ADVERTISEMENT

ಬಿಸಲಕೊಪ್ಪ: ರಸ್ತೆಗೆ ತಾತ್ಕಾಲಿಕ ದುರಸ್ತಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 14:10 IST
Last Updated 11 ಆಗಸ್ಟ್ 2021, 14:10 IST
ಶಿರಸಿ ತಾಲ್ಲೂಕಿನ ಬಿಸಲಕೊಪ್ಪ–ಉಳ್ಳಾಲ ನಡುವಿನ ರಸ್ತೆಯಲ್ಲಿ ದುರಸ್ತಿ ಕೆಲಸ ನಡೆಯುತ್ತಿರುವುದು
ಶಿರಸಿ ತಾಲ್ಲೂಕಿನ ಬಿಸಲಕೊಪ್ಪ–ಉಳ್ಳಾಲ ನಡುವಿನ ರಸ್ತೆಯಲ್ಲಿ ದುರಸ್ತಿ ಕೆಲಸ ನಡೆಯುತ್ತಿರುವುದು   

ಶಿರಸಿ: ತಾಲ್ಲೂಕಿನ ಬಿಸಲಕೊಪ್ಪದಿಂದ ಉಳ್ಳಾಲದ ನಡುವಿನ ರಸ್ತೆ ತಾತ್ಕಾಲಿಕ ದುರಸ್ತಿ ಕೆಲಸವನ್ನು ಬುಧವಾರ ಆರಂಭಿಸಲಾಗಿದೆ.

‘ದುರವಸ್ಥೆಯ ರಸ್ತೆ:ಗ್ರಾಮಸ್ಥರ ಹಿಡಿಶಾಪ’ ಶೀರ್ಷಿಕೆಯಡಿ ಜು.7 ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿದ ಬಳಿಕ ಎಚ್ಚೆತ್ತುಕೊಂಡ ಪಂಚಾಯತರಾಜ್ ಎಂಜಿನಿಯರಿಂಗ್ ಇಲಾಖೆ ರಸ್ತೆಯಲ್ಲಿದ್ದ ಹೊಂಡಗಳನ್ನು ಮುಚ್ಚುವ ಕೆಲಸ ಕೈಗೆತ್ತಿಕೊಂಡಿದೆ.

ರಸ್ತೆಯ ಹೊಂಡಗಳನ್ನು ಕಾಂಕ್ರೀಟ್ ಮಿಶ್ರಣದಿಂದ ಮುಚ್ಚಲಾಗುತ್ತಿದೆ. ಈ ಭಾಗದಲ್ಲಿ ರಸ್ತೆ ಸಂಚಾರ ತಡೆದು ಕೆಲಸ ನಡೆಸಲಾಗುತ್ತಿದೆ. ಶಿರಸಿ, ಯಲ್ಲಾಪುರ ಮತ್ತು ಮುಂಡಗೋಡ ತಾಲ್ಲೂಕುಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆ ಆಗಿದ್ದರೂ ನಿರ್ವಹಣೆಗೆ ನಿರಾಸಕ್ತಿ ತೋರಲಾಗಿದೆ ಎಂಬ ಆರೋಪ ಬಿಸಲಕೊಪ್ಪ ಭಾಗದ ಜನರಿಂದ ವ್ಯಕ್ತವಾಗಿತ್ತು.

ADVERTISEMENT

‘ಮಳೆಯಿಂದ ರಸ್ತೆಯ ಸ್ಥಿತಿ ಹದಗೆಟ್ಟಿತ್ತು. ಓಡಾಟಕ್ಕೆ ಸಮಸ್ಯೆಯೂ ಆಗಿತ್ತು. ತಾತ್ಕಾಲಿಕ ದುರಸ್ತಿ ಕೈಗೆತ್ತಿಕೊಂಡಿದ್ದು ಸಮಾಧಾನಕರ ಸಂಗತಿಯಾಗಿದ್ದರೂ, ಮಳೆಗಾಲದ ಬಳಿಕ ಹೊಸ ರಸ್ತೆ ನಿರ್ಮಾಣವಾಗಬೇಕಿದೆ’ ಎಂದು ಬಿಸಲಕೊಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಘವೇಂದ್ರ ನಾಯ್ಕ, ಸದಸ್ಯ ವಿದ್ಯಾಧರ ಭಟ್ಟ ತಿಳಿಸಿದರು.

‘ಮಳೆಗಾಲದ ಕಾರಣ ತಾತ್ಕಾಲಿಕ ದುರಸ್ತಿ ಕೆಲಸ ನಡೆಯುತ್ತಿದೆ. ಬಳಿಕ ಹೊಸ ರಸ್ತೆಗೆ ₹60 ಲಕ್ಷ ಮೀಸಲಿಡಲಾಗಿದೆ’ ಎಂದು ಪಂಚಾಯತ್‌ರಾಜ್ ಎಂಜಿನಿಯರಿಂಗ್ ಶಿರಸಿ ಉಪವಿಭಾಗದ ಎಇಇ ರಾಮಚಂದ್ರ ಗಾಂವಕರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.