ಕಾರವಾರ: ‘ಭೂ ಕುಸಿತವಾದ ಯಲ್ಲಾಪುರ ತಾಲ್ಲೂಕಿನ ಕಳಚೆ ಗ್ರಾಮದಲ್ಲಿ 26 ಮನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡುವಂಥ ಸ್ಥಿತಿಯಲ್ಲಿವೆ. 130 ಮನೆಗಳಿಗೆ ತೊಂದರೆಯಾಗಿಲ್ಲ’ ಎಂದು ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಲವರು ಜಮೀನು, ಆಸ್ತಿ ಬಿಟ್ಟು ಹೊರ ಹೋಗಲು ಸಿದ್ಧರಿಲ್ಲ.ನಾಲ್ಕೈದು ದಿನಗಳಲ್ಲಿ ಕಳಚೆಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮುಕ್ತವಾಗಿ ಚರ್ಚೆ ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.
‘ಯೋಜನೆಯಲ್ಲಿ ನಿರಾಶ್ರಿತರಿಗೆ ಜಮೀನು ಕೊಡುವುದು ಒಂದು ಭಾಗವಾದರೆ, ಸರ್ಕಾರಿ ಜಮೀನಿನ ಲಭ್ಯತೆಯೂ ಇಲ್ಲದಿರುವುದು ಮತ್ತೊಂದು ಭಾಗವಾಗಿದೆ. ಇಂಥ ದುರಂತಕ್ಕೆ ಈ ಹಿಂದೆ ಜಮೀನು ಕೊಟ್ಟಿರುವ ಉದಾಹರಣೆಗಳೂ ನಮ್ಮ ಮುಂದಿಲ್ಲ. ಇದಕ್ಕೆ ಕಾನೂನನ್ನೇ ಬದಲಾವಣೆ ಮಾಡಬೇಕಾದೀತು. ಇವುಗಳನ್ನು ಸಂಪುಟದಲ್ಲೇ ನಿರ್ಣಯ ಮಾಡಬೇಕಾಗುತ್ತದೆ’ ಎಂದರು.
‘ಗ್ರಾಮದ ಸಂಪೂರ್ಣ ಸ್ಥಳಾಂತರದ ಬಗ್ಗೆ ಅಲ್ಲಿನ ಜನರೂ ಸ್ಪಷ್ಟವಾದ ಸಾಮೂಹಿಕ ನಿರ್ಧಾರಕ್ಕೆ ಇನ್ನೂ ಬಂದಿಲ್ಲ. ಎಷ್ಟು ಜನ ಹೋಗಲು ಸಿದ್ಧರಿದ್ದಾರೆ, ಅವರಿಗೆ ಏನು ಬೇಕಾಗಿದೆ, ಅವರಿಗೆ ಪರಿಹಾರವಾಗಿ ಕೊಡಲು ಸರ್ಕಾರದ ಬಳಿ ಏನಿದೆ, ಇದಕ್ಕೆ ಕಾನೂನಿನಲ್ಲಿ ಏನು ಅವಕಾಶವಿದೆ ಎಂಬುದದ ಸಾಧಕ ಬಾಧಕ ನೋಡಬೇಕಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.