
ಶಿರಸಿ: ‘ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ಭ್ರಷ್ಟಾಚಾರದ ಆಪಾದನೆ ಮಾಡುವ ಮುನ್ನ ಸೂಕ್ತ ಪುರಾವೆ ಬಿಡುಗಡೆ ಮಾಡಬೇಕು. ಅದನ್ನು ಬಿಟ್ಟು ಬೇಜವಾಬ್ದಾರಿಯಿಂದ ಮಾತನಾಡುವುದು ಸರಿಯಲ್ಲ. ಮೊದಲು ನೀವೇನು ಮಾಡಿದ್ದೀರಿ ಎಂಬ ಬಗ್ಗೆ ಸಮಗ್ರ ಮಾಹಿತಿ ಸಾರ್ವಜನಿಕವಾಗಿ ಬಿಡುಗಡೆ ಮಾಡಿ’ ಎಂದು ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಸದ ಕಾಗೇರಿ ಅವರು ರಾಜಕೀಯದಲ್ಲಿ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಅಧಿಕಾರ ಭೋಗಿಸಿದ ವ್ಯಕ್ತಿ. ಶಾಸಕರಾಗಿದ್ದಾಗ ತಮ್ಮ ಕ್ಷೇತ್ರಕ್ಕೆ ನೀಡಿದ ಕೊಡುಗೆಯಾದರೂ ಏನು? ಈಗ ಸಂಸದರಾಗಿ ಜಿಲ್ಲೆಯ ರೈಲ್ವೆ ಸಂಪರ್ಕಕ್ಕೆ ಅವರ ಕೊಡುಗೆಯೇನಿದೆ? ಸಾಗರಮಾಲಾ ಯೋಜನೆಯಡಿ ರಸ್ತೆ ವಿಸ್ತರಣೆ ಆರಂಭವಾಗಿ ಎಷ್ಟು ವರ್ಷವಾಯಿತು? ಈ ಬಗ್ಗೆ ಕಾಗೇರಿ ಅವರು ಸಂಬಂಧಪಟ್ಟ ಇಲಾಖೆಗೆ ಎಲ್ಲಿ ಪ್ರಶ್ನೆ ಮಾಡಿದ್ದಾರೆ ಅಥವಾ ಪತ್ರ ವ್ಯವಹಾರ ನಡೆಸಿದ ದಾಖಲೆ ಇದೆಯೇ? ಎಂದು ಪ್ರಶ್ನಿಸಿದರು.
‘ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸದ ಕಾಗೇರಿ ಅವರು ಕಾಂಗ್ರೆಸ್ ಸರ್ಕಾರವನ್ನು ತೆಗಳುವುದನ್ನು ಬಿಟ್ಟು ಮೊದಲು ಕ್ರಿಯಾಶೀಲರಾಗಿ ಕೇಂದ್ರದ ಸೌಲಭ್ಯಗಳನ್ನು ಕ್ಷೇತ್ರಕ್ಕೆ ತರಲಿ. ನದಿ ಜೋಡಣೆ ಎಂಬುದು ಕೇಂದ್ರದ ಯೋಜನೆ, ಅದು ನಿಲ್ಲುವುದಿದ್ದರೆ ಅದರ ಆಗುಹೋಗುಗಳ ಹೊಣೆಗಾರಿಕೆ ಸಂಸದರಿಗೇ ಸಲ್ಲಬೇಕು’ ಎಂದರು.
ಇದೇ ವೇಳೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ದೇಶಪಾಂಡೆ ಅವರು, ‘ಸಂಸದರು ಮೊದಲು ಬಿಜೆಪಿ ಮಹಿಳಾ ಕಾರ್ಯಕರ್ತರು ಪಂಚ ಗ್ಯಾರಂಟಿ ಸೌಲಭ್ಯಗಳಿಂದ ಹೊರಬರುವಂತೆ ಹೇಳಲಿ, ನಂತರ ಯೋಜನೆಗಳನ್ನು ಟೀಕಿಸಲಿ’ ಎಂದ ಅವರು, ‘ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷನಾಗಿ ಸರ್ಕಾರಕ್ಕೆ ಈಗಾಗಲೇ ಮೂರು ವರದಿಗಳನ್ನು ನೀಡಿದ್ದೇನೆ. ಅದರಲ್ಲಿ ಹಲವು ಪ್ರಮುಖ ಅಂಶಗಳನ್ನು ಸೇರ್ಪಡೆ ಮಾಡಲಾಗಿದ್ದು, ಅವು ಹಂತ ಹಂತವಾಗಿ ಜಾರಿಯಾಗುವ ವಿಶ್ವಾಸವಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.