
ಮುಂಡಗೋಡ: ‘ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಬುಡಕಟ್ಟು ಸಮುದಾಯದವರ ಪಾತ್ರ ಬಹು ಮುಖ್ಯವಾಗಿದೆ. ವೈವಿಧ್ಯಮಯವಾದ ಈ ತಾಲ್ಲೂಕಿನಲ್ಲಿ ಎಲ್ಲ ಜಾತಿ, ಧರ್ಮದ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಟಿ.ವೈ.ದಾಸನಕೊಪ್ಪ ಹೇಳಿದರು.
ಬುಡಕಟ್ಟು ಮತ್ತು ತಳಸಮುದಾಯಗಳ ಒಕ್ಕೂಟ ಹಾಗೂ ಲೊಯೋಲ ವಿಕಾಸ ಕೇಂದ್ರದ ಆಶ್ರಯದಲ್ಲಿ, ಇಲ್ಲಿನ ಎಲ್.ವಿ.ಕೆ ಸಭಾಭವನದಲ್ಲಿ ಶನಿವಾರ ನಡೆದ, 4ನೇ ʼಸಾಂಸ್ಕೃತಿಕ ಕಲಾಮೇಳʼವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಫಾ.ಅನಿಲ ಡಿಸೋಜಾ ಮಾತನಾಡಿ, ಲೊಯೋಲ ವಿಕಾಸ ಸಂಸ್ಥೆಯು ಕಳೆದ ನಾಲ್ಕು ದಶಕಗಳಿಂದ ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ. 4ನೇ ವರ್ಷದ ಕಲಾಮೇಳದ ಸಂಭ್ರಮದಲ್ಲಿದ್ದೇವೆ. ಸ್ವಸಹಾಯ ಸಂಘಗಳು, ಕಟ್ಟಡ ಕಾರ್ಮಿಕರು, ಕಲಾ ತಂಡಗಳು ಇಲ್ಲಿ ಪಾಲ್ಗೊಂಡಿವೆ. ಬುಡಕಟ್ಟು ಸಮುದಾಯದವರ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತೇವೆ ಎಂದರು.
ಬೌದ್ಧ ಮುಖಂಡ ಜಂಪಾ ಲೋಬ್ಸಂಗ್ ಮಾತನಾಡಿ, ವಿಭಿನ್ನ ರೀತಿಯ ಕಾರ್ಯಕ್ರಮ ನೋಡಲು ತುಂಬಾ ಖುಷಿ ಆಗುತ್ತದೆ. ಭಾರತವು ಟಿಬೆಟಿಯನ್ನರಿಗೆ ಗುರು ಆಗಿದ್ದು, ಈ ದೇಶದ ಸಂಸ್ಕೃತಿ, ಪರಂಪರೆ ವಿಶಿಷ್ಟ ಅನುಭವ ನೀಡುತ್ತದೆ ಎಂದರು.
ಜನವೇದಿಕೆ ಮುಖಂಡ ಬೀರು ಭಾಗು ಕಾತ್ರಟ್, ಬಸವಂತಪ್ಪ ಪೂಜಾರ, ನವೀನ ಸಿದ್ದಿ, ಫಾ.ಅಲ್ವಿನ್ ಡಿಸೋಜಾ, ಡಾ.ಸಿ.ಗ್ಲ್ಯಾಡಿಸ್ ಮಿನೇಜಸ್, ಫಾ.ಅನಿಲ ಡಿಸೋಜಾ, ಜನ್ನಾಬಾಯಿ ಕೊಕರೆ, ತನ್ವೀರ್ ಮಿರ್ಜಾನಕರ, ಸರೋಜಾ ಚವ್ಹಾಣ, ಅಂಜನಾ ತಹಶೀಲ್ದಾರ, ಗುಲ್ಜಾರ್ ಸಂಗೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.