ADVERTISEMENT

ಜಾತ್ರಾ ಗದ್ದುಗೆ ಏರಲಿದ್ದಾಳೆ ಮಲೆನಾಡ ಅಧಿದೇವತೆ

ಶಿರಸಿ ಮಾರಿಕಾಂಬಾ ರಥೋತ್ಸವಕ್ಕೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 5:52 IST
Last Updated 25 ಫೆಬ್ರುವರಿ 2026, 5:52 IST
ಮಾರಿಕಾಂಬಾ ರಥದ ಕಲಶ ಪ್ರತಿಷ್ಠೆ ಕಾರ್ಯ 
ಮಾರಿಕಾಂಬಾ ರಥದ ಕಲಶ ಪ್ರತಿಷ್ಠೆ ಕಾರ್ಯ    

ಶಿರಸಿ: ರಥಾರೂಢಳಾಗಿ ಬರುವ ಶಿರಸಿಯ ಅಧಿದೇವತೆ ಮಾರಿಕಾಂಬೆ ಇಲ್ಲಿನ ಬಿಡಕಿಬೈಲಿನ ಜಾತ್ರಾ ಮಂಟಪಕ್ಕೆ ಫೆ.25 ರಂದು ಪ್ರತಿಷ್ಠಾಪನೆಗೊಳ್ಳಲಿದ್ದಾಳೆ. ಈ ಮೂಲಕ ಜಾತ್ರಾ ಮಹೋತ್ಸವಕ್ಕೆ ಹೊಸಕಳೆ ಬರಲಿದೆ.

ಮೈತುಂಬ ಆಭರಣಗಳನ್ನು ಹೊದ್ದ ಏಳು ಅಡಿ ಎತ್ತರದ ದೇವಿಯ ಮೂಲಮೂರ್ತಿಯೇ ದೇವಸ್ಥಾನದ ಗರ್ಭಗುಡಿಯಿಂದ ಬಂದು ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಳ್ಳುವುದು ಜಾತ್ರೆಯ ವಿಶೇಷ. ಸಹಸ್ರಾರು ಭಕ್ತರ ಜಯಘೋಷ, ಆವೇಶ ಭರಿತರಾಗಿ ಹರಕೆ ಒಪ್ಪಿಸುವವರ ನಡುವೆ ದೇವಿ ಕುಳಿತ ರಥ ಬರುವ ದೃಶ್ಯ ಕಣ್ತುಂಬಿಕೊಳ್ಳಲು ಜನ ಕಾತರರಾಗಿದ್ದಾರೆ. ಮಾರಿಕಾಂಬೆ ಹಾನಗಲ್‌ ಮೂಲದವಳು ಎಂಬ ಪ್ರತೀತಿ ಇದೆ. ಊರಿನ ಮಗಳ ವಿವಾಹ ಮಹೋತ್ಸವ ಕಣ್ತುಂಬಿಕೊಳ್ಳಲು ಹಾನಗಲ್‌, ಹಾವೇರಿ ಭಾಗದ ಸಹಸ್ರಾರು ಲಂಬಾಣಿಗರು ನಗರದಲ್ಲಿ ಬೀಡುಬಿಟ್ಟಿದ್ದಾರೆ.

ಮಂಗಳವಾರ ಅಮ್ಮನ ಗುಡಿಯಲ್ಲಿ ಹಬ್ಬದ ವಾತಾವರಣ. ನಸುಕಿನಲ್ಲಿ ಕಲಶ ಪೂಜೆ, ಮಧ್ಯಾಹ್ನ ಮರ್ಕಿ–ದುರ್ಗಿ ದೇವಾಲಯಕ್ಕೆ ಪೂಜೆ ಸಲ್ಲಿಸಿದ ನಂತರ ಈ ಕಲಶವನ್ನು ತಂದು ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ದೇವಾಲಯದ ಬಾಬುದಾರರು, ಆಡಳಿತ ಸಮಿತಿಯವರು ರಥಕ್ಕೆ ಪೂಜೆ ಸಲ್ಲಿಸಿದರು. ನಂತರ ಬಡಿಗೇರರು, ಉಪ್ಪಾರರು, ಮರಾಠಿಗರು, ಆಚಾರಿ ಗಳು ರಥಕ್ಕೆ ಪತಾಕೆ ಜೋಡಿಸಿದರು.

ADVERTISEMENT

ನಡುರಾತ್ರಿ ದೇವಿಯ ಕಲ್ಯಾಣ ಪ್ರತಿಷ್ಠೆ, ಕಲ್ಯಾಣ ಮಹೋತ್ಸವ. ತವರು ಮನೆ ಕುಟುಂಬದ ನಾಡಿಗರು ವಧುವನ್ನು ಧಾರೆಯೆರೆದು ಕೊಡುತ್ತಾರೆ. ನವವಧುವನ್ನು ಗಂಡನ ಮನೆಗೆ ಕಳುಹಿಸುವ ಸಂಪ್ರದಾಯವೇ ರಥೋತ್ಸವ. ರಕ್ತ ಚಂದನ ವರ್ಣದ ಅಷ್ಟಭುಜಧಾರಿ, ಏಳು ಅಡಿ ಎತ್ತರದ ಮಾರಿಕಾಂಬೆ ಸಕಲ ಆಭರಣಗಳನ್ನು ತೊಟ್ಟು ಕಲ್ಯಾಣಿಯಾಗಿ, ರಥದಲ್ಲಿ ಕುಳಿತು ಕಿಕ್ಕಿರಿದು ಸೇರುವ ಭಕ್ತರ ನಡುವೆ ನಿಧಾನವಾಗಿ ಬಳುಕುತ್ತ ಸಾಗುವುದನ್ನು ಕಣ್ತುಂಬಿಕೊಳ್ಳುವುದೇ ಅಪೂರ್ವ ಕ್ಷಣ.

ಬುಧವಾರ ಮುಂಜಾನೆ ಸೂರ್ಯ ಭುವಿಯನ್ನು ಸ್ಪರ್ಶಿಸುವ ಮುನ್ನವೇ, ಮಾರಿಕಾಂಬಾ ದೇಗುಲದ ರಥಬೀದಿಯ ತುಂಬ ಜನದಟ್ಟಣಿ. ಸಾತ್ವಿಕ ದೇವಿ ಮಾರಿಕಾಂಬಾ ಮೆರವಣಿಗೆಯಲ್ಲಿ ಸಾಗುವಾಗ ಜನರು ದುಡ್ಡು, ಬಾಳೆಹಣ್ಣನ್ನು ರಥಕ್ಕೆ ಎಸೆದು ಕೃತಾರ್ಥರಾದರೆ, ಲಂಬಾಣಿ ಮಹಿಳೆಯರು ಸೋಬಾನೆ ಪದ ಹೇಳುತ್ತ ದೇವಿಗೆ ಸೇವೆ ಸಲ್ಲಿಸುವರು. ದೇವಿಯನ್ನು ಆವ್ಹಾಹನೆ ಮಾಡಿಕೊಂಡ ಮಹಿಳೆಯರು ಆವೇಷಭರಿತರಾಗಿ ಕುಣಿಯುತ್ತಾರೆ.

ಫೆ.26ರ ಬೆಳಿಗ್ಗೆ 5 ಗಂಟೆಯಿಂದ ದೇವಿಗೆ ಹಣ್ಣು–ಕಾಯಿ, ಉಡಿ ತುಂಬುವ, ತುಲಾಭಾರ ಸೇವೆ ಆರಂಭವಾಗಲಿವೆ. ಮರ್ಕಿ–ದುರ್ಗಿ ದೇವಾಲಯದಲ್ಲಿ ಬೇವಿನ ಉಡುಗೆ ಸೇವೆಗಳು ನಡೆಯುತ್ತವೆ. ದೇವಾಲಯದ ಹಿಂಭಾಗದ ಮಾರಿಗುಡಿ ಶಾಲೆಯ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಯುತ್ತದೆ.

ಪೇಟೆಯ ಚಿತ್ರಣ ಬದಲು:  ಜಾತ್ರಾ ಮಹೋತ್ಸವದ ಎರಡನೇ ದಿನ ಶೋಭಾಯಾತ್ರೆ ಮೂಲಕ ದೇವಿ ಬಿಡಕಿಬೈಲಿನ ಗದ್ದುಗೆಗೆ ಬಂದು ಕುಳಿತ ನಂತರ ಪೇಟೆಯ ಚಿತ್ರಣ ಬದಲಾಗುತ್ತದೆ. ಗದ್ದುಗೆಯ ಸುತ್ತಲಿನ ಮಳಿಗೆಗಳಲ್ಲಿ ವ್ಯಾಪಾರದ ಭರಾಟೆ ಜೋರಾಗುತ್ತದೆ. ಜನರು ಗುಂಪುಗುಂಪಾಗಿ ಬಂದು ದೇವಿ ದರ್ಶನ ಪಡೆದು ಜಾತ್ರೆಯ ಸಡಗರ ಆಸ್ವಾದಿಸುತ್ತಾರೆ. ಈಗಾಗಲೆ ಬಿಡಕಿಬೈಲ್ ಶಿವಾಜಿಚೌಕ ನಟರಾಜ ರಸ್ತೆ ಹುಬ್ಬಳ್ಳಿ ರಸ್ತೆ ಕಡೆಗಳಲ್ಲಿ ಮಳಿಗೆಗಳು ತೆರೆದಿವೆ. ತಿನಿಸುಗಳು ಆಟಿಕೆಗಳ ಅಂಗಡಿಗಳು ಗ್ರಾಹಕರನ್ನು ಸೆಳೆಯಲು ಸಿದ್ಧಗೊಂಡಿವೆ. ಅಮ್ಯೂಸಮೆಂಟ್ ಪಾರ್ಕ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.