
ಶಿರಸಿ: ‘ಮುಂದಿನ ಐದು ತಿಂಗಳುಗಳಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಟ್ಟಡ ಕಾಮಗಾರಿ ಪೂರ್ಣಗೊಂಡು ವಿದ್ಯಾರ್ಥಿಗಳ ಬಳಕೆಗೆ ಸಿಗಬೇಕು’ ಎಂದು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.
ತಾಲ್ಲೂಕಿನ ಇಸಳೂರಿನಲ್ಲಿ ನಿರ್ಮಾಣವಾಗುತ್ತಿರುವ ವಿಜ್ಞಾನ ಕೇಂದ್ರ ಕಟ್ಟಡ ಕಾಮಗಾರಿಯನ್ನು ಶನಿವಾರ ವೀಕ್ಷಿಸಿದ ಅವರು ಸಂಬಂಧಿಸಿದ ಗುತ್ತಿಗೆದಾರ ಮತ್ತು ಎಂಜಿನಿಯರ್ ಗಳಿಗೆ ಸೂಚನೆ ನೀಡಿದರು.
‘ಯೋಜನೆ ಮಂಜೂರಾಗಿ ವರ್ಷಗಳು ಕಳೆದಿವೆ. ಕಾರಣಾಂತರಗಳಿಂದ ಕಾಮಗಾರಿ ಆರಂಭಿಸಲು ವಿಳಂಬವಾಗಿದೆ. ಆರು ತಿಂಗಳು ಮಳೆಯಾದ ಕಾರಣ ಮತ್ತಷ್ಟು ವಿಳಂಬವಾಗಿದ್ದು, ಇನ್ನಾದರೂ ಕಾಮಗಾರಿಗೆ ವೇಗ ನೀಡಬೇಕು’ ಎಂದರು.
'ಸರ್ಕಾರಿ ಕಾಮಗಾರಿ ಎಂದು ಬೇಜವಾಬ್ದಾರಿಯಿಂದ ವರ್ತಿಸದೇ ಜವಾಬ್ದಾರಿಯಿಂದ ಕೇಂದ್ರದ ಕಟ್ಟಡವನ್ನೂ ಕಟ್ಟಬೇಕು. ಗುಣಮಟ್ಟದಲ್ಲಿ ಕಳಪೆತನ ಬೇಡ. ಕೇಂದ್ರದ ಕಾಂಪೌಂಡ್ ಗೋಡೆ ಬಲಿಷ್ಠವಾಗಿ, ಎತ್ತರವಾಗಿ ನಿರ್ಮಿಸಬೇಕು. ಕೇಂದ್ರದವರೆಗೂ ಉತ್ತಮ ರಸ್ತೆ ನಿರ್ಮಾಣ ಮಾಡಬೇಕು’ ಎಂದು ಹೇಳಿದರು.
ಭೈರುಂಬೆ ಗ್ರಾಮ ಆಡಳಿತ ಅಧಿಕಾರಿಯ ನೂತನ ಕಚೇರಿ, ಇಸಳೂರಿನ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ನೂತನ ಕಟ್ಟಡ ಶಂಕು ಸ್ಥಾಪನೆ ನೆರವೇರಿಸಿದರು.
ಚೆಸ್ ಪಾರ್ಕ್ ಲೋಕಾರ್ಪಣೆ ಹಾಗೂ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ 2025–26ನೇ ಸಾಲಿನ ಕೃಷಿ ಯಾಂತ್ರೀಕರಣ ಯೋಜನೆಯ ಫಲಾನುಭವಿಗಳಿಗೆ ಭತ್ತ ಒಕ್ಕಣೆ ಯಂತ್ರ ವಿತರಿಸಿದರು. ಸಣ್ಣಕೇರಿ ಮತ್ತು ಗಿಡಮಾವಿನಕಟ್ಟಾ ಎಸ್ಸಿ ಕೇರಿ ರಸ್ತೆ ಸುಧಾರಣೆ ಕಾಮಗಾರಿಯ ಭೂಮಿಪೂಜೆ ಜತೆ ನಗರದ ವಿವಿಧ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಿಲನ್ಯಾಸ ನೆರವೇರಿಸಿದರು.
ಉಪವಿಭಾಗಾಧಿಕಾರಿ ಕಾವ್ಯರಾಣಿ ಕೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ಎಸ್.ಕೆ. ಭಾಗವತ ಇದ್ದರು.
ಸರ್ಕಾರದ ಯೋಜನೆ ಜನತೆಗೆ ತಲುಪಲು ಯಾವತ್ತೂ ವಿಳಂಬ ಆಗಬಾರದು. ಹಾಗಾದರೆ ಅದು ನಿರೀಕ್ಷಿತ ಗುರಿ ಸಾಧಿಸಿದಂತೆ ಆಗುವುದಿಲ್ಲಭೀಮಣ್ಣ ನಾಯ್ಕ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.