ADVERTISEMENT

ಕಾರವಾರದಲ್ಲಿ ಧಾರಾಕಾರ ಸುರಿದ ಮಳೆ: ಮನೆಗೆ ನುಗ್ಗಿದ ನೀರು

ನಗರದಲ್ಲಿ ಒಂದೇ ರಾತ್ರಿ 129.7 ಮಿಲಿಮೀಟರ್ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 12:59 IST
Last Updated 15 ಜುಲೈ 2019, 12:59 IST
ಕಾರವಾರದಲ್ಲಿ ಭಾನುವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ ತೊಂದರೆಗೊಳಗಾದ ಮಾಧವ ನಗರದ ಮನೆಯೊಂದಕ್ಕೆ ನೀರು ನುಗ್ಗಿದ್ದು, ಪುಟಾಣಿಯೊಬ್ಬಳು ಸ್ವಚ್ಛಗೊಳಿಸಿದಳು.
ಕಾರವಾರದಲ್ಲಿ ಭಾನುವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ ತೊಂದರೆಗೊಳಗಾದ ಮಾಧವ ನಗರದ ಮನೆಯೊಂದಕ್ಕೆ ನೀರು ನುಗ್ಗಿದ್ದು, ಪುಟಾಣಿಯೊಬ್ಬಳು ಸ್ವಚ್ಛಗೊಳಿಸಿದಳು.   

ಕಾರವಾರ: ನಗರದಲ್ಲಿ ಭಾನುವಾರ ಸಂಜೆಯವರೆಗೆ ಮೋಡ ಹಾಗೂ ಸಾಧಾರಣ ಮಳೆಯಾಗಿತ್ತು. ಜೋರು ಮಳೆಯ ಯಾವ ಸುಳಿವನ್ನೂ ನೀಡದೇತಡರಾತ್ರಿಧಾರಾಕಾರವಾಗಿ ಸುರಿಯಿತು.

ಸುಮಾರು ಆರು ತಾಸು ನಿರಂತರವಾಗಿ ಒಂದೇ ಸಮನೆ ಭಾರಿ ವರ್ಷಧಾರೆಯಾಯಿತು. ಇದರೊಂದಿಗೆ ನಗರದ ವಿವಿಧ ಭಾಗಗಳಲ್ಲಿ ಸಂಕಷ್ಟಗಳನ್ನೂ ಸುರಿಸಿತು. ಬಾಡ,ಮಾಧವನಗರ, ಪದ್ಮನಾಭ ನಗರ, ಕೆಎಚ್‌ಬಿ ಕಾಲೊನಿಯ ವಿವಿಧ ಭಾಗಗಳಲ್ಲಿ ಮಳೆ ನೀರು ಅವಾಂತರ ಸೃಷ್ಟಿಸಿತು. ಮಾಧವ ನಗರದಲ್ಲಿ ಚರಂಡಿಯಲ್ಲಿ ಮಳೆ ನೀರು ಉಕ್ಕಿ ಹರಿದು ಮನೆಗಳಿಗೆ ನುಗ್ಗಿತು.

ತಡರಾತ್ರಿ ಈ ರೀತಿ ಆದ ಕಾರಣ ನಿವಾಸಿಗಳು ಏನು ಮಾಡಬೇಕು ಎಂದು ತೋಚದೇ ಕಂಗಾಲಾದರು. ಬೆಳಿಗ್ಗೆಯವರೆಗೂ ನಿದ್ದೆಗೆಟ್ಟು ಮನೆಯಿಂದ ನೀರು ಹೊರಹಾಕಿದರು. ಸಣ್ಣ ಮಕ್ಕಳೂ ಮನೆ ಮಂದಿಯ ಜೊತೆ ಕೈ ಜೋಡಿಸಿದರು. ಪದ್ಮನಾಭ ನಗರದ ಚರಂಡಿಯಲ್ಲಿ ನೀರು ಸಮರ್ಪಕವಾಗಿ ಹರಿಯದೇ ರಸ್ತೆಯ ತುಂಬ ಸಂಗ್ರಹವಾಗಿ ಕೆರೆಯಂತಾಯಿತು. ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಸಂಚರಿಸಲು ಪರದಾಡುವಂತಾಯಿತು.

ADVERTISEMENT

ಇತ್ತ ಕೆಎಚ್‌ಬಿ ಹಳೆಯ ಮತ್ತು ಹೊಸ ಬಡಾವಣೆಗಳಲ್ಲಿ ಕೂಡ ಮಳೆ ನೀರು ಹರಿದು ಹೋಗದೇ ಸಮಸ್ಯೆಯಾಯಿತು. ಖಾಲಿ ನಿವೇಶನಗಳಿಂದ ಹರಿದುಬಂದ ನೀರು ರಸ್ತೆಯ ಹೊಂಡಗಳಲ್ಲಿ ಒಂದು ಅಡಿಯಷ್ಟು ನಿಂತಿತ್ತು. ಅದೇ ನೀರಿನಲ್ಲಿ ಶಾಲಾ ಮಕ್ಕಳು ಅನಿವಾರ್ಯವಾಗಿ ಹೆಜ್ಜೆ ಹಾಕಿದರು.

ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ನಗರಸಭೆ ಈಜುಕೊಳದ ಸಮೀಪದಲ್ಲಿ ಮರವೊಂದು ಬುಡಮೇಲಾಯಿತು. ರಸ್ತೆಯ ಮತ್ತೊಂದು ಬದಿಯಲ್ಲಿರುವ ಕಾಂಪೌಂಡ್ ಮೇಲೆಬಿದ್ದ ಕಾರಣ ವಾಹನ ಸಂಚಾರಕ್ಕೆ ಅಡಚಣೆಯಾಗಲಿಲ್ಲ.

ಅಸಮಾಧಾನ: ಗುರುಮಠ ಸುತ್ತಮುತ್ತವೂ ಮಳೆ ನೀರು ಸೂಕ್ತ ರೀತಿಯಲ್ಲಿ ಹರಿದು ಹೋಗುತ್ತಿಲ್ಲ. ಈ ಬಗ್ಗೆ ಸ್ಥಳೀಯ ನಿವಾಸಿ ಸಂತೋಷ ಗುರುಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಹಲವು ವರ್ಷಗಳಿಂದ ಈ ಸಮಸ್ಯೆಯಿದೆ. ಅದನ್ನು ಪರಿಹರಿಸಲು ಮನವಿ, ದೂರು ನೀಡಿದ್ದರೂ ಪರಿಹಾರ ಸಿಗಲಿಲ್ಲ. ಈ ಭಾಗದಲ್ಲಿ ಮಳೆ ನೀರು ಹರಿದು ಹೋಗಲು ಇರುವ ಜಾಗವನ್ನು ಮುಚ್ಚಲಾಗಿದೆ. ಅದನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.ರಾಜಕಾಲುವೆಯಅತಿಕ್ರಮಣವನ್ನು ತೆರವು ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಅಧಿಕಾರಿಗಳ ತಂಡದಿಂದ ಪರಿಶೀಲನೆ:ಸುಂಕೇರಿಯ ಮಾಧವ ನಗರದಲ್ಲಿ ಮೂರು ಮನೆಗಳಿಗೆ ಮಳೆ ನೀರು ನುಗ್ಗಿತು. ಅವುಗಳಲ್ಲಿ ಒಂದು ಮನೆಯಲ್ಲಿ ತುಂಬು ಗರ್ಣಿಯೂ ಇದ್ದರು. ಆ ಪ್ರದೇಶಕ್ಕೆನಗರಸಭೆ ಅಧಿಕಾರಿಗಳ ತಂಡ ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿತು.

ಈ ಸಂಬಂಧಮಾಹಿತಿ ನೀಡಿದ ನಗರಸಭೆ ಆಯುಕ್ತ ಯೋಗೇಶ್ವರ್, ‘ಮಾಧವ ನಗರದಲ್ಲಿ 50 ಮೀಟರ್ಕಾಂಕ್ರೀಟ್ ರಸ್ತೆಯಾಗಬೇಕು. ಅದಾದರೆ ಸಮಸ್ಯೆ ಬಗೆಹರಿಯುತ್ತದೆ. ಹಾಗಾಗಿ ತುರ್ತು ಕಾಮಗಾರಿ ಕೈಗೊಳ್ಳಲಾಗುವುದು. ಉಳಿದಂತೆ, ಮಳೆ ನೀರು ಹರಿಯುವ ಜಾಗದಲ್ಲಿ ಇದ್ದ ಅಡೆತಡೆಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವು ಮಾಡಲಾಗಿದೆ. ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.