ಕಾರವಾರ: ‘ರಸ್ತೆ ಪಕ್ಕ ಕಸ ಎಸೆದು ಹೋಗುವವರು ನಿಜವಾಗಿಯೂ ನಾಚಿಕೊಳ್ಳಬೇಕು. ಮನೆ ಮನೆಯಿಂದ ತಂದ ಕಸಗಳನ್ನು ವಿಲೇವಾರಿ ಘಟಕದೊಳಗೆ ಪ್ರತ್ಯೇಕಿಸಿ, ಅವುಗಳ ವ್ಯವಸ್ಥಿತ ವಿಲೇವಾರಿ ಮಾಡುವ ನಮಗೇಕೆ ನಾಚಿಕೆ ಇರಬೇಕು?’
ತಾಲ್ಲೂಕಿನ ಚಿತ್ತಾಕುಲ ಗ್ರಾಮ ಪಂಚಾಯಿತಿಯ ಸ್ವಚ್ಛತಾ ಸಂಕೀರ್ಣದಲ್ಲಿ (ಘನ ತ್ಯಾಜ್ಯ ವಿಲೇವಾರಿ ಘಟಕ) ಕಳೆದ ಐದು ವರ್ಷದಿಂದ ದುಡಿಯುತ್ತಿರುವ ಸೀಬರ್ಡ್ ಕಾಲೊನಿಯ ನಿರ್ಮಲಾ ಹರಿಕಂತ್ರ ಅವರು ಘಟಕದಲ್ಲಿ ರಾಶಿ ಬಿದ್ದ ಕಸಗಳಿಂದ ಪ್ಲಾಸ್ಟಿಕ್ ಬಾಟಲಿಗಳನ್ನು ಪ್ರತ್ಯೇಕಿಸಿ ಚೀಲಗಳಿಗೆ ತುಂಬಿಸುತ್ತ ಮಾತಿಗೆ ಇಳಿದರು.
‘ನಿತ್ಯ ಬೆಳಿಗ್ಗೆ ಮನೆಯಿಂದ ಮಾರುಕಟ್ಟೆಗೆ ಸಾಗಿ ಅಲ್ಲಿ ಸಂಜೆಯವರೆಗೂ ಮೀನು ಕೊಯ್ಯುವ ಕೆಲಸ ಮಾಡುತ್ತಿದ್ದೆ. ದಿನಕ್ಕೆ ₹500 ಸಂಪಾದನೆ ಇತ್ತು. ಈಗ ಇಲ್ಲಿ ಕಸ ವಿಂಗಡಿಸುವ ಕೆಲಸ ಸಿಕ್ಕಿದೆ. ಮಾಡುವ ಕೆಲಸಕ್ಕೆ ನಿರ್ದಿಷ್ಟ ವೇತನ ಸಿಗುತ್ತಿದೆ. ಅದಕ್ಕಿಂತ ಹೆಚ್ಚಾಗಿ ಗ್ರಾಮವನ್ನು ಶುಚಿಯಾಗಿಸುವ ಪುಣ್ಯದ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ ಎಂಬ ಸಮಾಧಾನ ನಮಗಿದೆ’ ಎನ್ನುತ್ತ ಕೆಲಸ ಮುಂದುವರಿಸಿದರು.
ಜಿಲ್ಲೆಯ ಗ್ರಾಮಿಣ ಪ್ರದೇಶದಲ್ಲಿ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಘನ ತ್ಯಾಜ್ಯಗಳನ್ನು ಸಂಗ್ರಹಿಸುವ ಕೆಲಸದಲ್ಲಿ ನಿರತರಾದವರಲ್ಲಿ ಬಹುಪಾಲು ಮಹಿಳೆಯರೇ ಇದ್ದಾರೆ. ಮನೆ ಮನೆಯಿಂದ ಕಸ ಸಂಗ್ರಹಿಸಿ ತಂದು ವಾಹನಕ್ಕೆ ತುಂಬುವುದರಿಂದ ಹಿಡಿದು, ಸ್ವಚ್ಛತಾ ಸಂಕೀರ್ಣಕ್ಕೆ ತಲುಪಿಸುವದರಲ್ಲಿಯೂ ಮಹಿಳಾ ಕಾರ್ಮಿಕರೇ ಮುಂಚೂಣಿಯಲ್ಲಿದ್ದಾರೆ.
229 ಗ್ರಾಮ ಪಂಚಾಯಿತಿಗಳ ಪೈಕಿ 185 ಕಡೆಗಳಲ್ಲಿ ಸ್ವಚ್ಛತಾ ಸಂಕೀರ್ಣದಲ್ಲಿ ಕಸ ವಿಂಗಡಿಸುವ ಕೆಲಸ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಗೋಕರ್ಣ, ಚಿತ್ತಾಕುಲ ಗ್ರಾಮ ಪಂಚಾಯಿತಿಯಲ್ಲಿ ವ್ಯಾಪಕ ಪ್ರಮಾಣದ ಕಸ ಸಂಗ್ರಹವಾಗುತ್ತಿದ್ದು ಅವುಗಳನ್ನು ನಿಭಾಯಿಸುವ ಸಾಹಸವನ್ನು ಕೇವಲ ಮಹಿಳೆಯರೇ ನಿಭಾಯಿಸಿಕೊಂಡು ಹೋಗುತ್ತಿರುವುದು ವಿಶೇಷ.
‘ಗ್ರಾಮೀಣ ಪ್ರದೇಶದಲ್ಲಿ ವಾರದಲ್ಲಿ ಪ್ರತಿ ಮೂರು ಅಥವಾ ವಾರಕ್ಕೊಮ್ಮೆ ಮನೆ ಮನೆಯಿಂದ ಒಣ ಕಸ ಸಂಗ್ರಹಿಸಲಾಗುತ್ತದೆ. ಸ್ವಚ್ಛತಾ ಸಂಕೀರ್ಣದಲ್ಲಿ ಪ್ಲಾಸ್ಟಿಕ್, ರಟ್ಟು, ಕಾಗದಗಳು, ಗಾಜಿನ ಬಾಟಲಿಗಳು, ಹೀಗೆ ಬೇರೆ ಬೇರೆ ಕಸಗಳನ್ನು ಪ್ರತ್ಯೇಕಿಸಿ ವ್ಯವಸ್ಥಿತವಾಗಿ ದಾಸ್ತಾನು ಮಾಡುವ ಕೆಲಸವನ್ನು ಸ್ವಸಹಾಯ ಗುಂಪುಗಳ ಸದಸ್ಯರೇ ನಿರ್ವಹಿಸುತ್ತಿದ್ದಾರೆ. ಗೋಕರ್ಣ ಮತ್ತು ಚಿತ್ತಾಕುಲದಲ್ಲಿ ಸರಾಸರಿ 8 ರಿಂದ 10, ಉಳಿದ ಕಡೆ ಮೂವರಿಂದ ನಾಲ್ಕು ಜನ ಕೆಲಸ ಮಾಡುತ್ತಿದ್ದಾರೆ’ ಎಂದು ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಂಯೋಜಕ ಸೂರ್ಯನಾರಾಯಣ ಭಟ್ ವಿವರಿಸಿದರು.
ಸ್ವಚ್ಛ ಭಾರತ ಅಭಿಯಾನ ಜಿಲ್ಲೆಯಲ್ಲಿ ಸಾಕಾರಗೊಳಿಸುವಲ್ಲಿ ನಾರಿಶಕ್ತಿಯೇ ಪ್ರಮುಖ ಪಾತ್ರ ವಹಿಸುತ್ತಿದೆಈಶ್ವರ ಕಾಂದೂ ಜಿಲ್ಲಾ ಪಂಚಾಯಿತಿ ಸಿಇಒ
ಸದ್ಯ ನೀಡಲಾಗುತ್ತಿರುವ ಮಾಸಿಕ ₹10 ಸಾವಿರ ವೇತನವನ್ನು ಏರಿಕೆ ಮಾಡಬೇಕು
ಕಸ ಸಂಗ್ರಹಣೆ, ವಿಂಗಡಣೆಯ ಚಟುವಟಿಕೆಯಲ್ಲಿ ತೊಡಗಿಕೊಂಡವರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು
ಅಪಾಯಕಾರಿ ಸ್ಥಿತಿಯಲ್ಲಿರುವ ಹಳ್ಳಿ ರಸ್ತೆಗಳಲ್ಲಿ ಸರಿಪಡಿಸಿ, ಸ್ವಚ್ಛತಾ ವಾಹಿನಿ ಸಾಗಲು ಸುಗಮವಾಗುವಂತೆ ನೋಡಿಕೊಳ್ಳಬೇಕು
ಪ್ರತಿ 3 ತಿಂಗಳ ಬದಲಾಗಿ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.