ಭಟ್ಕಳ: ಭಟ್ಕಳ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಮುಂದಾದಲ್ಲಿ ಸಚಿವನಾಗಿ ನಾನು ಎಲ್ಲ ರೀತಿಯ ಸಹಕಾರ ನೀಡುವುದಾಗಿ ರಾಜ್ಯ ಮೀನುಗಾರಿಕೆ ಹಾಗೂ ಬಂದರು ಒಳನಾಡು ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.
ಪಟ್ಟಣದ ನವಾಯತ್ ಕಾಲೊನಿಯಲ್ಲಿ ತಂಝೀಂ ವತಿಯಿಂದ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ನಾವು ಎಷ್ಟು ಮುನ್ನಡೆಯುತ್ತೇವೋ ಅಷ್ಟು ನಾವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢರಾಗುತ್ತೇವೆ. ಭಟ್ಕಳದಲ್ಲಿ ನಿಮ್ಮಿಂದ ಎಲ್.ಕೆ.ಜಿಯಿಂದ ಎಂಜಿನಿಯರಿಂಗ್ ತನಕ ಕಾಲೇಜು ಸ್ಥಾಪನೆಯಾಗಿದೆ. ಭಟ್ಕಳದಲ್ಲಿ ಒಂದೇ ಒಂದು ವೈದ್ಯಕೀಯ ಕಾಲೇಜು ಇಲ್ಲ. ಭಟ್ಕಳ ವೈದ್ಯಕೀಯ ಕಾಲೇಜು ಸ್ಥಾಪಿಸಲು ನೀವು ಮುಂದಾಗಬೇಕು ಎಂದು ನಾನು ಬಯಸುತ್ತೇನೆ. ಅದಕ್ಕೆ ಬೇಕಾಗುವ ಎಲ್ಲ ಸಹಕಾರ ನಾನು ನೀಡುವುದಾಗಿ ತಿಳಿಸಿದರು.
ಭಟ್ಕಳದಲ್ಲಿ ಐತಿಹಾಸಿಕ ಗೆಲುವಿಗೆ ತಂಝೀಂ ಸಹ ಕಾರಣವಾಗಿದೆ. ಇಲ್ಲಿನ ಸ್ಪೋರ್ಟ್ಸ ಕ್ಲಬ್ ಹುಡುಗರು ಒಂದು ರೂಪಾಯಿ ಪಡೆಯದೆ ನನ್ನ ಗೆಲುವಿಗಾಗಿ ಶ್ರಮಿಸಿದ್ದಾರೆ. ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದರು.
ಭಟ್ಕಳದಲ್ಲಿ ಎಲ್ಲರೂ ಶಾಂತಿ ಸೌಹಾರ್ಧತೆಯಿಂದ ಬಾಳಿ ಬದುಕುವಂತಹ ವಾತಾವರಣ ಖಂಡಿತ ಸೃಷ್ಠಿಯಾಗುತ್ತದೆ. ಇದರಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳುತ್ತೇನೆ ಎಂದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಭಟ್ಕಳ, ಮುರುಡೇಶ್ವರ, ಮಂಕಿ, ಶಿರಾಲಿ ಭಾಗದ ಮುಸ್ಲಿಂ ಸಂಘಟನೆಯವರು ಸಚಿವರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು. ಭಟ್ಕಳ ತಂಝೀಂ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ, ಕಾರ್ಯದರ್ಶಿ ಅಬ್ದುಲ್ ರಕೀಬ್, ಸನಾವುಲ್ಲಾ, ಇಮ್ರಾನ ಲಂಕಾ, ಮುಹಮ್ಮದ ಸಾಧಿಕ್ ಪಿಲ್ಲೂರು, ಅಝೀಜುರೆಹಮಾನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.