ADVERTISEMENT

ನೋಂದಾಯಿತ ಕಾರ್ಮಿಕರಿಗೆ ಕಿಟ್ ನೀಡಿಲ್ಲ

ಮಾಹಿತಿ ಹಕ್ಕಿನಲ್ಲಿ ಸ್ಪಷ್ಟಪಡಿಸಿದ ಕಾರ್ಮಿಕ ಇಲಾಖೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 13:57 IST
Last Updated 9 ಜುಲೈ 2020, 13:57 IST
ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು (ಸಾಂದರ್ಭಿಕ ಚಿತ್ರ)
ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು (ಸಾಂದರ್ಭಿಕ ಚಿತ್ರ)   

ಶಿರಸಿ: ಕೊರೊನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ನೋಂದಾಯಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಯಾವುದೇ ಆಹಾರ ಕಿಟ್ ವಿತರಣೆ ಮಾಡಿಲ್ಲ ಮತ್ತು ಈ ಬಗ್ಗೆ ಕೇಂದ್ರ ಕಾರ್ಮಿಕ ಕಚೇರಿ ಅಥವಾ ಕಾರ್ಮಿಕ ಮಂಡಳಿಯಿಂದ ಸ್ಥಳೀಯ ಇಲಾಖೆಗೆ ನಿರ್ದೇಶನ ಬಂದಿಲ್ಲ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಅವರು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗೆ, ಅಧಿಕಾರಿ ಈ ರೀತಿ ಉತ್ತರ ನೀಡಿದ್ದಾರೆ.

‘ಕಾರ್ಮಿಕ ಕಲ್ಯಾಣ ಮಂಡಳಿಯು, ಕಾರ್ಮಿಕ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಂಡಳಿಯ ಹಣವನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರದೇ ಆಹಾರ ಕಿಟ್ ವಿತರಿಸಿರುವುದು, ಕಾರ್ಮಿಕ ಇಲಾಖೆಗೂ ಮತ್ತು ಕಾರ್ಮಿಕರ ಆಹಾರ ಕಿಟ್‌ಗೂ ಸಂಬಂಧವಿಲ್ಲದೇ ವಿತರಣೆಯಾಗಿರುವುದು ಆಶ್ಚರ್ಯ’ ಎಂದು ರವೀಂದ್ರ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲಾಖೆಯಲ್ಲಿ ನೋಂದಾಯಿತ 65,371 ಸದಸ್ಯರಿದ್ದಾರೆ. ಜಿಲ್ಲಾ ಕಚೇರಿಯಿಂದ 18,528 ಹಾಗೂ ಮಂಡಳಿಯಿಂದ 9,355, ಒಟ್ಟು 27,883 ನೋಂದಾಯಿತ ಕಾರ್ಮಿಕರ ಪಟ್ಟಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಇದರ ಜೊತೆಯಲ್ಲಿ 26,389 ಕಾರ್ಮಿಕರಿಗೆ ಆಧಾರ ಸಂಖ್ಯೆ ಆಧರಿಸಿ, ನೇರವಾಗಿ ಬೆಂಗಳೂರಿನ ಮಂಡಳಿಯಿಂದ ಧನಸಹಾಯ ಜಮಾ ಮಾಡಲಾಗಿದೆ ಎಂದು ಇಲಾಖೆಯ ಮಾಹಿತಿ ನೀಡಿದೆ. ಆದರೆ, ಈ ಮಾಹಿತಿ ಹಾಗೂ ವಾಸ್ತವಿಕ ಸಂಗತಿಗೆ ಹೊಂದಾಣಿಕೆಯಾಗುತ್ತಿಲ್ಲ. 10ಸಾವಿರಕ್ಕಿಂತ ಹೆಚ್ಚು ಕಾರ್ಮಿಕರ ಖಾತೆಗೆ, ಲಾಕ್‌ಡೌನ್ ಸಂದರ್ಭದಲ್ಲಿ ಘೋಷಿಸಿದ್ದ ಧನಸಹಾಯ ಸಂದಾಯವಾಗಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.