ಕಾರವಾರ: ‘ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲಿ ತಕ್ಷಣದಿಂದಲೇ ದಿನದ 24 ಗಂಟೆಯೂ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ’ ಎಂದು ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.
‘ಹೆದ್ದಾರಿಯಲ್ಲಿ ಗುಡ್ಡ ಕುಸಿದ ಜಾಗವನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಜಿಲ್ಲಾಧಿಕಾರಿ ಬೆಳಿಗ್ಗೆ 6ರಿಂದ ಸಂಜೆ 6ರ ತನಕ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದ್ದರು. ಆದರೆ, ಇದರಿಂದ ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ವಾಹನಗಳು ಸಾಲಾಗಿ ನಿಲ್ಲುತ್ತಿವೆ. ಜನರಿಗೆ ಬಹಳ ತೊಂದರೆಯಾಗುತ್ತಿದೆ. ಕರಾವಳಿ ಮತ್ತು ಬಯಲುಸೀಮೆಯ ನಡುವೆ ಸಂಪರ್ಕಕ್ಕೂ ಕಷ್ಟವಾಗುತ್ತಿದೆ’
ಎಂದರು.
‘ಮೂರು ಬೆಂಗಾವಲು ವಾಹನಗಳ ಜೊತೆ ಬರುವ ನಾನು ಅರಬೈಲ್ ಘಟ್ಟ ದಾಟಲು ತಾಸುಗಟ್ಟಲೆ ಸಮಯ ಬೇಕಾಯಿತು. ಅಂಥದ್ದರಲ್ಲಿ ಜನಸಾಮಾನ್ಯರ ಪಾಡೇನು ಎಂದು ಊಹಿಸಲೂ ಕಷ್ಟ’ ಎಂದರು.
‘ರಸ್ತೆಯ ಎರಡೂ ಬದಿಗಳಲ್ಲಿ ನಾಕಾಬಂದಿ ಹಾಕಿ ಒಂದು ಸಲಕ್ಕೆ ತಲಾ 10 ವಾಹನಗಳಂತೆ ಸಂಚರಿಸಲು ಅವಕಾಶ ನೀಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಅಲ್ಲಿಗೆ ಬೇಕಾಗಿರುವ ಬೆಳಕು ಮತ್ತಿತರ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ತಿಳಿಸಲಾಗಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.