ADVERTISEMENT

ತ್ಯಾಗ ಮಾಡಿದವರನ್ನು ಸರಿಯಾಗಿ ನಡೆಸಿಕೊಳ್ಳದ ಬಿ.ಜೆ.ಪಿ: ಸ್ವಾಮೀಜಿ ಬೇಸರ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 16:33 IST
Last Updated 17 ಆಗಸ್ಟ್ 2021, 16:33 IST

ಕಾರವಾರ: ‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಬಿ.ಜೆ.ಪಿ ಸರ್ಕಾರ ರಚನೆಯಾಗಲು ತ್ಯಾಗ ಮಾಡಿ ಬಂದವರನ್ನು ಪಕ್ಷದ ಹೈಕಮಾಂಡ್ ಸರಿಯಾಗಿ ನಡೆಸಿಕೊಂಡಿಲ್ಲ’ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಲ್ಲಾಪುರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿ.ಜೆ.ಪಿ ಸರ್ಕಾರ ರಚನೆಯಾಗಲು ಆನಂದ ಸಿಂಗ್, ರಮೇಶ್ ಜಾರಕಿಹೊಳಿ ಅವರಂತಹ 16 ಮಂದಿ ಶಾಸಕರ ತ್ಯಾಗ ಕಾರಣ. ಈಚೆಗೆ ಮುಖ್ಯಮಂತ್ರಿ ಬದಲಾಗಿ ಹೊಸ ಸಂಪುಟ ರಚನೆಯಾದಾಗ ಪಕ್ಷದ ಹೈಕಮಾಂಡ್ ಸರಿಯಾಗಿ ನಡೆಸಿಕೊಳ್ಳಬೇಕಿತ್ತು. ಆದರೆ, ಹಾಗಾಗಿಲ್ಲ ಎಂಬ ಭಾವನೆ ನಮ್ಮದಾಗಿದೆ’ ಎಂದು ಹೇಳಿದರು.

‘ಮುಖ್ಯಮಂತ್ರಿಯಾಗಿ, ಸಚಿವರಾಗಿ ಅಧಿಕಾರ ಅನುಭವಿಸುತ್ತಿರುವವರ ಹಿಂದೆ ಇವರೆಲ್ಲರ ಶ್ರಮವಿದೆ. ಹಾಗಾಗಿ ಅವರ ಶ್ರಮಕ್ಕೆ ಸರಿಯಾಗಿ ಸಚಿವ ಸ್ಥಾನಗಳನ್ನು ಕೊಡಬೇಕು ಎಂಬುದು ನಮ್ಮ ಮನವಿ’ ಎಂದರು.

ADVERTISEMENT

‘ಹಿಂದಿನ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ಅವರು ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದ ಸಂದರ್ಭದಲ್ಲಿ, ವಾಲ್ಮೀಕಿ ಸಮುದಾಯಕ್ಕೆ ಶೇ 7.5ರ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಈಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೂ ಈ ವಿಚಾರ ತಿಳಿದಿದೆ. ಈ ಬಗ್ಗೆ ಸಮಾಜದ ಮುಖಂಡರ ಜೊತೆ ಅವರನ್ನು ಭೇಟಿ ಮಾಡಿ, ಮೀಸಲಾತಿಗೆ ಒತ್ತಾಯಿಸಲಾಗುತ್ತದೆ. ಅವರ ಭರವಸೆ ಅಥವಾ ಮಾತನ್ನು ಆಧರಿಸಿ ನಮ್ಮ ಮುಂದಿನ ನಿರ್ಧಾರ ಇರಲಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.