ADVERTISEMENT

ಹೆದ್ದಾರಿಯಲ್ಲಿ ವೈಜ್ಞಾನಿಕ ಮಾರ್ಪಾಡಿಗೆ ಸಂಸದ ಅನಂತಕುಮಾರ್ ಹೆಗಡೆ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 12:20 IST
Last Updated 13 ಜನವರಿ 2020, 12:20 IST
ಶಿರಸಿಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್‌ಬಿ ಅಧಿಕಾರಿಗಳೊಂದಿಗೆ ಚರ್ಚಿಸಿದರು
ಶಿರಸಿಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್‌ಬಿ ಅಧಿಕಾರಿಗಳೊಂದಿಗೆ ಚರ್ಚಿಸಿದರು   

ಶಿರಸಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಯ ಕುರಿತು ಸಂಸದ ಅನಂತಕುಮಾರ್ ಹೆಗಡೆ ಭಾನುವಾರ ಇಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಕಾರವಾರ ಮಾಜಾಳಿಯಿಂದ ಭಟ್ಕಳದ ಬೆಳಕೆವರೆಗೆ ಜಿಲ್ಲೆಯಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತಗಳಾಗುತ್ತಿವೆ. ಮುನ್ನೆಚ್ಚರಿಕೆಯಾಗಿ ಕೆಲವು ಕಡೆ ವೈಜ್ಞಾನಿಕ ಮಾರ್ಪಾಡು ಮಾಡಬೇಕು. ಹಾರವಾಡದಲ್ಲಿ ಸರ್ವೀಸ್ ರಸ್ತೆ ನಿರ್ಮಾಣ, ಸೀಬರ್ಡ್ ಕಾಲೊನಿಯಿಂದ ಅಂಕೋಲಾದವರೆಗೆ ಸರ್ವೀಸ್ ರಸ್ತೆ ನಿರ್ಮಾಣ, ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಕ್ರಮವಾಗಬೇಕು ಎಂದು ಸಂಸದರು ಸೂಚಿಸಿದರು.

ಅವರ್ಸಾ, ಕರ್ಕಿ, ಹಳದೀಪುರ, ಹೊನ್ನಾವರ, ಶಿರಾಲಿಗಳಲ್ಲಿ ಹೆದ್ದಾರಿ ಅಗಲವನ್ನು 30 ಮೀಟರ್‌ನಿಂದ 45 ಮೀಟರ್‌ಗೆ ಹೆಚ್ಚಿಸಬೇಕು. ಪುರವರ್ಗದಲ್ಲಿ ಹೆದ್ದಾರಿ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಬೇಕು. ಕಾರವಾರ ಕಡೆಯಿಂದ ಅಂಕೋಲಾ ಪ್ರವೇಶಿಸುವ ಭಾಗದಲ್ಲಿ ವೃತ್ತ ನಿರ್ಮಾಣ ಮಾಡಬೇಕು ಎಂದು ಅನಂತಕುಮಾರ್ ತಿಳಿಸಿದರು.

ADVERTISEMENT

ಕುಮಟಾ–ಶಿರಸಿ ರಸ್ತೆಯಲ್ಲಿ ದೀವಗಿ ಬಳಿ ಅಪಘಾತ ನಿಯಂತ್ರಿಸಲು, ಸಿಗ್ನಲ್ ಅಳವಡಿಸಬೇಕು. ಹೆಚ್ಚುವರಿ ಭೂಸ್ವಾಧೀನ ಮಾಡಿಕೊಂಡು ಶಾಶ್ವತ ರಸ್ತೆ ವಿಸ್ತರಣೆ, ತಜ್ಞರ ಅಭಿಪ್ರಾಯ ಪಡೆದು ಮೇಲ್ಸೇತುವೆ ನಿರ್ಮಾಣ ಮಾಡಿದರೆ ಸಂಚಾರ ಸುಗಮವಾಗುತ್ತದೆ. ಅಗತ್ಯವಿದ್ದಲ್ಲಿ ಅಂಡರ್ ಪಾಸ್ ನಿರ್ಮಾಣ ಸೇರಿದಂತೆ ಅವಶ್ಯ ಕಾಮಗಾರಿಗಳನ್ನು ತ್ವರಿತವಾಗಿ ಮಾಡಬೇಕು ಎಂದು ಸಂಸದರು ಹೇಳಿದಾಗ, ಅಧಿಕಾರಿಗಳು ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಸು ಮೋಹನ, ಅಧಿಕಾರಿಗಳಾದ ಕಿರಣ ಬಿಸೂರ್, ನವೀನ್, ಐಆರ್‌ಬಿ ಕಂಪನಿಯ ಮುಖ್ಯ ವ್ಯವಸ್ಥಾಪಕ ಮೋಹನದಾಸ್, ಎಸ್.ಎನ್.ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.