ADVERTISEMENT

ಕಾರವಾರ: ಹೋಟೆಲ್‌ಗಳಿಂದ ಈರುಳ್ಳಿಗೆ ‘ಗೇಟ್‌ಪಾಸ್’!

ದರ ಏರಿಕೆಯಿಂದ ಕಂಗಾಲಾದ ಉದ್ಯಮ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 13:33 IST
Last Updated 6 ಡಿಸೆಂಬರ್ 2019, 13:33 IST
ಕಾರವಾರದ ಹೋಟೆಲೊಂದರಲ್ಲಿ ಪಾವ್ ಬಜ್ಜಿ ತಟ್ಟೆಯಲ್ಲಿ ಈರುಳ್ಳಿ ಬದಲು ಸೌತೆಕಾಯಿ ಸ್ಥಾನ ಪಡೆದುಕೊಂಡಿದೆ
ಕಾರವಾರದ ಹೋಟೆಲೊಂದರಲ್ಲಿ ಪಾವ್ ಬಜ್ಜಿ ತಟ್ಟೆಯಲ್ಲಿ ಈರುಳ್ಳಿ ಬದಲು ಸೌತೆಕಾಯಿ ಸ್ಥಾನ ಪಡೆದುಕೊಂಡಿದೆ   

ಕಾರವಾರ: ಎರಡು ವಾರಗಳಿಂದ ಸತತವಾಗಿ ಏರಿಕೆ ಕಾಣುತ್ತಿರುವ ಈರುಳ್ಳಿ ದರವು, ಜನಸಾಮಾನ್ಯರನ್ನು ಮಾತ್ರವಲ್ಲದೇ ಹೋಟೆಲ್ ಉದ್ಯಮವನ್ನೂಕಂಗೆಡಿಸಿದೆ. ಹಲವು ಹೋಟೆಲ್‌ಗಳಲ್ಲಿ ಅಡುಗೆಗೆ ಈರುಳ್ಳಿ ಬಳಕೆಯನ್ನೇ ನಿಲ್ಲಿಸಲಾಗಿದೆ.

ನಗರದಲ್ಲಿ ನಾಲ್ಕೈದು ದಿನಗಳಿಂದ ಪ್ರತಿ ಕೆ.ಜಿ.ಈರುಳ್ಳಿಯು ₹ 150ರಂತೆ ಮಾರಾಟವಾಗುತ್ತಿದೆ. ಸುಮಾರು ಒಂದು ತಿಂಗಳ ಹಿಂದೆಯೇ ದರ ಏರಿಕೆಆರಂಭವಾದಾಗ ಕಾಂದಾ ಬಜ್ಜಿ (ಈರುಳ್ಳಿ ಬಜ್ಜಿ) ಹಾಗೂ ಈರುಳ್ಳಿ ಉತ್ತಪ್ಪವನ್ನು ಮೆನುವಿನಿಂದ ಕೈಬಿಡಲಾಗಿತ್ತು. ₹ 100ಕ್ಕಿಂತಲೂ ಹೆಚ್ಚಾದ ಬಳಿಕ ಅಡುಗೆ ಸಾಮಗ್ರಿಯ ಪಟ್ಟಿಯಿಂದಲೇ ಉಳ್ಳಾಗಡ್ಡೆಯನ್ನು ದೂರವಿಡಲಾಗಿದೆ.

ಸದ್ಯಕ್ಕೆ ನಗರದ ವಿವಿಧ ಹೋಟೆಲ್‌ಗಳಲ್ಲಿ ಈರುಳ್ಳಿ ರಹಿತ ಪಾವ್ ಬಜ್ಜಿ, ಪಾನಿಪುರಿ, ಮಸಾಲೆಪುರಿ, ಸಾರು, ಸಾಂಬಾರು ಸಿಗುತ್ತಿದೆ.ಇದರಿಂದ ರುಚಿಯಲ್ಲಿ ವ್ಯತ್ಯಾಸವಾಗಿ ಹೋಟೆಲ್ ಸಿಬ್ಬಂದಿಜೊತೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುವುದು ನಿತ್ಯದ ದೃಶ್ಯವಾಗಿದೆ.

ADVERTISEMENT

‘ನಮ್ಮ ಹೋಟೆಲ್‌ನಲ್ಲಿ ಪ್ರತಿದಿನ ಸುಮಾರು 25 ಕೆ.ಜಿ ಈರುಳ್ಳಿಬಳಕೆಯಾಗುತ್ತದೆ. ಈಗಿನ ದರದಲ್ಲಿ ಸುಮಾರು 50 ಕೆ.ಜಿ.ಗಳ ಒಂದು ಮೂಟೆ ಖರೀದಿಸಲು ₹ 7,500 ಬೇಕು. ದಿನದ ಲಾಭವನ್ನೂ ಮೀರಿ ಕೇವಲ ಒಂದೇ ವಸ್ತುವಿನ ಮೇಲೆ ವ್ಯಯಿಸಬೇಕು. ಈ ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸಿದರೆ ಅವರಿಗೂ ಹೊರೆಯಾಗುತ್ತದೆ. ಹಾಗಾಗಿ ಇದು ಉದ್ಯಮಕ್ಕೆ ಸಾಧುವಲ್ಲ ಎಂದು ಸದ್ಯಕ್ಕೆ ಈರುಳ್ಳಿಖರೀದಿಯನ್ನುನಿಲ್ಲಿಸಿದ್ದೇವೆ. ದರ ಕಡಿಮೆಯಾದ ಬಳಿಕ ಮತ್ತೆ ಬಳಕೆ ಶುರು ಮಾಡುತ್ತೇವೆ’ ಎಂದು ನಗರದ ಗ್ರೀನ್‌ಸ್ಟ್ರೀಟ್‌ನ ಹೋಟೆಲೊಂದರ ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.