ADVERTISEMENT

ಉತ್ತರ ಕನ್ನಡ: ಜಿಲ್ಲೆಯಲ್ಲಿ 6.19 ಕೋಟಿ ಉಚಿತ ಟಿಕೆಟ್

ಗ್ಯಾರಂಟಿ ಯೋಜನೆಯಲ್ಲೊಂದಾದ ‘ಶಕ್ತಿ’ಗೆ ವರ್ಷ ಪೂರೈಕೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 15:35 IST
Last Updated 12 ಜುಲೈ 2024, 15:35 IST
ಕಾರವಾರದಿಂದ ಮುದಗಾಕ್ಕೆ ಪ್ರಯಾಣಿಸುವ ಬಸ್‍ನಲ್ಲಿ ಮಹಿಳಾ ಪ್ರಯಾಣಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. (ಸಂಗ್ರಹ ಚಿತ್ರ)
ಕಾರವಾರದಿಂದ ಮುದಗಾಕ್ಕೆ ಪ್ರಯಾಣಿಸುವ ಬಸ್‍ನಲ್ಲಿ ಮಹಿಳಾ ಪ್ರಯಾಣಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. (ಸಂಗ್ರಹ ಚಿತ್ರ)   

ಕಾರವಾರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ, ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾನದ ಅವಕಾಶ ಒದಗಿಸಿದ ‘ಶಕ್ತಿ’ ಯೋಜನೆಗೆ ವರ್ಷ ಪೂರೈಸಿದೆ. ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ 6.19 ಕೋಟಿ ಉಚಿತ ಟಿಕೆಟ್ ನೀಡಲಾಗಿದೆ.

ಕಳೆದ ವರ್ಷದ ಜೂನ್ 11 ರಂದು ಯೋಜನೆಗೆ ಚಾಲನೆ ದೊರೆತಿತ್ತು. ಏಳು ಸಾರಿಗೆ ಘಟಕಗಳನ್ನು ಒಳಗೊಂಡಿರುವ ಜಿಲ್ಲೆಯ ಶಿರಸಿ ವಿಭಾಗ ವ್ಯಾಪ್ತಿಯಲ್ಲಿ ಒಂದು ವರ್ಷದ ಅವಧಿಯೊಳಗೆ ಸಾವಿರಾರು ಮಹಿಳೆಯರು 6.19 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿದ್ದಾರೆ. ₹178.12 ಕೋಟಿ ಮೊತ್ತದ ಉಚಿತ ಟಿಕೆಟ್‌ಗಳನ್ನು ಮಹಿಳೆಯರಿಗೆ ವಿತರಿಸಲಾಗಿದೆ.

ಈ ಯೋಜನೆ ಜಾರಿಗೆ ಬಂದ ಬಳಿಕ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆ ಕಂಡಿದೆ. ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯೂ ದುಪ್ಪಟ್ಟಾಗಿದೆ ಎಂಬುದು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಂಕಿ–ಅಂಶಗಳು ಹೇಳುತ್ತಿವೆ.

ADVERTISEMENT

‘ಶಕ್ತಿ ಯೋಜನೆ ಜಾರಿಯಾದ ಬಳಿಕ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಅಧಿಕವಾಗಿದೆ. ಒಬ್ಬರು ಮಹಿಳೆ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಲು ಮುಂದಾದಾದರೆ ಅವರೊಂದಿಗೆ ಮಕ್ಕಳು ಹಾಗೂ ಪತಿ ಕೂಡ ಬಸ್‌ನಲ್ಲಿ ಪ್ರಯಾಣಸುತ್ತಿದ್ದು, ಇದರಿಂದ ಸಂಸ್ಥೆಯ ಆದಾಯ ಹೆಚ್ಚಳವಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿ ದಿನ ಸರಾಸರಿ 1 ಲಕ್ಷದಿಂದ 1.50 ಲಕ್ಷದಷ್ಟು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ’ ಎನ್ನುತ್ತಾರೆ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್.ಶ್ರೀನಿವಾಸ್.

‘ಶಕ್ತಿ ಯೋಜನೆ ಆರಂಭವಾದ 2023ರ ಜೂನ್ ತಿಂಗಳಿನಲ್ಲಿ 30 ಲಕ್ಷ ಮಹಿಳೆಯರು ಉಚಿತ ಪ್ರಯಾಣದ ಪ್ರಯೋಜನ ಪಡೆದಿದ್ದರು. ಈ ವರ್ಷದ ಜೂನ್ ತಿಂಗಳಿನಲ್ಲಿ ಈ ಸಂಖ್ಯೆಯು 51 ಲಕ್ಷಕ್ಕೆ ಏರಿಕೆಯಾಗಿದೆ. ಒಂದೇ ತಿಂಗಳಿನಲ್ಲಿ ₹14.62 ಕೋಟಿ ಮೊತ್ತದ ಟಿಕೆಟ್ ಖರ್ಚಾಗಿದೆ’ ಎಂದರು.

‘ಶಕ್ತಿ ಯೋಜನೆಯ ಆರಂಭಗೊಂಡ ನಂತರ ಜಿಲ್ಲೆಗೆ 2 ಪಲ್ಲಕ್ಕಿ ಬಸ್‌ಗಳು ಸೇರಿದಂತೆ ಒಟ್ಟು 67 ಹೊಸ ಬಸ್ ಮಂಜೂರಾಗಿದ್ದು, ಕಾರ್ಯಾಚರಣೆಯಲ್ಲಿ ತೊಡಗಿವೆ. ಕೆಲವು ಬಸ್‌ಗಳ ನಿಗಧಿತ ಸಂಚಾರದ ಅವಧಿ ಮುಗಿಯುತ್ತಾ ಬಂದಿದ್ದು, ಜಿಲ್ಲೆಗೆ ಕನಿಷ್ಠ ಇನ್ನೂ 100 ಹೊಸ ಬಸ್‌ಗಳ ಅಗತ್ಯವಿದೆ. ಈ ಕುರಿತು ಪ್ರಸ್ತಾವ ಸಲ್ಲಿಕೆಯಾಗಿದೆ’ ಎಂದರು.

ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಪ್ರಯಾಣಿಕರ ಸಂಖ್ಯೆಯು ಶೇ.60 ರಿಂದ ಶೇ.90ಕ್ಕೆ ಏರಿಕೆಯಾಗಿದೆ.
-ಕೆ.ಎಚ್.ಶ್ರೀನಿವಾಸ್, ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.