ADVERTISEMENT

ಮನ್ ಕಿ ಬಾತ್‌ನಲ್ಲಿ ಶಿರಸಿ ರೈತ ಮಧುಕೇಶ್ವರ ಹೆಗಡೆಯನ್ನು ಕೊಂಡಾಡಿದ ಪ್ರಧಾನಿ ಮೋದಿ

ಮಧುಕೇಶ್ವರ ಹೆಗಡೆ ಜೇನುಕೃಷಿ ಸಾಧನೆ ವಿವರಿಸಿದ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 7:42 IST
Last Updated 31 ಜುಲೈ 2022, 7:42 IST
ಜೇನುತುಪ್ಪದಿಂದ ತಾವು ತಯಾರಿಸಿದ ಉತ್ಪನ್ನಗಳ ಜತೆ ಕೃಷಿಕ ಮಧುಕೇಶ್ವರ ಹೆಗಡೆ.
ಜೇನುತುಪ್ಪದಿಂದ ತಾವು ತಯಾರಿಸಿದ ಉತ್ಪನ್ನಗಳ ಜತೆ ಕೃಷಿಕ ಮಧುಕೇಶ್ವರ ಹೆಗಡೆ.   

ಶಿರಸಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ನಡೆಸಿದ 91ನೇ ಆವೃತ್ತಿಯ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಶಿರಸಿ ತಾಲ್ಲೂಕಿನ ತಾರಗೋಡ ಗ್ರಾಮದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರನ್ನು ಶ್ಲಾಘಿಸಿದರು.

ದೇಶದ ವಿವಿಧೆಡೆಯ ಜೇನು ಕೃಷಿಕರು, ಆಯುರ್ವೇದಿಕ್ ಗಿಡಮೂಲಿಕೆ ಬೆಳೆಗಾರರನ್ನು ಶ್ಲಾಘಿಸಿದ ಪ್ರಧಾನಿ ಮಧುಕೇಶ್ವರ ಅವರ ಜೇನು ಕೃಷಿ ಸಾಧನೆಯನ್ನು ವಿಶೇಷವಾಗಿ ಕೊಂಡಾಡಿದರು.

‘50 ಜೇನು ಕಾಲೊನಿಗೆ ಸರ್ಕಾರದ ಸಹಾಯಧನ ಸೌಲಭ್ಯ ಪಡೆದಿದ್ದ ಮಧುಕೇಶ್ವರ ಹೆಗಡೆ ಈಗ 800 ಜೇನು ಕಾಲೊನಿ ಪೋಷಿಸುತ್ತಿದ್ದಾರೆ. ಹಲವಾರು ಟನ್ ಜೇನುತುಪ್ಪ ಉತ್ಪಾದಿಸುವ ಅವರು ನೇರಳೆ ಜೇನುತುಪ್ಪ, ತುಳಸಿ ಜೇನುತುಪ್ಪ, ಆಮ್ಲ ಜೇನುತುಪ್ಪ ಸೇರಿದಂತೆ ವನಸ್ಪತಿ ಜೇನು ತುಪ್ಪಗಳನ್ನೂ ಉತ್ಪಾದಿಸುವುದು ವಿಶೇಷವೆನಿಸಿದೆ. ಜೇನು ಕೃಷಿಯ ಸಾಧನೆ ಅವರ ಹೆಸರನ್ನು ಪ್ರಸಿದ್ಧಿಗೆ ತಂದಿದೆ’ ಎಂದು ಮೋದಿ ಬಣ್ಣಿಸಿದರು.

ಪ್ರಧಾನಿ ಹೆಸರು ಉಲ್ಲೇಖಿಸಿರುವ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಧುಕೇಶ್ವರ ಹೆಗಡೆ, ‘ಜೇನುಕೃಷಿ ಪ್ರಧಾನ ಮಂತ್ರಿಯವರು ನನ್ನನ್ನು ಗುರುತಿಸುವಂತೆ ಮಾಡಿದೆ. ಮೋದಿಯವರಂತಹ ಪ್ರಧಾನಿ ನನ್ನ ಹೆಸರನ್ನು ಉಲ್ಲೇಖಿಸಬಹುದು ಎಂಬ ನಿರೀಕ್ಷೆ ಇರಲಿಲ್ಲ. ನನಗೆ ಅಚ್ಚರಿಯ ಜತೆ ಸಂತಸವಾಯಿತು’ ಎಂದರು.

‘ಮೋದಿ ಆಡಳಿತಕ್ಕೆ ಬಂದ ಮೇಲೆ ಬೆಳೆ ದ್ವಿಗುಣ ನೀತಿಯ ಮೂಲಕ ಜೇನು ಕೃಷಿಗೆ ನೀಡಿದ ಪ್ರೋತ್ಸಾಹವೇ ನನ್ನಂತ ಹಲವು ರೈತರು ಸಾಧನೆ ಮಾಡಲು ಪ್ರೇರಣೆಯಾಗಿದೆ’ ಎಂದೂ ತಿಳಿಸಿದರು.

ಮಧುಕೇಶ್ವರ ಹೆಗಡೆ ಅವರು ಕಳೆದ 35 ವರ್ಷಗಳಿಂದ ಜೇನು ಕೃಷಿಯಲ್ಲಿ ತೊಡಗಿದ್ದಾರೆ. ವಾರ್ಷಿಕ 1500ಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ ಜೇನು ಬೆಳೆಸುತ್ತಿದ್ದಾರೆ. ವಾರ್ಷಿಕ ಸರಾಸರಿ 4.5 ಟನ್ ಜೇನುತುಪ್ಪ ಉತ್ಪಾದಿಸುತ್ತಿದ್ದಾರೆ. ಅಳಿವಿನಂಚಿನಲ್ಲಿರುವ ವನಸ್ಪತಿ ಗಿಡಗಳನ್ನೂ ಮನೆ ಸುತ್ತಮುತ್ತ ಬೆಳೆಸುತ್ತಿರುವುದು ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.