ಶಿರಸಿ: ಐಟಿ–ಬಿಟಿ ಮೂಲಕ ಬೆಂಗಳೂರು ಇಡೀ ಜಗತ್ತಿನ ಗಮನ ಸೆಳೆದಿದೆ. ಆದರೆ, ಬೆಂಗಳೂರು ನಗರದ ಅಸಮತೋಲಿತ ಬೆಳವಣಿಗೆ ಆತಂಕ ಹುಟ್ಟಿಸುತ್ತಿದೆ. ಕೆಂಪೇಗೌಡರ ಆಶಯಕ್ಕೆ ತಕ್ಕಂತೆ ಈ ಮಹಾನಗರ ಅಭಿವೃದ್ಧಿ ಕಾಣಲಿ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಆಶಿಸಿದರು.
ತಾಲ್ಲೂಕು ಆಡಳಿತ, ನಗರಸಭೆ, ತಾಲ್ಲೂಕು ಪಂಚಾಯ್ತಿ ಜಂಟಿಯಾಗಿ ಗುರುವಾರ ಇಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಉದ್ಘಾಟಿಸಿ, ಅವರು ಮಾತನಾಡಿದರು. ಉತ್ತಮ ಆಡಳಿತದ ಅನುಕರಣೆಯಿಂದ ವಿಶೇಷ ಸಾಧನೆ ಸಾಧ್ಯ ಎಂಬುದನ್ನು ಬೆಂಗಳೂರು ಕಟ್ಟುವ ಮೂಲಕ ಕೆಂಪೇಗೌಡ ತೋರಿಸಿಕೊಟ್ಟಿದ್ದಾರೆ. ಬೆಂಗಳೂರನ್ನು ಮಾದರಿ ನಗರವನ್ನಾಗಿ ಮಾಡಲು ಕೆಂಪೇಗೌಡರ ಕೊಡುಗೆ ಅನುಪಮವಾಗಿದೆ. ಒಳ್ಳೆಯ ಆಡಳಿತ ವ್ಯವಸ್ಥೆ ಎಲ್ಲಿಯೇ ಇದ್ದರೂ ಅದನ್ನು ಅಳವಡಿಸಿಕೊಳ್ಳಬೇಕು ಎಂಬುದಕ್ಕೆ ಕೆಂಪೇಗೌಡರ ಬೆಂಗಳೂರು ನಿರ್ಮಾಣ ಸಾಕ್ಷಿ. ವಿಜಯನಗರದ ಆಡಳಿತ ವ್ಯವಸ್ಥೆಯಿಂದ ಪ್ರಭಾವಿತರಾಗಿದ್ದ ಅವರು, ಅದನ್ನೇ ಮಾದರಿಯಾಗಿಸಿಕೊಂಡು ಬೆಂಗಳೂರು ಕಟ್ಟುವ ಕಾರ್ಯ ಮಾಡಿದ್ದರು. ಇದರಲ್ಲಿ ಯಶಸ್ವಿಯೂ ಆಗಿದ್ದರು ಎಂದರು.
ಇಂದು ಬೆಂಗಳೂರು ಅಸಮತೋಲನದತ್ತ ಸಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ಬೆಂಗಳೂರಿನ ಸಕಾರಾತ್ಮಕ ಅಭಿವೃದ್ಧಿಗೆ ಯೋಚಿಸಬೇಕು ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ದೊಡ್ಮನಿ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ ಇದ್ದರು.
ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಸ್ವಾಗತಿಸಿದರು. ಶ್ರೀಧರ ಹೆಗಡೆ ನಿರೂಪಿಸಿದರು.
ಜಯಂತಿಯಲ್ಲಿ ಬೆರಳೆಣಿಕೆಯಷ್ಟು ಜನರಿದ್ದರು. ಅದರಲ್ಲಿ ಹೆಚ್ಚಿನವರು ಕಂದಾಯ ಇಲಾಖೆ ಸಿಬ್ಬಂದಿಯಾಗಿದ್ದರು. ಉಳಿದ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಅನುಪಸ್ಥಿತಿಯನ್ನು ಗುರುತಿಸಿದ ಶಾಸಕರು, ಕಾರ್ಯಕ್ರಮದ ಪೂರ್ವದಲ್ಲಿ ತಹಶೀಲ್ದಾರರ ಜೊತೆ ಚರ್ಚಿಸಿ, ಜಯಂತಿಯನ್ನು ಶಾಲೆಗಳಲ್ಲಿ ಆಚರಿಸುವ ಕುರಿತಂತೆ ಯೋಚಿಸಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.