ಕಾರವಾರ: ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ, ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಹೆಚ್ಚಿಸುವ ಸಂಬಂಧ ರಾಜ್ಯ ಸರ್ಕಾರ ಕೈಗೊಳ್ಳಲಿರುವ ಯೋಜನೆಗೆ ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದೆ. ವರದಿ ಅನ್ವಯ ಜಿಲ್ಲೆಯಲ್ಲಿ 372 ಕೆಪಿಎಸ್ ಶಾಲೆಗಳು ತಲೆ ಎತ್ತಲಿವೆ ಎಂಬುದಾಗಿ ಶಿಕ್ಷಣ ಇಲಾಖೆ ಹೇಳುತ್ತಿದೆ.
ಜಿಲ್ಲೆಯಲ್ಲಿರುವ ಈಗಾಗಲೆ ಕಾರ್ಯನಿರ್ವಹಿಸುತ್ತಿದ್ದ ಪ್ರೌಢಶಾಲೆಗಳನ್ನು ಕೆಪಿಎಸ್ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 8 ಮತ್ತು ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ 7 ಶಾಲೆಗಳು ಕೆಪಿಎಸ್ ಮೇಲ್ದರ್ಜೆಗೆ ಏರಲಿವೆ.
ಆದರೆ, ಗ್ರಾಮ ಪಂಚಾಯಿತಿಗೆ ಒಂದರಂತೆ ಕೆಪಿಎಸ್ಗಳನ್ನು ತೆರೆದು, ಸುತ್ತಮುತ್ತಲಿನ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಕೆಪಿಎಸ್ ಜೊತೆ ವಿಲೀನಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ಸಂಬಂಧ ರಾಮನಗರ ಜಿಲ್ಲೆಯಲ್ಲಿ ಪ್ರಾಯೋಗಿಕ ಪ್ರಕ್ರಿಯೆ ಜಾರಿಯಾಗಿದೆ ಎಂಬುದು ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘದ (ಎಐಡಿಎಸ್ಒ) ದೂರು.
‘ಉತ್ತರ ಕನ್ನಡ ಜಿಲ್ಲೆಯಲ್ಲಿ 372 ಕೆಪಿಎಸ್ ತೆರೆಯಲಾಗುತ್ತದೆ ಶಿಕ್ಷಣ ಇಲಾಖೆ ಸಿದ್ಧಪಡಿಸಿದ ಡಿಪಿಆರ್ ಮಾಹಿತಿ ಹೇಳುತ್ತಿದೆ. ಆಯಾ ತಾಲ್ಲೂಕಿನ ಶಾಲೆಗಳ ಪೈಕಿ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಯನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಮೂಲಸೌಕರ್ಯ ಹೆಚ್ಚಿಸಿ, ಕೆಪಿಎಸ್ ತೆರೆಯಲಾಗುತ್ತದೆ. ಅದೇ ಶಾಲೆಯೊಂದಿಗೆ ಸುತ್ತಮುತ್ತಲಿನ 6 ಕಿ.ಮೀ ವ್ಯಾಪ್ತಿಯ ಇತರ ಶಾಲೆಗಳ ವಿದ್ಯಾರ್ಥಿಗಳನ್ನು ಸೆಳೆಯಲಾಗುತ್ತದೆ. ಇದಕ್ಕಾಗಿ 1,529 ಮ್ಯಾಗ್ನೆಟ್ ಶಾಲೆಗಳನ್ನು ಇಲಾಖೆ ಗುರುತಿಸಿಕೊಂಡಿದೆ’ ಎನ್ನುತ್ತಾರೆ ಎಐಡಿಎಸ್ಒ ಜಿಲ್ಲಾ ಘಟಕದ ಸಂಚಾಲಕಿ ಶಶಿಕಲಾ ಮೇಟಿ.
‘ಗುಡ್ಡಗಾಡು ಜಿಲ್ಲೆಯಾಗಿರುವ ಉತ್ತರ ಕನ್ನಡದಲ್ಲಿ ದೂರದ ಹಳ್ಳಿಗಳಲ್ಲಿ ಶಾಲೆಗಳಿದ್ದರೆ ವಿದ್ಯಾರ್ಥಿಗಳಿಗೆ ತಲುಪುವುದು ಸಮಸ್ಯೆ ಆಗಲಿದೆ. ಮಳೆಗಾಲದಲ್ಲಂತೂ ಇನ್ನೂ ಕಷ್ಟವಾಗಲಿದೆ. ಕೆಪಿಎಸ್ ಹೆಚ್ಚಿಸಿ, ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚುವ ಹುನ್ನಾರ ಸರ್ಕಾರ ಕೈಬಿಡಬೇಕು’ ಎಂಬುದು ಅವರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.