ಅಂಕೋಲಾ: ಇಲ್ಲಿನ ಬೆಳಸೆ ಸೇತುವೆ ಬಳಿ ಸೋಮವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಹಳ್ಳಕ್ಕೆ ಉರುಳಿಬಿದ್ದಿದೆ. ಲಾರಿ ರಸ್ತೆಯಿಂದ ಉರುಳಿ ಹಳ್ಳಕ್ಕೆ ಬೀಳುವ ಸಂದರ್ಭದಲ್ಲಿ ಚಾಲಕ ಸ್ಥಳದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಇಬ್ಬರು ಸಹಾಯಕರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದಿನ ಬಳಕೆಯ ಪ್ಲಾಸ್ಟಿಕ್ ಸರಕುಗಳು ಮತ್ತು ಚೀಲಗಳನ್ನು ತುಂಬಿಕೊಂಡು ಮುಂಬೈನಿಂದ ಬರುತ್ತಿದ್ದ ಲಾರಿ ಕೇರಳದ ಕಲ್ಲಿಕೋಟೆಗೆ ಸಂಚರಿಸುತ್ತಿತ್ತು. ಇಲ್ಲಿನ ಚಂದುಮಠ ಕ್ರಾಸ್ ಬಳಿ ಇಳಿಜಾರು ರಸ್ತೆಯಲ್ಲಿ ವೇಗವಾಗಿ ಲಾರಿಯನ್ನು ಚಲಾಯಿಸಿಕೊಂಡು ಬಂದ ಚಾಲಕ, ನಿಯಂತ್ರಣ ಕಳೆದುಕೊಂಡು ಬಲಬದಿಯಲ್ಲಿ ವಾಹನ ಚಲಾಯಿಸಿದ್ದಾರೆ. ಮುಂದಿನಿಂದ ಬಂದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಇನ್ನಷ್ಟು ಬಲಬದಿಗೆ ಸಾಗಿದಾಗ ಲಾರಿಯು ಸೇತುವೆ ಅಡಿಯ ಹಳ್ಳಕ್ಕೆ ಬಿದ್ದಿದೆ. ಲಾರಿಯಲ್ಲಿದ್ದ ಸರಕುಗಳು ಚೆಲ್ಲಾಪಿಲ್ಲಿಯಾಗಿ ಹಳ್ಳಕ್ಕೆ ಬಿದ್ದಿವೆ.
ಈ ಭಾಗದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಮತ್ತು ಸೇತುವೆ ಕಾಮಗಾರಿ ಇನ್ನೂ ಅಪೂರ್ಣವಾಗಿದೆ. ಹೊರ ಭಾಗದ ಚಾಲಕರಿಗೆ ಇದು ಗೊಂದಲ ಉಂಟು ಮಾಡುವ ಕಾರಣ ಅಪಘಾತಗಳಾಗುತ್ತಿವೆ.
ಸ್ಥಳಕ್ಕೆ '112' ಸಿಬ್ಬಂದಿ ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದರು. ಪಿ.ಎಸ್.ಐ ಮಹಾಂತೇಶ ವಾಲ್ಮೀಕಿ, ಪಿ.ಎಸ್.ಐ ಪ್ರವೀಣಕುಮಾರ, ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.