ADVERTISEMENT

ಉತ್ತರ ಕನ್ನಡ | ನೆಲ ಬಿಟ್ಟು ಏಳದ ಗೋವಿನಜೋಳ

ಸಸಿ ನಾಶಪಡಿಸಿ, ಮರು ಬಿತ್ತನೆಗೆ ಮುಂದಾದ ಅನ್ನದಾತ

​ಶಾಂತೇಶ ಬೆನಕನಕೊಪ್ಪ
Published 15 ಜುಲೈ 2025, 5:59 IST
Last Updated 15 ಜುಲೈ 2025, 5:59 IST
ಮುಂಡಗೋಡ ತಾಲ್ಲೂಕಿನ ಚವಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಯೊಂದರಲ್ಲಿ ಬೆಳೆಯನ್ನು ಟ್ರ್ಯಾಕ್ಟರ್‌ನಿಂದ ಸ್ವಚ್ಛ ಮಾಡಿ, ಪುನಃ ಬಿತ್ತನೆಗೆ ಅಣಿ ಮಾಡಿಕೊಳ್ಳುತ್ತಿರುವುದು
ಮುಂಡಗೋಡ ತಾಲ್ಲೂಕಿನ ಚವಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಯೊಂದರಲ್ಲಿ ಬೆಳೆಯನ್ನು ಟ್ರ್ಯಾಕ್ಟರ್‌ನಿಂದ ಸ್ವಚ್ಛ ಮಾಡಿ, ಪುನಃ ಬಿತ್ತನೆಗೆ ಅಣಿ ಮಾಡಿಕೊಳ್ಳುತ್ತಿರುವುದು   

ಮುಂಡಗೋಡ: ಮಳೆಯ ಏರಿಳಿತದಿಂದ ಅರೆಮಲೆನಾಡು ಪ್ರದೇಶವಾಗಿರುವ ತಾಲ್ಲೂಕಿನಲ್ಲಿ ಈ ಸಲ ಗೋವಿನಜೋಳ ನೆಲಕಚ್ಚಿದೆ. ಅತಿಯಾದ ಮಳೆಯಿಂದ ಬೆಳವಣಿಗೆ ಕುಂಠಿತಗೊಂಡು, ಜೌಳು ಹಿಡಿದಿದೆ. ಬೆಳೆಯ ಜೊತೆಗೆ ಹುಲುಸಾಗಿ ಕಳೆಯೂ ಬೆಳೆದಿದ್ದು, ಕಳೆಬೆಳೆಯ ಮಿಶ್ರಣವು ಪರ್ಯಾಯ ಬಿತ್ತನೆಯ ಅನಿವಾರ್ಯತೆ ಸೃಷ್ಟಿಸಿದೆ.

ಸುಮಾರು ಎರಡು ತಿಂಗಳ ಅವಧಿಯ ಗೋವಿನಜೋಳ ನೆಲ ಬಿಟ್ಟು ಏಳದಿರುವುದರಿಂದ, ಸಸಿಗಳನ್ನು ನಾಶಪಡಿಸಿ ಮರು ಬಿತ್ತನೆ ನಡೆಸಲು ರೈತರು ಮುಂದಾಗಿದ್ದಾರೆ.

ತಾಲ್ಲೂಕಿನಲ್ಲಿ ಸುಮಾರು 4,500 ಹೆಕ್ಟೇರ್‌ ಪ್ರದೇಶದಲ್ಲಿ ಗೋವಿನಜೋಳ ಬಿತ್ತನೆಯ ಗುರಿ ಹೊಂದಲಾಗಿತ್ತು. ಕಳೆದ ಸಲಕ್ಕಿಂತ ಈ ಸಲ ತುಸು ಹೆಚ್ಚು ರೈತರು ಗೋವಿನಜೋಳ ಬಿತ್ತಿದ್ದರು. ಬಿಡುವಿಲ್ಲದೇ ಸುರಿದ ಮಳೆಯು, ಗೋವಿನಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡಿದೆ. ಕೈ ಹಿಡಿಯದ ಬೆಳೆಯನ್ನು ನೋಡಲಾರದೇ ರೈತರು, ಟ್ರ್ಯಾಕ್ಟರ್‌ಗಳಿಂದ ಬೆಳೆಯನ್ನು ಮಣ್ಣಿನಲ್ಲಿ ಹೊರಳಾಡಿಸಿ, ಪುನಃ ಬಿತ್ತನೆಗೆ ಗದ್ದೆಯನ್ನು ಅಣಿಗೊಳಿಸುತ್ತಿದ್ದಾರೆ.

ADVERTISEMENT

ಚವಡಳ್ಳಿ, ಮಲವಳ್ಳಿ, ಲಕ್ಕೊಳ್ಳಿ, ಕ್ಯಾಸನಕೇರಿ, ಇಂದೂರ, ಹುನಗುಂದ, ಕಾತೂರ, ಮುಡಸಾಲಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬಿತ್ತಿದ ಗೋವಿನಜೋಳವನ್ನು ನಾಶಪಡಿಸಿ, ಪುನಃ ಬಿತ್ತನೆ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಕೆಲವು ರೈತರು ಗೋವಿನಜೋಳ ಬೆಳೆಗೆ ಕಳೆನಾಶಕ ಸಿಂಪಡಿಸಿ, ಕಳೆಬೆಳೆ ಎರಡನ್ನೂ ಸ್ವಚ್ಛಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಗದ್ದೆಯಲ್ಲಿ ನೀರು ನಿಲ್ಲಿಸಿ, ನಾಟಿ ಭತ್ತ ಮಾಡಲು ಬಹುತೇಕ ರೈತರು ಮುಂದಾಗಿದ್ದಾರೆ.

‘ಸತತ ಮಳೆಯಿಂದ ಗೋವಿನಜೋಳ ಸಂಪೂರ್ಣ ಹಾನಿಯಾಗಿದೆ. ಕೊಳೆರೋಗವು ಬೆಳೆಯನ್ನು ಬಾಧಿಸಿದೆ. ಕಳೆದ ವರ್ಷವೂ ಅತಿಯಾದ ಮಳೆಯು ತೆನೆ ಬಿಡುವ ಸಮಯದಲ್ಲಿ ಬೆಳೆ ಹಾನಿ ಮಾಡಿತ್ತು. ಆದರೆ, ಈ ವರ್ಷ ಬಿತ್ತಿದ 15 ರಿಂದ 20 ದಿನಗಳ ನಂತರ ಆರಂಭಗೊಂಡ ಮಳೆಯು, ತಿಂಗಳು ಕಾಲ ಸುರಿದು, ಸುದೀರ್ಘ ಬಿಡುವು ನೀಡದಿರುವುದರಿಂದ ಬೆಳೆ ಕೈಕೊಟ್ಟಿದೆ. ನಾಟಿಭತ್ತದ ಮಡಿ ಮಾಡಿ, ಸಸಿಗಳನ್ನು ನೆಡುವ ಇಲ್ಲವೇ ಹದಗೊಂಡ ಗದ್ದೆಯಲ್ಲಿ ಭತ್ತದ ಬೀಜಗಳನ್ನು ಹಾಕುವ ಕಾರ್ಯ ನಡೆಯುತ್ತಿದೆ’ ಎಂದು ರೈತ ಶಂಭುಲಿಂಗ ಕ್ಯಾಸನಕೇರಿ ಹೇಳಿದರು.

ಅತಿಯಾದ ಮಳೆಯಿಂದ ಕೆಲವೆಡೆ ಗೋವಿನಜೋಳ ಬೆಳೆಗೆ ಹಾನಿಯಾಗಿದೆ. ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಬೆಳೆ ಹಾನಿಯ ಕುರಿತು ಜಂಟಿ ಸಮೀಕ್ಷೆ ಕೈಗೊಳ್ಳಲಾಗುವುದು
ಕೆ.ಎನ್‌.ಮಹಾರೆಡ್ಡಿ ಸಹಾಯಕ ಕೃಷಿ ನಿರ್ದೇಶಕ

ಪರ್ಯಾಯ ಬೆಳೆಗೆ ಮುನ್ನ ಸಮೀಕ್ಷೆ ನಡೆಸಿ ‘ನಿರಂತರ ಮಳೆಯಿಂದ ತಾಲ್ಲೂಕಿನಾದ್ಯಂತ ಗೋವಿನಜೋಳ ಸಂಪೂರ್ಣ ಹಾನಿಯಾಗಿದೆ. ಸರ್ಕಾರ ಕೂಡಲೇ ಸಮೀಕ್ಷೆ ಮಾಡಿ. ಬೆಳೆಹಾನಿ ಆಗಿರುವ ರೈತರಿಗೆ ಪರಿಹಾರ ನೀಡಬೇಕು. ಬೆಳೆಹಾನಿಯಿಂದ ಅತಂತ್ರರಾಗಿರುವ ರೈತರು ಪರ್ಯಾಯ ಬೆಳೆ ಬೆಳೆಯುವ ಮುನ್ನವೇ ಅಧಿಕಾರಿಗಳು ಸಮೀಕ್ಷೆ ಮಾಡಬೇಕು’ ಎಂದು ರಾಜ್ಯ ಅನ್ನದಾತ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಚಿದಾನಂದ ಹರಿಜನ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.