ಭಟ್ಕಳ: ಅಲ್ಪ ಸಂಖ್ಯಾತರು ಮೋದಿ ಅವರನ್ನು ವಿರೋಧಿಸುವುದಕ್ಕೆ ಕಾರಣವೇ ಇಲ್ಲ. ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದ್ದು, ಓಟಿಗಾಗಿ ಅಲ್ಪ ಸಂಖ್ಯಾತರನ್ನು ಬಳಸಿಕೊಳ್ಳುತ್ತಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಮಾವಳ್ಳಿಯ ಓಲಗ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಬೈಲೂರು, ಮಾವಳ್ಳಿ-1, ಮಾವಳ್ಳಿ-2, ಕಾಯ್ಕಿಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಧಾನಿ ಮೋದಿಯವರು ಯಾವುದೇ ಸೌಲಭ್ಯ ಘೋಷಿಸುವಾಗ ದೇಶದ 140 ಕೋಟಿ ಜನತೆಯನ್ನು ಉದ್ದೇಶಿಸಿ ಘೋಷಣೆ ಮಾಡುತ್ತಾರೆ. ಅದರಲ್ಲಿ ಜಾತಿ, ಜನಾಂಗ, ಪಕ್ಷ, ಪಂಗಡಗಳನ್ನು ನೋಡಿಲ್ಲ, ಎಂದೂ ಬೇಧ, ಭಾವ ಮಾಡುವುದಿಲ್ಲ. ದೇಶದಲ್ಲಿ ಬಡವರಿಗಾಗಿ ನೀಡುವ ಅಕ್ಕಿ, ಉಜ್ವಲ್ ಗ್ಯಾಸ್ ಯೋಜನೆ, ಬೇಟಿ ಬಚಾವ್, ಬೇಟಿ ಪಡಾವ್ ಯೋಜನೆ, ಕೊರೊನಾ ಸಮಯದಲ್ಲಿ ವ್ಯಾಕ್ಸಿನ್, ಜನಧನ್, ಕೃಷಿ ಸಮ್ಮಾನ್, ನೀರಿನ ಯೋಜನೆ, ಶೌಚಾಲಯ ಯೋಜನೆ, ವಿಮಾ, 5 ಲಕ್ಷದ ಉಚಿತ ಚಿಕಿತ್ಸಾ ಯೋಜನೆ ಎಲ್ಲವನ್ನೂ ಸಮಾನವಾಗಿ ನೀಡಿದ್ದಾರೆ. ಆದರೂ ಮೋದಿ ಅವರನ್ನು ವಿರೋಧಿಸುವ ಅಲ್ಪ ಸಂಖ್ಯಾತರು ಉತ್ತರಿಸಬೇಕಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ, ದೇಶದೆಲ್ಲೆಡೆಯಲ್ಲಿ ಬಿಜೆಪಿ ಕುರಿತು ಉತ್ತಮವಾದ ವಾತಾವರಣವಿದ್ದು, ರಾಜ್ಯದಲ್ಲಿಯೂ 28 ಲೋಕಸಭಾ ಕ್ಷೇತ್ರಗಳನ್ನು ಗೆಲುವು ನಿಶ್ಚಿತವಾಗಿದೆ. ನಾವು ಗೆಲುವಿನ ಮನಸ್ಥಿತಿಯಲ್ಲಿ ಪ್ರಚಾರ ಹೆಚ್ಚು ಮಾಡಬೇಕಾಗಿದೆ. ಮನೆ ಮನೆಗಳಿಗೆ ಪ್ರಚಾರ ಮಾಡುವುದು ಅತೀ ಮುಖ್ಯವಾಗಿದೆ ಎಂದರು.
ಮಾಜಿ ಶಾಸಕ ಸುನಿಲ್ ನಾಯ್ಕ, ಪಶ್ಚಿಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಕ್ಷೇತ್ರ ಉಸ್ತುವಾರಿ ಡಾ.ಜಿ.ಜಿ. ಹೆಗಡೆ ಕುಮಟಾ, ಮಂಡಳ ಅಧ್ಯಕ್ಷ ಲಕ್ಷ್ಮಿನಾರಾಯಣ ನಾಯ್ಕ, ಸುಬ್ರಾಯ ವಾಳ್ಕೆ, ಹಿರಿಯ ಮುಖಂಡ ಸುಬ್ರಾಯ ನಾಯ್ಕ ಕಾಯ್ಕಿಣಿ, ರಾಜ್ಯ ಹಿ.ವ. ಉಪಾಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಮ, ಜೆ.ಡಿ.ಎಸ್. ಅಧ್ಯಕ್ಷ ಈಶ್ವರ ನಾಯ್ಕ, ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಧನ್ಯಕುಮಾರ್ ಜೈನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.