ADVERTISEMENT

ಕಾರವಾರ: ಮತ್ತೊಂದು ಕಡಲಾಮೆ ಕಳೇಬರ ಪತ್ತೆ

ಕಾರವಾರ ಸುತ್ತಮುತ್ತ ಒಂದು ತಿಂಗಳಲ್ಲಿ ಆಮೆಗಳು, ಡಾಲ್ಫಿನ್ ಸಾವು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 16:45 IST
Last Updated 9 ಸೆಪ್ಟೆಂಬರ್ 2021, 16:45 IST
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಗುರುವಾರ ಪತ್ತೆಯಾದ ಅಪರೂಪದ ಹಸಿರು ಕಡಲಾಮೆಯ ಕಳೇಬರ
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಗುರುವಾರ ಪತ್ತೆಯಾದ ಅಪರೂಪದ ಹಸಿರು ಕಡಲಾಮೆಯ ಕಳೇಬರ   

ಕಾರವಾರ: ಅಪರೂ‍ಪದ ಹಸಿರು ಕಡಲಾಮೆಯ ಮೃತದೇಹವೊಂದು ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಗುರುವಾರ ಪತ್ತೆಯಾಗಿದೆ. ಕಾರವಾರ ಸುತ್ತಮುತ್ತ ಒಂದು ತಿಂಗಳ ಅವಧಿಯಲ್ಲಿ ಪತ್ತೆಯಾದ ಆಮೆಯ ನಾಲ್ಕನೇ ಕಳೇಬರ ಇದಾಗಿದೆ.

ಹೆಣ್ಣು ಆಮೆ ಇದಾಗಿದ್ದು, ಮೀನುಗಾರಿಕೆಯ ಬಲೆಗೆ ಸಿಲುಕಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಸಂತ ರೆಡ್ಡಿ ಅವರ ಮಾರ್ಗದರ್ಶನದಂತೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ್, ‘ಹಸಿರು ಕಡಲಾಮೆಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನುಕ್ರಮ 1ರ ಅಡಿಯಲ್ಲಿ ಅಳಿವಿನ ಅಂಚಿನಲ್ಲಿರುವ ಜೀವಿ ಎಂದು ಗುರುತಿಸಲಾಗಿದೆ. ಅವು ಈ ಭಾಗದಲ್ಲಿ ಅತ್ಯಂತ ವಿರಳವಾಗಿ ಕಾಣಿಸಿಕೊಳ್ಳುತ್ತವೆ. ಗರಿಷ್ಠ ಜೀವಿತಾವಧಿಯಲ್ಲಿ 100 ವರ್ಷಕ್ಕೂ ಅಧಿಕ ಬದುಕುತ್ತವೆ. ಒಂದು ಮೀಟರ್‌ಗೂ ಅಧಿಕ ಸುತ್ತಳತೆಯಲ್ಲಿ ಬೆಳೆಯುತ್ತವೆ. ಇದು ಸಣ್ಣದಾಗಿದ್ದು, ವಯಸ್ಸು ಮತ್ತಿತರ ಮಾಹಿತಿಗಳು ಮರಣೋತ್ತರ ಪರೀಕ್ಷೆಯ ವರದಿಯಿಂದ ಗೊತ್ತಾಗಲಿದೆ’ ಎಂದು ಹೇಳಿದರು.

ADVERTISEMENT

ಕಾರವಾರ ಸುತ್ತಮುತ್ತ ಕಡಲತೀರದಲ್ಲಿ ಸುಮಾರು ಒಂದು ತಿಂಗಳಿನಿಂದ ಅಪರೂಪದ ಜಲಚರಗಳ ಕಳೇಬರಗಳು ಹೆಚ್ಚು ಪತ್ತೆಯಾಗುತ್ತಿವೆ. ಕೆಲವು ದಿನಗಳ ಹಿಂದೆ ಡಾಲ್ಫಿನ್ ಮೀನಿನ ಮೃತದೇಹವು ತಾಲ್ಲೂಕಿನ ದಂಡೇಬಾಗ್ ಕಡಲತೀರದಲ್ಲಿ ಕಂಡಬಂದಿತ್ತು. ಅದಕ್ಕೂ ಮೊದಲು ಬೇರೆ ಬೇರೆ ದಿನಗಳಲ್ಲಿ ಸತ್ತಿರುವ ಆಮೆಗಳು ಸಿಕ್ಕಿದ್ದವು. ಈ ರೀತಿ ಪದೇಪದೇ ಜಲಚರಗಳು ಸಾವನ್ನಪ್ಪುತ್ತಿರುವುದು ವನ್ಯಜೀವಿ ಪ್ರಿಯರ ಆತಂಕಕ್ಕೆ ಕಾರಣವಾಗಿದೆ.

‘ಆಮೆಗಳು ಮೊಟ್ಟೆಯಿಡುವ ದಿನಗಳು ಸಮೀಪಿಸುತ್ತಿವೆ. ಹಾಗಾಗಿ ಅವು ಹೆಚ್ಚು ಹೆಚ್ಚು ದಡದತ್ತ ಬರುತ್ತಿರುವ ಸಾಧ್ಯತೆಯಿದೆ. ಆಗ ಬಲೆಗೆ ಸಿಲುಕಿ ಹೊರಬರಲಾರದೇ ಸಾಯುವ ಸಾಧ್ಯತೆಯಿದೆ. ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವ ಇಂಥ ಜಲಚರಗಳು, ವನ್ಯಜೀವಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ’ ಎಂದು ನಗರದ ನಿವಾಸಿ ರಮೇಶ ನಾಯ್ಕ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.