ಅಂಕೋಲಾ: ಬೇಲೆಕೇರಿ ಮೀನುಗಾರಿಕಾ ಬಂದರಿನಲ್ಲಿ ಅಲೆ ತಡೆಗೋಡೆ ನಿರ್ಮಿಸಲು ಕರ್ನಾಟಕ ಜಲಸಾರಿಗೆ ಮಂಡಳಿಯಿಂದ ಮೀನುಗಾರಿಕಾ ನಿರ್ದೇಶಕರಿಗೆ ನೀಡಿರುವ ಅಂದಾಜು ಪತ್ರಿಕೆಗೆ ಅನುಮೋದನೆ ದೊರಕಿಸಿ ಕೊಡುವಂತೆ ಬೇಲೆಕೇರಿ ಫಿಶರೀಸ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಮೀನುಗಾರಿಕಾ ಮತ್ತು ಒಳನಾಡು ಜಲಸಾರಿಗೆ ಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
‘ಬೇಲೇಕೇರಿ ಮೀನುಗಾರಿಕಾ ಬಂದರಿನಲ್ಲಿ ಪುಣೆಯ ಸಿಡಬ್ಲ್ಯುಪಿಆರ್ಎಸ್ ಸಂಸ್ಥೆಯವರು ಮಾದರಿ ಅಧ್ಯಯನ ನಡೆಸಿ ನೀಡಿರುವ ಅಲೆ ತಡೆ ಗೋಡೆಯ ತಾಂತ್ರಿಕ ವಿನ್ಯಾಸಕ್ಕನುಗುಣವಾಗಿ ಬೇಲೇಕೇರಿ ಮೀನುಗಾರಿಕಾ ಬಂದರಿನಲ್ಲಿ 200 ಮೀ ಉದ್ದದ ಅಲೆ ತಡೆ ಗೋಡೆ ನಿರ್ಮಿಸುವುದು ಅಗತ್ಯ. ಈ ಕುರಿತು 2023ರಲ್ಲಿ ಅಂದಾಜು ಪತ್ರಿಕೆ ತಯಾರಾಗಿದ್ದರೂ, ಈವರೆಗೂ ಅನುಮೋದನೆ ಸಿಕ್ಕಿಲ್ಲ’ ಎಂದು ಮನವಿಯಲ್ಲಿ ದೂರಲಾಗಿದೆ.
‘ಅಲೆ ತಡೆ ಗೋಡೆ ನಿರ್ಮಾಣವಾದರೆ ಬಂದರಿನಲ್ಲಿ ಅಲೆಗಳು, ತುಫಾನ್ನಿಂದ ಬೋಟುಗಳಿಗೆ, ಮೀನುಗಾರಿಕೆಗೆ ಹಾನಿಯಾಗುವುದು ತಪ್ಪುತ್ತದೆ. ಮೀನುಗಾರರಿಗೆ ರಕ್ಷಣೆ ಒದಗಿಸಿದಂತಾಗುತ್ತದೆ’ ಎಂದು ಮನವಿ ಮಾಡಿದರು.
ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಮಾಜಿ ಅಧ್ಯಕ್ಷ ಗಣಪತಿ ಮಾಂಗ್ರೆ, ಕಾರ್ಯದರ್ಶಿ ಶ್ರೀಕಾಂತ ದುರ್ಗೇಕರ, ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ ಬಾನಾವಳಿಕರ್, ಪರ್ಸಿನ್ ಬೋಟ್ ಯೂನಿಯನ್ ಅಧ್ಯಕ್ಷ ಗುರುನಾಥ ಕೆ ಬಾನಾವಳಿಕರ, ಉಪಾಧ್ಯಕ್ಷ ನಾಗರಾಜ ಎಸ್. ಬಾನಾವಳಿಕರ, ಹಿರಿಯ ಮೀನುಗಾರರ ಮುಖಂಡ ಬೋಳಾ ಕುಡ್ತಳಕರ, ಚಂದ್ರಕಾಂತ ಬಾನಾವಳಿಕರ, ಸುರೇಶ ಬಾನಾವಳಿಕರ, ತುಕಾರಾಮ ಕುಡ್ತಳಕರ, ಸುರೇಶ ಬಾನಾವಳಿಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.