ADVERTISEMENT

ಅಂಕೋಲಾ: ಗಂಗಾವಳಿ ನದಿಯಲ್ಲಿ ಬಿದ್ದು ಮೂವರು ಸೋದರ ಸಂಬಂಧಿಗಳ ಸಾವು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 13:07 IST
Last Updated 24 ಏಪ್ರಿಲ್ 2022, 13:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಂಕೋಲಾ: ತಾಲ್ಲೂಕಿನ ಹಿಲ್ಲೂರು ವ್ಯಾಪ್ತಿಯ ಕರಿಕಲ್‌ನಲ್ಲಿ ಭಾನುವಾರ, ಗಂಗಾವಳಿ ನದಿಯಲ್ಲಿ ಕೊಂಡಗ (ಚಿಪ್ಪೆಕಲ್ಲು ಮಾದರಿಯ ಜಲಚರ) ತೆಗೆಯಲು ಹೋಗಿದ್ದ ಮೂವರು ಸೋದರ ಸಂಬಂಧಿಗಳು ಆಕಸ್ಮಿಕವಾಗಿ ಕಾಲು ಜಾರಿ ನದಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ.

ಕರಿಕಲ್‌ನ ಪೂಜಾ ಮಹೇಶ ನಾಯ್ಕ (17), ಕುಮಟಾ ಅಘನಾಶಿನಿಯ ನಾಗೇಂದ್ರ ದಾಸು ನಾಯ್ಕ (16) ಮತ್ತು ಕುಮಟಾ ಕೋನಳ್ಳಿಯ ದಿಲೀಪ್ ಬಾಬು ನಾಯ್ಕ (20) ಮೃತರು. ಪೂಜಾ, ಕುಮಟಾದ ನೆಲ್ಲಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಗಷ್ಟೇ ಪ್ರಥಮ ಪಿ.ಯು.ಸಿ ಅಧ್ಯಯನ ಪೂರ್ಣಗೊಳಿಸಿದ್ದಳು. ಕೋನಳ್ಳಿಯ ದಿಲೀಪ್ ಅವರ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಬೇಸಿಗೆ ರಜೆಯ ನಿಮಿತ್ತ ಮನೆಗೆ ಬಂದಿದ್ದಳು.

ಭಾನುವಾರ ಬೆಳಿಗ್ಗೆ ಪೂಜಾಳ ಮನೆಗೆ ಬಂದಿದ್ದ ಮಾವನ ಮಗ ನಾಗೇಂದ್ರ ಮತ್ತು ದೊಡ್ಡಮ್ಮನ ಮಗ ದಿಲೀಪ್ ಜೊತೆಗೂಡಿ ಸಮೀಪದ ಗಂಗಾವಳಿ ನದಿಯಲ್ಲಿ ಕೊಂಡಗ ಆರಿಸಲು ಮಧ್ಯಾಹ್ನ ತೆರಳಿದ್ದರು. ಈ ವೇಳೆ ಪೂಜಾ ಕಾಲು ಜಾರಿ ಬಿದ್ದಿದ್ದು, ಅವಳನ್ನು ಕಾಪಾಡಲು ಹೋದ ಉಳಿದ ಇಬ್ಬರೂ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಮೂವರ ಮೃತದೇಹಗಳು ದೊರಕಿವೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.