,298 ರೈತರ 49,665 ಎಕರೆ 7 ಗುಂಟೆ ಕ್ಷೇತ್ರ ಒಳಪಟ್ಟಿದೆ ಎಂದು ತಿಳಿಸಿದರು.

ADVERTISEMENT

‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಸಂಬಂಧಿಸಿದಂತೆ ₹41.04 ಕೋಟಿ ವಿಮಾ ರಕಂ ಈವರೆಗೆ ನೇರವಾಗಿ ರೈತರ ಆಧಾರ್ ಲಿಂಕ್ ಹೊಂದಿದ ಉಳಿತಾಯ ಖಾತೆಗಳಿಗೆ ಜಮಾ ಆಗಿದ್ದು, ₹81.59 ಕೋಟಿ ಹವಾಮಾನ ಆಧಾರಿತ ಬೆಳೆ ವಿಮೆ ಜಮಾ ಆಗಿದೆ’ ಎಂದರು. 

‘ಬ್ಯಾಂಕಿನಿಂದ 2023-24 ನೇ ಸಾಲಿನಲ್ಲಿ ₹2910.26 ಕೋಟಿ ಸಾಲ ವಿತರಿಸಲಾಗಿದೆ. ಅದರಲ್ಲಿ 2024 ಮಾರ್ಚ 31ಕ್ಕೆ ಸಹಕಾರ ಸಂಘಗಳಿಂದ ₹1,704.90 ಕೋಟಿ ಸಾಲ ಬರಬೇಕಿದ್ದು, ₹1,575.72 ಕೊಟಿ ಇತರರಿಂದ ಬರತಕ್ಕ ಬಾಕಿಯಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ, ನಬಾರ್ಡ ಸೂಚಿಸಿದ ಮಾರ್ಗದರ್ಶಿಯಂತೆ ಸ್ವ ಸಹಾಯ ಸಂಘಗಳ ಸ್ಥಾಪನೆ, ಈ ಯೋಜನೆ ಅಡಿಯಲ್ಲಿ ಸಾಲ ನೀಡಿಕೆ ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಆದ್ಯತೆ ನೀಡಿದೆ. ಒಟ್ಟೂ 5,512 ಸ್ವ ಸಹಾಯ ಸಂಘಗಳಿದ್ದು, 6,41,014 ಸದಸ್ಯರಿದ್ದಾರೆ. ₹1,315.20 ಕೋಟಿ ಠೇವಣಿ ಇದೆ. ₹1,739.72 ಕೋಟಿ ಸಾಲ ವಿತರಣೆ ಮಾಡಲಾಗಿದೆ’ ಎಂದರು.  

ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕರಾದ ಜಿ.ಆರ್.ಹೆಗಡೆ ಸೋಂದಾ , ಎಲ್.ಟಿ.ಪಾಟೀಲ, ಕೃಷ್ಣ ದೇಸಾಯಿ, ರಾಮಕೃಷ್ಣ ಹೆಗಡೆ ಕಡವೆ, ತಿಮ್ಮಯ್ಯ ಹೆಗಡೆ, ಗಜಾನನ ಪೈ, ವಿಶ್ವನಾಥ ಭಟ್, ಪ್ರಮೋದ ಧವಳೆ, ಪ್ರಕಾಶ ಗುನಗಿ, ಬಾಬು ಸುಂಕೇರಿ, ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ ಇದ್ದರು.  

ರೈತರ ಉಪಯೋಗಕ್ಕಾಗಿ ವಿವಿಧ ಸಾಲ ಯೋಜನೆ ಜಾರಿ ಮಾಡಿದ್ದು ಅದರ ಪ್ರಯೋಜನ ಪಡೆದವರು ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಮಾಡಿದರೆ ಆರ್ಥಿಕ ಸಂಸ್ಥೆಯ ಉಳಿವಿಗೆ ಸಹಕಾರಿ ಆಗುತ್ತದೆ
ಶಿವರಾಮ ಹೆಬ್ಬಾರ ಬ್ಯಾಂಕ್ ಅಧ್ಯಕ್ಷ

ಸಾಲ ಸೌಲಭ್ಯ 

‘ಕೆಡಿಸಿಸಿ ಬ್ಯಾಂಕಿನಿಂದ ಕೃಷಿಭೂಮಿ ಖರೀದಿಗೆ 128 ಗ್ರಾಹಕರಿಗೆ ₹3163.22 ಲಕ್ಷ ಸಾಲ ಶಿಕ್ಷಣಕ್ಕಾಗಿ 128 ವಿದ್ಯಾರ್ಥಿಗಳಿಗೆ ₹968.12 ಲಕ್ಷ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆ ಅಡಿಯಲ್ಲಿ 13 ಘಟಕಗಳಿಗೆ ₹213.22 ಲಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಭಿವೃದ್ಧಿಗೆ 27 ಸಂಘಗಳಿಗೆ ₹1902.79 ಲಕ್ಷ ಹೈನುಗಾರಿಕೆ ಮೀನುಗಾರಿಕೆ ಕೋಳಿ ಸಾಕಾಣಿಕೆಗೆ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 1544 ರೈತರಿಗೆ ₹638.76 ಲಕ್ಷ ಸಾಲ ಫಾರ್ಮ ಹೌಸ್‌ಗೆ 195 ಜನರಿಗೆ ₹900.02 ಲಕ್ಷ ಸಾಲ ನೀಡಲಾಗಿದೆ’ ಎಂದು ಹೆಬ್ಬಾರ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.