ಶಿರಸಿ: ಚುನಾವಣೆಯಲ್ಲಿ ವಿಜಯಿಯಾದ ಮೇಲೆ ನಗರಕ್ಕೆ ಬಂದ ಅನಂತಕುಮಾರ ಹೆಗಡೆ ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಮಾರಿಕಾಂಬಾ ದೇವಾಲಯ, ನಿಲೇಕಣಿ ಗಣಪತಿ ದೇವಸ್ಥಾನ, ವೆಂಕಟರಮಣ ದೇವಾಲಯಗಳಿಗೆ ಪತ್ನಿ ಶ್ರೀರೂಪಾ ಹಾಗೂ ಕಾರ್ಯಕರ್ತರೊಂದಿಗೆ ತೆರಳಿ ಪೂಜೆ ಸಲ್ಲಿಸಿದ ಹೆಗಡೆ, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಇತಿಹಾಸದಲ್ಲಿ ಬಿಜೆಪಿ ದಾಖಲೆಯ ಗೆಲುವು ಸಾಧಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ಘಟಾನುಘಟಿಗಳು ಮಣ್ಣಾಗಿ ಹೋಗಿದ್ದಾರೆ. ಆದರೆ, ನನ್ನನ್ನು ನಿರಂತರವಾಗಿ ಗೆಲ್ಲಿಸುತ್ತ ಬಂದಿದ್ದಾರೆ. ದೇಶದ ರಾಜಕಾರಣದಲ್ಲಿ ಹೊಸ ಪರ್ವ ಪ್ರಾರಂಭವಾಗಿದೆ’ ಎಂದರು.
ಸಿದ್ಧಾಂತ, ದೇಶಕ್ಕೋಸ್ಕರ ರಾಜಕೀಯ ಮಾಡಬೇಕೆಂಬ ಬದಲಾವಣೆ ಜನರ ಮನಸ್ಸಿನಲ್ಲಿ ಕಾಣುತ್ತಿದೆ. ಕರ್ನಾಟಕದ ಮಣ್ಣಿಗೆ ನ್ಯಾಯ, ಗೌರವ ಕೊಡುವ ಬಿಜೆಪಿ ರಾಜ್ಯದಲ್ಲಿಯೂ ಅಧಿಕಾರಕ್ಕೆ ಬರಲಿದೆ ಎಂದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ, ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ.ಹೆಗಡೆ, ಪ್ರಮುಖರಾದ ರೇಖಾ ಹೆಗಡೆ, ಶೋಭಾ ನಾಯ್ಕ, ಸದಾನಂದ ಭಟ್ಟ, ಕೃಷ್ಣ ಎಸಳೆ, ವಿಶಾಲ ಮರಾಠೆ, ನಂದನ ಸಾಗರ, ರಿತೇಶ ಕೆ, ಅಶೋಕ ಭಟ್ಟ ಇದ್ದರು.
ನಿರೀಕ್ಷಿತ ಫಲಿತಾಂಶ:
ಚುನಾವಣೆಯ ಫಲಿತಾಂಶ ನಿರೀಕ್ಷಿತವಾಗಿದ್ದು, ಐದು ವರ್ಷಗಳ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಾರ್ಯವೈಖರಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಐತಿಹಾಸಿಕ ಚುನಾವಣೆ ಹಲವಾರು ವಿಕ್ರಮಗಳಿಗೆ ಸಾಕ್ಷಿಯಾಗಿದೆ. ಕರ್ನಾಟಕದ ಇತಿಹಾಸದಲ್ಲೇ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಗೆದ್ದಿದ್ದಲ್ಲದೇ, ಅತ್ಯಧಿಕ ಮತಗಳ ಅಂತರದ ಗೆಲುವನ್ನು ಉತ್ತರ ಕನ್ನಡ ಕ್ಷೇತ್ರದ ಜನರು ಬಿಜೆಪಿಗೆ ನೀಡಿದ್ದಾರೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.