ಶಿರಸಿ: ದೇಶದಲ್ಲಿ ಮೋದಿ ಅವರಿಗೆ ಪರ್ಯಾಯ ನಾಯಕತ್ವ ಇಲ್ಲ, ಹಾಗೆಯೇ ಉತ್ತರ ಕನ್ನಡದಲ್ಲಿ ಅನಂತಕುಮಾರ್ ಹೆಗಡೆ ಅವರಿಗೆ ಪರ್ಯಾಯವಿಲ್ಲ ಎಂದು ಬಿಜೆಪಿ ತಾರಾ ಪ್ರಚಾರಕಿ ಮಾಳವಿಕಾ ಅವಿನಾಶ್ ಹೇಳಿದರು.
ಶುಕ್ರವಾರ ಇಲ್ಲಿನ ಹಳೇ ಬಸ್ ನಿಲ್ದಾಣದ ಎದುರು ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಮೋದಿಯವರು ಪ್ರಥಮ ಬಾರಿ ಪ್ರಧಾನಿಯಾಗುವ ವೇಳೆ ಮುಂದಿನ ಚುನಾವಣೆಯ ಹೊತ್ತಿಗೆ ದೇಶದ ಸಮಗ್ರ ಅಭಿವೃದ್ಧಿಯರಿಪೋರ್ಟ್ ಕಾರ್ಡ್ ಕೊಡುವುದಾಗಿ ಹೇಳಿದ್ದರು. ಆಡಿದ ಮಾತಿನಂತೆ ಉತ್ತಮ ಆಡಳಿತ ನೀಡಿದ್ದು, ಮೋದಿ ಪರ ಮತ ಕೇಳಲು ಹೆಮ್ಮೆಯಾಗುತ್ತದೆ. ಭಾರತವನ್ನು ವಿಶ್ವಗುರು ಮಾಡಲು ಹೊರಟಿರುವ ಅವರಿಗೆ ಮತ ಯಾಚಿಸಲು ಅಳುಕು ಇಲ್ಲ’ ಎಂದರು.
ದಕ್ಷಿಣ ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಒಳ್ಳೆಯ ಫಲಿತಾಂಶ ಬರಲಿದೆ. ಉಳಿದ ಕಡೆಯೂ ಮೋದಿ ಹಾಗೂ ಬಿಜೆಪಿಯೆಡೆಗೆ ಮತದಾರರ ಪ್ರೀತಿ ಕಾಣುತ್ತಿದೆ. ಮೋದಿ ಮತ್ತೊಮ್ಮೆ ಎನ್ನುವುದು ಎಲ್ಲರ ಹೃದಯದ ಮಾತಾಗಿದೆ ಎಂದು ಹೇಳಿದರು.
ಅಭ್ಯರ್ಥಿ ಅನಂತಕುಮಾರ್ ಹೆಗಡೆ ಮಾತನಾಡಿ, ‘ಕ್ಷೇತ್ರದಲ್ಲಿನ ವಾತಾವರಣ ನೋಡುತ್ತಿದ್ದರೆ ಬಿಜೆಪಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿರುವ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ಮತದಾರರು ಮುಂದಾಗಬೇಕು’ ಎಂದರು. ಶಾಸಕ ವಿಶ್ವೇಶ್ವರ ಹೆಗಡೆ ಮಾತನಾಡಿ, ‘ದೇಶದಲ್ಲಿ ಮೋದಿ ಸರ್ಕಾರ ಮತ್ತೊಮ್ಮೆ ಬರುವುದು ಎಷ್ಟು ಸತ್ಯವೋ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಬರುವುದು ಅಷ್ಟೇ ಸತ್ಯ’ ಎಂದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ, ಕಾರ್ಯಕರ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.