ಕುಮಟಾ: ಕೋವಿಡ್ ಸೋಂಕು ಪೀಡಿತರಿಗೆ ಅನುಕೂಲವಾಗುವಂತೆ ಸ್ವಂತ ಖರ್ಚಿನಲ್ಲಿ ತಾಲ್ಲೂಕಿನಲ್ಲಿ ಆಂಬುಲೆನ್ಸ್ ಸೇವೆ ಆರಂಭಿಸಲಾಗುವುದು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ತಾಲ್ಲೂಕು ಆಸ್ಪತ್ರೆಯ ಹೊರ ಆವರಣದಲ್ಲಿ 18 ವರ್ಷಕ್ಕಿಂತ ಮೇಲಿನವರಿಗೆ ಕೋವಿಡ್ ಲಸಿಕೆ ಹಾಕುವ ಸಲುವಾಗಿ ಕೈಗೊಂಡಿರುವ ಸೌಲಭ್ಯಗಳನ್ನು ಭಾನುವಾರ ಪರಿಶೀಲಿಸಿ ಅವರು ಮಾತನಾಡಿದರು.
‘ತಾಲ್ಲೂಕಿನ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ತುರ್ತಾಗಿ ಕೋವಿಡ್ಗೆ ಸಂಬಂಧಿಸಿದವರನ್ನು ಕರೆ ತರಲು, ತುರ್ತು ಚಿಕಿತ್ಸೆ ಅಥವಾ ಸಿ.ಟಿ ಸ್ಕ್ಯಾನಿಂಗ್ಗಾಗಿ ದೂರದ ಆಸ್ಪತ್ರೆಗೆ ಹೋಗಬೇಕಾದವರಿಗೆ ಇದನ್ನು ಉಚಿತವಾಗಿ ನೀಡಲಾಗುವುದು. ಸೋಮವಾರ ಬೆಳಿಗ್ಗೆ 10.30ಕ್ಕೆ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಔಪಚಾರಿಕವಾಗಿ ಉದ್ಘಾಟಿಸಲಾಗುವುದು’ ಎಂದು ತಿಳಿಸಿದರು.
‘ಕಳೆದ ವರ್ಷ ತಾಲ್ಲೂಕು ಆಸ್ಪತ್ರೆಯಲ್ಲಿ ಇಬ್ಬರು ಸ್ಟಾಫ್ ನರ್ಸ್ಗಳ ಕೊರತೆ ಉಂಟಾದಾಗ ನಾನೇ ನೇಮಕ ಮಾಡಿದ್ದೆ. ಎರಡು ತಿಂಗಳ ಮಟ್ಟಿಗೆ ನಾನೇ ಸಂಬಳ ಕೊಡುವುದಾಗಿ ಭರವಸೆ ನೀಡಿದ್ದೆ. ಆದರೆ, ಅವರ ಉತ್ತಮ ಸೇವೆ ನೋಡಿ ಆಸ್ಪತ್ರೆಯವರು ಅವರ ಸೇವೆಯನ್ನು ಒಂದು ವರ್ಷದವರೆಗೆ ಮುಂದುವರಿಸಿದ್ದಾರೆ. ಅವರಿಗೆ ನಾನೇ ಸಂಬಳ ನೀಡುತ್ತಿದ್ದೇನೆ. ಏಪ್ರಿಲ್ನಿಂದ ಸರ್ಕಾರದಿಂದ ಹೊರಗುತ್ತಿಗೆ ಮೂಲಕ ಅವರಿಗೆ ಸಂಬಳ ವ್ಯವಸ್ಥೆ ಮಾಡಲಾಗುವುದು’ ಎಂದರು.
ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.