
ಪ್ರಾತಿನಿಧಿಕ ಚಿತ್ರ
ಮುಂಡಗೋಡ: ತಾಲ್ಲೂಕಿನ ಎಸ್ಎಸ್ಎಲ್ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ, ಶಿಕ್ಷಣ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿನೂತನ ಕ್ರಮಗಳನ್ನು ಜಾರಿ ಮಾಡಿದೆ. ಪ್ರತಿದಿನ ರಾತ್ರಿ 7ಗಂಟೆಯಿಂದ 9ಗಂಟೆವರೆಗೆ ಪಾಲಕರು ಮನೆಯಲ್ಲಿ ಟಿವಿ ಹಾಗೂ ಮೊಬೈಲ್ ಬಳಸದಂತೆ ಧ್ವನಿವರ್ಧಕದ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ತಾಲ್ಲೂಕು ಆಡಳಿತ ಕೈಗೊಂಡಿದೆ.
1ರಿಂದ 9ನೆ ತರಗತಿ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಸಮಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬಲಗೊಳಿಸಲು ಹಾಗೂ ಸಮಯ ವ್ಯರ್ಥ ಮಾಡದೇ ಮನೆಯಲ್ಲಿ ಕುಳಿತು ಓದುವಂತೆ ನೆರವಾಗಲು, ಪಾಲಕರು, ಪ್ರತಿದಿನ ರಾತ್ರಿ ಎರಡು ತಾಸುಗಳವರೆಗೆ ಟಿ.ವಿ ಬಂದ್ ಮಾಡುವುದು ಹಾಗೂ ಮೊಬೈಲ್ ಬಳಕೆಯನ್ನು ಮನೆಯಲ್ಲಿ ಮಾಡದಂತೆ ಮನವಿ ಮಾಡಲಾಗುತ್ತಿದೆ. ಮಕ್ಕಳೂ ಸಹ ಮೊಬೈಲ್ ಗೀಳಿಗೆ ಅಂಟಿಕೊಳ್ಳದಂತೆ, ಎಚ್ಚರಿಕೆ ವಹಿಸಿ, ಅವರಿಗೆ ಓದಲು ಪೂರಕ ವಾತಾವರಣ ನಿರ್ಮಿಸುವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಎಸ್ಎಸ್ಎಲ್ಸಿ ಮಕ್ಕಳ ಫಲಿತಾಂಶ ಹೆಚ್ಚಳಕ್ಕೆ ವಿನೂತನ ರೀತಿಯಲ್ಲಿ ಪ್ರೇರಣೆ ನೀಡುತ್ತಿರುವ ಗ್ರಾಮ ಪಂಚಾಯಿತಿಯವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧ್ವನಿವರ್ದಕದ ಮೂಲಕ ಜಾಗೃತಿ ಮೂಡಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆ ಮೊಬೈಲ್ ಮೂಲಕ ಮನೆಪಾಠದ ಅಭ್ಯಾಸಗಳನ್ನು ಹೆಚ್ಚೆಚ್ಚು ನೀಡುತ್ತಿರುವುದಕ್ಕೆ ಶಿಕ್ಷಕರು ಕಡಿವಾಣ ಹಾಕಬೇಕು. ಆದಷ್ಟು, ತರಗತಿಯಲ್ಲಿಯೇ ಬರೆದುಕೊಳ್ಳುವಂತೆ ಮಾಡಬೇಕು. ಇಲ್ಲವಾದರೆ, ಮನೆಪಾಠದ ನೆಪ ಮಾಡಿಯಾದರೂ, ಮಕ್ಕಳು ಮೊಬೈಲ್ ಹಿಡಿದುಕೊಂಡು ಕಾಲ ಕಳೆಯುತ್ತಾರೆ ಎಂದು ಹಲವು ಪಾಲಕರು ಹೇಳುತ್ತಾರೆ.
‘ತಾಲ್ಲೂಕಿನ ಎಸ್ಎಸ್ಎಲ್ಸಿ ಫಲಿತಾಂಶ ಹೆಚ್ಚಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿ, ಮಕ್ಕಳ ಓದಿಗೆ ಪಾಲಕರು ಸಹಕರಿಸುವಂತೆ ಮನವಿ ಮಾಡಲಾಗುತ್ತಿದೆ. ಪ್ರತಿದಿನ ಎರಡು ಗಂಟೆ ಮೊಬೈಲ್ ಬಳಕೆಯ ನಿಯಂತ್ರಣ, ಟಿವಿ ಬಂದ್ ಮಾಡಿ ಮಕ್ಕಳಿಗೆ ಓದುವಂತ ವಾತಾವರಣ ನಿರ್ಮಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಸಭೆ, ಸಮಾರಂಭಗಳು ಇದ್ದರೇ, ನಿಗದಿತ ಅವಧಿಗೆ ಧ್ವನಿವರ್ದಕ ಬಳಸಿ, ಮಕ್ಕಳ ಓದಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಲ್ಲಿ ಧ್ವನಿವ ರ್ದಕದ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕುʼ ಎಂದು ತಾಲ್ಲೂಕು ಪಂಚಾಯಿತಿ ಇಒ ಟಿ.ವೈ.ದಾಸನಕೊಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.