ಶಿರಸಿ: ‘ಹಣದ ಆಸೆಗಾಗಿ ನಿಯಮ ಮೀರಿ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಪಿಐ ಬಿ.ಗಿರೀಶ ಎಚ್ಚರಿಸಿದರು.
ಶಾಲಾ ಮಕ್ಕಳ ಸುರಕ್ಷತೆ ಹಿನ್ನೆಲೆಯಲ್ಲಿ ಚರ್ಚಿಸಲು ಶನಿವಾರ ಇಲ್ಲಿ ಡಿವೈಎಸ್ಪಿ ಭಾಸ್ಕರ ವಕ್ಕಲಿಗ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ‘ಆಟೊರಿಕ್ಷಾದಲ್ಲಿ ಮಕ್ಕಳನ್ನು ಕರೆದೊಯ್ಯಲು ನಿರ್ದಿಷ್ಟ ಸಂಖ್ಯೆ ನಿಗದಿಪಡಿಸಲಾಗಿದೆ. ಈ ನಿಯಮವನ್ನು ಪಾಲಿಸಬೇಕು. ವಿದ್ಯಾರ್ಥಿಗಳನ್ನು ಬಿಡುವಾಗ ಅತಿ ಆತುರ ಮಾಡದೇ, ಅವರ ಕಾಳಜಿ ಬಗ್ಗೆ ಎಚ್ಚರ ವಹಿಸಬೇಕು. ಸೋಮವಾರದಿಂದ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ’ ಎಂದರು.
ಭಾಸ್ಕರ ವಕ್ಕಲಿಗ ಮಾತನಾಡಿ, ‘ವಾಹನ ಚಾಲಕರು ಸ್ವಾರ್ಥಕ್ಕಾಗಿ, ಹಣ ಗಳಿಕೆಗಾಗಿ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಆಡಬಾರದು. ಗೂಡ್ಸ್ ಗಾಡಿಗಳಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಾರೆ ಎಂಬ ಬಗ್ಗೆ ಈಗಾಗಲೇ ದೂರುಗಳು ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಪ್ರಕರಣ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು. ನಗರಠಾಣೆ ಪಿ.ಎಸ್.ಐ. ಮಾದೇಶ, ಮಾರುಕಟ್ಟೆ ಠಾಣೆಯ ಪಿ.ಎಸ್.ಐ. ಶಶಿಕುಮಾರ, ಬನವಾಸಿ ಠಾಣೆಯ ಚಂದ್ರಶೇಖರ ಹರಿಹರ, ಸಾರಿಗೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.