ADVERTISEMENT

ಕುಮಟಾದಲ್ಲಿ ವಿ.ವಿ ಸ್ಥಾಪನೆಯಾಗಲಿ: ಶಾಸಕ ದಿನಕರ ಶೆಟ್ಟಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 15:43 IST
Last Updated 1 ನವೆಂಬರ್ 2021, 15:43 IST
ಕುಮಟಾದಲ್ಲಿ ಸೋಮವಾರ ನಡೆದ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಶಾಸಕ ದಿನಕರ ಶೆಟ್ಟಿ, ಉಪ ವಿಭಾಗಾಧಿಕಾರಿ ರಾಹುಲ್ ಪಾಂಡೆ ಭಾಗವಹಿಸಿದರು
ಕುಮಟಾದಲ್ಲಿ ಸೋಮವಾರ ನಡೆದ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಶಾಸಕ ದಿನಕರ ಶೆಟ್ಟಿ, ಉಪ ವಿಭಾಗಾಧಿಕಾರಿ ರಾಹುಲ್ ಪಾಂಡೆ ಭಾಗವಹಿಸಿದರು   

ಕುಮಟಾ: ‘ಕಲೆ, ಸಂಸ್ಕೃತಿ, ಸಾಹಿತ್ಯದಲ್ಲಿ ಇಷ್ಟೊಂದು ಮುಂದುವರಿದು ಬುದ್ಧಿವಂತರ ಜಿಲ್ಲೆ ಎನಿಸಿಕೊಂಡರೂ ಇಲ್ಲಿ ಇದುವರೆಗೆ ಒಂದು ವಿಶ್ವವಿದ್ಯಾಲಯ ಸ್ಥಾಪಿಸಲು ಸಾಧ್ಯವಾಗಿಲ್ಲ’ ಎಂದು ಶಾಸಕ ದಿನಕರ ಶೆಟ್ಟಿ ವಿಷಾದಿಸಿದರು.

ಪಟ್ಟಣದ ಮಹಾತ್ಮಾಗಾಂಧಿ ಮೈದಾನಲ್ಲಿ ಸೋಮವಾರ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಉಪ ವಿಭಾಗಾಧಿಕಾರಿ ರಾಹುಲ್ ಪಾಂಡೆ, ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ, ತಹಶೀಲ್ದಾರ್ ವಿವೇಕ ಶೇಣ್ವಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಟಿ. ನಾಯ್ಕ, ತಾಲ್ಲೂಕು ಪಂಚಾಯ್ತಿ ಆಡಳಿತಾಧಿಕಾರಿ ಈಶ್ವರ ನಾಯ್ಕ ಇದ್ದರು.

ADVERTISEMENT

ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ ಕ್ರಮವಾಗಿ ಮೊದಲ ಮೂರು ಬಹುಮಾನ ಗಳಿಸಿದವು. ಶಾಲಾ ವಿದ್ಯಾರ್ಥಿಗಳು ಹಾಡಿದ ಕನ್ನಡ ಗೀತೆಗಳು ಗಮನ ಸೆಳೆದವು.

‘ಯಾವ ವಿ.ವಿ ಎಂಬ ಚರ್ಚೆ’

ಕಾರವಾರ: ‘ಉತ್ತರ ಕನ್ನಡದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಎಂಬ ವಿಷಯವು ಈಗಾಗಲೇ ವಿಧಾನಸೌಧದ ಹೊರಗೆ ಮತ್ತು ಒಳಗೂ ಪ್ರಸ್ತಾಪವಾಗಿದೆ. ಕುಮಟಾ ಶಾಸಕ ದಿನಕರ ಶೆಟ್ಟಿ ವಿಶೇಷವಾಗಿ ಗಮನ ಸೆಳೆದಿದ್ದಾರೆ’ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾವ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂಬ ಬಗ್ಗೆ ಚರ್ಚೆ ಆಗಬೇಕಿದೆ. ಕರಾವಳಿಯ ಅನೇಕರು ಮೀನುಗಾರಿಕೆ ವಿ.ವಿ ಬೇಕು ಎನ್ನುತ್ತಿದ್ದಾರೆ. ಪಂಪನ ವಿಶೇಷ ಅಧ್ಯಯನ ಪೀಠವು ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಸ್ಥಾಪನೆಯಾಗಬೇಕು ಎಂಬ ಒತ್ತಾಯವೂ ಇದೆ. ಅದರ ಬಗ್ಗೆ ಗಮನ ಹರಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.