ಶಿರಸಿ: ‘ಸೆ.26 ರಿಂದ ನಡೆಯುವ ನವರಾತ್ರಿ ಉತ್ಸವವನ್ನು ಈ ಬಾರಿ ಮಾರಿಕಾಂಬಾ ದೇವಾಲಯದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಸ್ಪರ್ಧೆಯನ್ನೂ ಆಯೋಜಿಸಲಾಗುತ್ತಿದೆ’ ಎಂದು ದೇವಸ್ಥಾನದ ಅಧ್ಯಕ್ಷ ಆರ್.ಜಿ.ನಾಯ್ಕ ತಿಳಿಸಿದರು.
ಇಲ್ಲಿ ಮಂಗಳವಾರ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮದ ಮಾಹಿತಿ ನೀಡಿದ ಅವರು, ‘ನವರಾತ್ರಿ ಸಮಯದಲ್ಲಿ ಭಕ್ತರಿಗೆ ಪುಷ್ಪಾಲಂಕಾರ ಸೇವೆಗೆ ಅವಕಾಶ ಮಾಡಿಕೊಡಲಾಗಿದ್ದು, ದಾನಿಗಳು ಮುಂಚಿತವಾಗಿ ತಿಳಿಸಬೇಕು. ಉತ್ಸವದ ಪ್ರತಿದಿನ ಭಜನೆ, ಕೀರ್ತನೆ ಕಾರ್ಯಕ್ರಮ ನಡೆಯಲಿದೆ.ಎಸ್.ಎಸ್.ಶಿವಾನಂದ ಸ್ವಾಮಿ, ಮಂಡ್ಯದ ಮಧುಸೂಧನ ದಾಸರು, ಉಳ್ಳಾಲದ ತೋನ್ಸೆ ಪುಷ್ಕಳಕುಮಾರ, ಸಕಲೇಶಪುರದ ಶೈಲಕುಮಾರ ದಾಸ್, ಉಂಚಳ್ಳಿ ಶಂಕರ ಭಟ್, ಶಿವಶಂಕರದಾಸರು ಈ ಕಾರ್ಯಕ್ರಮ ನಡೆಸಲಿಕೊಡಲಿದ್ದಾರೆ’ ಎಂದು ವಿವರಿಸಿದರು.
‘ಕ್ರೀಡಾ ಸ್ಪರ್ಧೆಗಳು ಸೆ.22 ರಿಂದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿವೆ. ಕೊಕ್ಕೊ, ಕಬಡ್ಡಿ, ಪುರುಷರ ಮತ್ತು ಮಹಿಳೆಯರಿಗಾಗಿ ಹಗ್ಗ ಜಗ್ಗುವ ಸ್ಪರ್ಧೆ, ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆಯಲಿವೆ. 60 ವರ್ಷ ಮೇಲ್ಪಟ್ಟವರಿಗಾಗಿ ಓಟ, ಜಿಗಿತ ಸ್ಪರ್ಧೆ, ಗುಂಡು ಎಸೆತ ಮತ್ತು ನಡಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ’ ಎಂದರು.
‘ಆರತಿ ತಾಟಿನ ಸ್ಪರ್ಧೆ, ಭಕ್ತಿ ಗೀತೆ, ಚಿಕ್ಕ ಮಕ್ಕಳ ಫ್ಯಾನ್ಸಿ ಡ್ರೆಸ್, ಚಿತ್ರಕಲೆ, ಹಳ್ಳಿ ಹಾಡು, ಭಾವಗೀತೆ, ಧ್ಯಾನ ಮಾಲಿಕೆ, ಜಾನಪದ ಗುಂಪು ನೃತ್ಯ, ರಂಗವಲ್ಲಿ, ಶಾಸ್ತ್ರೀಯ ನೃತ್ಯ, ಕರಕುಶಲ ವಸ್ತುಗಳ ಪ್ರದರ್ಶನ, ಸಾಮಾನ್ಯ ಜ್ಞಾನ ಪರೀಕ್ಷೆ, ಚದುರಂಗ, ಭಗವದ್ಗೀತೆ ಕಂಠಪಾಠ ಸ್ಪರ್ಧೆ ನಡೆಯಲಿವೆ’ ಎಂದು ವಿವರಿಸಿದರು. ಉಪಾಧ್ಯಕ್ಷ ಸುಧೇಶ ಜೋಗಳೇಕರ್, ಧರ್ಮದರ್ಶಿಗಳಾದ ಶಿವಾನಂದ ಶೆಟ್ಟಿ, ವತ್ಸಲಾ ಹೆಗಡೆ, ವ್ಯವಸ್ಥಾಪಕ ಚಂದ್ರಕಾಂತ ನಾಯ್ಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.