ಕುಮಟಾ: ಅಘನಾಶಿನಿ ನದಿ ಹಿನ್ನೀರಿನ ತಾಲ್ಲೂಕಿನ ಮಾಣಿಕಟ್ಟಾ ಗಜನಿಯಲ್ಲಿ ಒಂದು ತಿಂಗಳ ಹಿಂದೆ ರೈತರು ಸಾಮೂಹಿಕ ಬಿತ್ತನೆ ಮಾಡಿದ್ದ ಕಗ್ಗ ಭತ್ತದ ಬೀಜ ಮೊಳಕೆಯೊಡೆದು ಹಸಿರಾಗಿದೆ.
ಗಜನಿಯ ಹತ್ತು ಎಕರೆ ಪ್ರದೇಶದಲ್ಲಿ ಮಾಣಿಕಟ್ಟಾ ಕಗ್ಗ ಬೆಳೆಗಾರ ಸಂಘದ ಸದಸ್ಯರು ಸುಮಾರು 20 ಕ್ವಿಂಟಾಲ್ ಬೀಜ ಬಿತ್ತನೆ ಮಾಡಿದ್ದರು. ಮಳೆ ಕಡಿಮೆಯಾಗಿ ಗಜನಿ ಕೋಡಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ಹಸಿರಾದ ಭತ್ತದ ಸಸಿಗಳು ಎದ್ದು ಕಾಣುತ್ತಿವೆ.
‘ಕಗ್ಗ ಸಸಿ ಉಪ್ಪು ನೀರಿನಲ್ಲೂ ಬೆಳೆಯುವ ಸಾಮರ್ಥ್ಯ ಹೊಂದಿದ ನೈಸರ್ಗಿಕ ಭತ್ತದ ತಳಿ. ಇಷ್ಟು ದಿನ ಗಜನಿ ನೀರಿನಲ್ಲಿ ಮುಳುಗಿತ್ತು. ನಿರಂತರ ಮಳೆ ಸುರಿದು ಗಜನಿಯಲ್ಲಿ ನೆರೆ ನಿಂತರೆ ಭತ್ತದ ಸಸಿಗಳು ಕೊಳೆತು ಹೋಗುವ ಸಾಧ್ಯತೆ ಹೆಚ್ಚು. ಸಾಧಾರಣ ಮಳೆಯಾದರೆ ಇಳುವರಿ ಬರುತ್ತದೆ. ಕಗ್ಗ ಭತ್ತದ ಬೀಜವನ್ನು ಬಿತ್ತನೆ ಮಾಡಿದ ನಂತರ ಅದಕ್ಕೆ ಗೊಬ್ಬರ, ಔಷಧಿ ಬಳಸದೆ ಅದು ನೈಸರ್ಗಿಕವಾಗಿ ಬೆಳೆಯುತ್ತದೆ’ ಎಂದು ಮಾಣಿಕಟ್ಟಾ ಕಗ್ಗ ಭತ್ತ ಬೆಳೆಗಾರರ ಸಂಘದ ಕಾರ್ಯದರ್ಶಿ ಶ್ರೀಧರ ಪೈ ಮಾಹಿತಿ ನೀಡಿದರು.
‘ಬೆಳೆದ ನಂತರ ನೀರಿನಲ್ಲಿರುವ ತೆನೆಯನ್ನು ದೋಣಿಯಲ್ಲಿ ತೆರಳಿ ಕತ್ತರಿಸಿಕೊಂಡು ಬಂದು, ಅದರ ತೆನೆಯ ಬುಡ ಹಾಗೂ ಕಾಂಡವನ್ನು ಮೀನು, ಸಿಗಡಿಗೆ ಆಹಾರವಾಗಿ ಬಿಡಲಾಗುವುದು. ನಶಿಸಿ ಹೋಗುತ್ತಿರುವ ಕಗ್ಗ ಭತ್ತ ತಳಿ ಉಳಿಸಲು ಸಂಘದ ವತಿಯಿಂದ ಕಡ್ಡಾಯವಾಗಿ ಸಾಮೂಹಿತ ಬಿತ್ತನೆ ಮಾಡುತ್ತೇವೆ. ನೆರೆಯಿಂದ ಬೆಳೆ ಉಳಿದರೆ ತೆನೆಯ ಕಾಳನ್ನು ನೀರು ಕಾಗೆ ಹಿಂಡು ತಿಂದು ಹಾಳು ಮಾಡುತ್ತವೆೆ. ರೈತರು ಹಾನಿ ಅನುಭವಿಸಿದರೂ ಬಿತ್ತನೆ ಕಾರ್ಯ ಬಿಟ್ಟಿಲ್ಲ. ಸಾಮೂಹಿಕ ಬಿತ್ತನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ಸದಸ್ಯರಿಗೆ ₹1 ಸಾವಿರ ದಂಡ ವಿಧಿಸುವ ಪದ್ಧತಿ ಹಿಂದಿನಿಂದಲೂ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.