ADVERTISEMENT

ಶಿರಸಿ | ಸೊಪ್ಪಿನ ಬೆಟ್ಟ; ಬದಲಾಗದ ‘ಬ’ ಖರಾಬ್ ಪಟ್ಟ

ನಾಲ್ಕು ವರ್ಷಗಳಿಂದ ಹೋರಾಟ ನಡೆದರೂ ಫಲವಿಲ್ಲ

ರಾಜೇಂದ್ರ ಹೆಗಡೆ
Published 20 ಸೆಪ್ಟೆಂಬರ್ 2025, 5:02 IST
Last Updated 20 ಸೆಪ್ಟೆಂಬರ್ 2025, 5:02 IST
ಶಿರಸಿ ತಾಲ್ಲೂಕಿನಲ್ಲಿರುವ ಬೆಟ್ಟ ಭೂಮಿ
ಶಿರಸಿ ತಾಲ್ಲೂಕಿನಲ್ಲಿರುವ ಬೆಟ್ಟ ಭೂಮಿ   

ಶಿರಸಿ: ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ತಾಲ್ಲೂಕುಗಳ ರೈತರ ಆಸ್ತಿ, ಸೊಪ್ಪಿನ ಬೆಟ್ಟಗಳನ್ನು ‘ಬ’ ಖರಾಬ್ ಪಟ್ಟಿಯಲ್ಲಿ ಸೇರಿಸಿ ಹಲವು ವರ್ಷಗಳೇ ಕಳೆದಿವೆ. ಇದನ್ನು ಸರಿಪಡಿಸಿ, ರೈತರ ಆತಂಕ ಹೋಗಲಾಡಿಸುವ ಯತ್ನ ನಾಲ್ಕು ವರ್ಷಗಳಿಂದ ನಡೆದಿದ್ದರೂ ಇದುವರೆಗೂ ಯಾವುದೇ ಬೆಳವಣಿಗೆ ಕಂಡಿಲ್ಲ.

ಅಡಿಕೆ ತೋಟಗಳ ಸುತ್ತಮುತ್ತಲ ಬೆಟ್ಟ ಭೂಮಿ ರೈತರ ಆಸ್ತಿ. ಅಡಿಕೆ ತೋಟಗಳ ಕೃಷಿಗಾಗಿ ಬ್ರಿಟಿಷ್ ಸರ್ಕಾರ ಕೆನರಾ ಪ್ರಿವಿಲೇಜ್ ಆ್ಯಕ್ಟ್ ಮೂಲಕ ಈ ಭೂಮಿಯನ್ನು ಬಳಕೆಗಾಗಿ ರೈತರಿಗೆ ಬಿಟ್ಟುಕೊಟ್ಟಿತ್ತು. ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಮುಂಬೈ ಸರ್ಕಾರದ ನಿರ್ಣಯದಲ್ಲಿ ಸೊಪ್ಪಿನ ಬೆಟ್ಟ ಹಾಗೂ ಜಿಲ್ಲೆಯ ಕೃಷಿಯೊಂದಿಗೆ ಅವಿನಾಭಾವ ಸಂಬಂಧವಿದೆ. ಹೀಗಾಗಿ, ಈ ಭೂಮಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದೂ ಉಲ್ಲೇಖವಿತ್ತು ಎನ್ನುತ್ತಾರೆ ಬೆಟ್ಟ ಭೂಮಿ ಹೋರಾಟಗಾರರು.

‘2012ರ ವೇಳೆ ಇಲಾಖೆಗಳ ಕಣ್ತಪ್ಪಿನಿಂದಾಗಿ ಬೆಟ್ಟದ ಪಹಣಿಯ ಕಾಲಂ ನಂ.3ರಲ್ಲಿ ‘ಬ’ ಖರಾಬ್ ಎಂದು ತಪ್ಪಾಗಿ ಗುರುತಿಸಿದ್ದು, 9ನೇ ಕಾಲಂನಲ್ಲಿ ಕ್ಷೇತ್ರವನ್ನು ಶೂನ್ಯಗೊಳಿಸಿ ನಮೂದಿಸಲಾಗಿದೆ. ಇದರಿಂದ ರೈತರು ಈ ಭೂಮಿಯನ್ನು ಕಳೆದುಕೊಳ್ಳುವ ಆತಂಕವಿದೆ’ ಎಂಬುದು ಬೆಟ್ಟ ಬಳಕೆದಾರರ ಅಭಿಪ್ರಾಯ. 

ADVERTISEMENT

‘ಕಂದಾಯ ಇಲಾಖೆಯು ಸೊಪ್ಪಿನ ಬೆಟ್ಟವನ್ನು ‘ಅ’ ಖರಾಬ್ ಪಟ್ಟಿಯಲ್ಲಿ ಮರು ಸೇರ್ಪಡೆಗೊಳಿಸಲು ವಿವಿಧ ದಾಖಲೆಗಳನ್ನು ಕೇಳುತ್ತಿದೆ. 2012ರ ಮುನ್ನ ಪಹಣಿ ಒದಗಿಸಿ ಅದರಲ್ಲಿ ಸೂಕ್ತ ದಾಖಲೆಗಳನ್ನು ರೈತರು ಸಲ್ಲಿಸಿದ್ದರೂ ಅದನ್ನು ಕಂದಾಯ ಇಲಾಖೆ ಪರಿಗಣಿಸಿಲ್ಲ. ಕೆನರಾ ಪ್ರಿವಿಲೇಜ್ ಆ್ಯಕ್ಟ್ ಮೂಲಕ ರೈತರು ಸೊಪ್ಪಿನ ಬೆಟ್ಟ ತಮಗೆ ಬಂದ ವಿಧಾನದ ಬಗ್ಗೆಯೂ ದಾಖಲೆ ಸಲ್ಲಿಸಿದ್ದಾರೆ. ಬ್ರಿಟಿಷ್ ಸರ್ಕಾರದ ಅಂದಿನ ಆದೇಶದಲ್ಲಿ ಕೆಲ ವಾಕ್ಯಗಳು ಮರಾಠಿಯಲ್ಲಿರುವ ಕಾರಣ ಆ ದಾಖಲೆಗಳನ್ನೂ ಸಲ್ಲಿಸಲು ಕೇಳಿದೆ. ಈಗಾಗಲೇ ಹಲವಾರು ಬಾರಿ ಈ ದಾಖಲೆಗಾಗಿ ನಾವು ಮುಂಬೈಗೆ ತೆರಳಿದ್ದರೂ ಲಭ್ಯವಾಗಿಲ್ಲ’ ಎಂದು ಬೆಟ್ಟ ಭೂಮಿ ಹೋರಾಟಗಾರರು ಹೇಳುತ್ತಾರೆ. 

ಬೇಕಾದ ದಾಖಲೆ ಒದಗಿಸಿ ಹಾಗೂ ಹೋರಾಟ ತೀವ್ರಗೊಳಿಸುವ ಮೂಲಕ ಸೊಪ್ಪಿನ ಬೆಟ್ಟವನ್ನು ಮತ್ತೆ ‘ಅ’ ಖರಾಬ ಪಟ್ಟಿಗೆ ಸೇರಿಸಲು ಶ್ರಮಿಸಲಾಗುತ್ತಿದೆ
ರಾಮಕೃಷ್ಣ ಹೆಗಡೆ ಕಡವೆ ಸೊಪ್ಪಿನ ಬೆಟ್ಟ ಹೋರಾಟ ಸಮಿತಿ ಅಧ್ಯಕ್ಷ

ಹಕ್ಕು ಕಳೆದುಕೊಳ್ಳುವ ಆತಂಕ

‘ಬ’ ಖರಾಬ್ ಭೂಮಿ ಎಂದರೆ ಅದು ಸಾರ್ವಜನಿಕ ಆಸ್ತಿ ಎಂದು ಪರಿಗಣಿಸಲ್ಪಡುತ್ತದೆ. ಅಂದರೆ ಸಾರ್ವಜನಿಕರಿಗೆ ಓಡಾಡುವ ಸಲುವಾಗಿ ರಸ್ತೆ ದನಗಳು ಓಡಾಡುವ ದಾರಿ ಹಾಗೂ ಸಾರ್ವಜನಿಕರಿಗೆ ಸೇರಿದ ಸ್ವತ್ತು ಎಂಬ ಅರ್ಥ ಮೂಡಿಸುತ್ತದೆ. ಆದರೆ ‘ಅ’ ಖರಾಬ‌ ರೈತರ ಕೃಷಿ ಭೂಮಿಯ ಸುತ್ತಮುತ್ತಲಿನ ಪ್ರದೇಶ ಎಂದು ಗುರುತಿಸಿಕೊಳ್ಳುತ್ತದೆ. ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರಮಾಣದಲ್ಲಿ ಈ ಭೂಮಿ ಇದೆ. ಈ ಭೂಮಿಗೆ ಬಳಕೆದಾರರಿಂದ ತೆರಿಗೆ ಕೂಡ ಪಡೆಯಲಾಗುತ್ತಿದೆ. ಬ ಖರಾಬು ಎಂದು ಬೆಟ್ಟ ಕ್ಷೇತ್ರವನ್ನು ಗುರುತಿಸಿದರೆ ಇದರ ಬಳಕೆದಾರ ರೈತರು ತಮ್ಮ ಹಕ್ಕು ಕಳೆದುಕೊಳ್ಳಬೇಕಾಗಬಹುದು’ ಎಂದು ಸೊಪ್ಪಿನ ಬೆಟ್ಟ ಹೋರಾಟ ಸಮಿತಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಆತಂಕ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.