ADVERTISEMENT

ಕಾರವಾರದಲ್ಲಿ ಅಲೆಗಳ ಅಬ್ಬರ: ಸಮುದ್ರ ದಂಡೆ ನೀರು ಪಾಲು

ನಗೆಯಲ್ಲಿ ಗುಡ್ಡ ಕುಸಿತದಿಂದ ಆತಂಕ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 12:22 IST
Last Updated 7 ಆಗಸ್ಟ್ 2020, 12:22 IST
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅಲೆಗಳು ಸಾಕಷ್ಟು ಮುಂದೆ ಅಪ್ಪಳಿಸುತ್ತಿವೆ.
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅಲೆಗಳು ಸಾಕಷ್ಟು ಮುಂದೆ ಅಪ್ಪಳಿಸುತ್ತಿವೆ.   

ಕಾರವಾರ: ಜಿಲ್ಲೆಯ ಕರಾವಳಿ ತೀರದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೆ, ಪ್ರಕ್ಷುಬ್ಧಗೊಂಡಿರುವ ಸಮುದ್ರ ಸಹಜ ಸ್ಥಿತಿಗೆ ಬಂದಿಲ್ಲ. ರವೀಂದ್ರನಾಥ ಟ್ಯಾಗೋರ್ ಕಡಲ ತೀರದ ವಿವಿಧೆಡೆ ಭಾರಿ ಪ್ರಮಾಣದಲ್ಲಿ ಕಡಲ್ಕೊರೆತವಾಗುತ್ತಿದೆ.

ಶಿಲ್ಪ ಉದ್ಯಾನದ ಹಿಂಭಾಗ, ಆಂಜನೇಯ ವಿಗ್ರಹದ ಬಳಿ ಸಮುದ್ರದ ನೀರು ಸಮುದ್ರದ ದಂಡೆಯನ್ನು ಕಬಳಿಸುತ್ತಿದೆ. ಅಲೆಗಳ ಹೊಡೆತಕ್ಕೆ ಮಣ್ಣು ಕರಗುತ್ತಿದೆ. ಸ್ಥಳದಲ್ಲಿ ರಾಶಿ ಇಡಲಾಗಿದ್ದ ಬಂಡೆಗಲ್ಲುಗಳೂ ಸಮುದ್ರ ಪಾಲಾಗುವ ಸಾಧ್ಯತೆಯಿದೆ.

ಮೂರು ದಿನಗಳಿಂದ ಸುರಿದ ಭಾರಿ ಮಳೆಯಿಂದ ತಾಲ್ಲೂಕಿನ ದೇವಳಮಕ್ಕಿ ಗ್ರಾಮದ ನಗೆ ಪ್ರದೇಶದಲ್ಲಿ ಅರಣ್ಯ ಪ್ರದೇಶದ ಗುಡ್ಡ ಕುಸಿದಿದೆ. ಸುಮಾರು ಆರು ಎಕರೆ ಪ್ರದೇಶದ ಮಣ್ಣು ಹಾಗೂ ನೂರಾರು ಮರಗಳು ಒಂದು ಕಿಲೋಮೀಟರ್‌ನಷ್ಟು ಕೆಳಗೆ ಜಾರಿವೆ.

ADVERTISEMENT

ಈ ಪ್ರದೇಶದಲ್ಲಿ ಯಾವುದೇ ಮನೆಗಳಿಲ್ಲದ ಕಾರಣ ಹಾನಿಯಾಗಿಲ್ಲ. ಆದರೆ, ಗುಡ್ಡದ ತಪ್ಪಲಿನಲ್ಲಿರುವ ಗದ್ದೆಗಳಿಗೆ ಈ ಭಾಗದಿಂದಲೇ ನೀರು ಹರಿಯುತ್ತದೆ. ಅದರೊಂದಿಗೆ ಕೆಸರು ಮಿಶ್ರಣವಾಗಿ ಫಲವತ್ತಾದ ಗದ್ದೆಗಳಿಗೆ ಹರಿದು ಬಂದು ಬೇಸಾಯಕ್ಕೆ ಹಾನಿಯಾಗುವ ಆತಂಕ ರೈತರಲ್ಲಿ ಮೂಡಿದೆ ಎನ್ನುತ್ತಾರೆ ಸ್ಥಳೀಯ ಯುವ ಮುಖಂಡ ಪ್ರಜ್ವಲ್ ಬಾಬುರಾಯ ಶೇಟ್.

ಜುಲೈ ಮೊದಲ ವಾರ ಸುರಿದ ಭಾರಿ ಮಳೆಯಿಂದ ನಗೆ ಹಳ್ಳವು ಉಕ್ಕಿ ಹರಿದು ಭತ್ತದ ಸಸಿಗಳಿಗೆ ಹಾನಿಯಾಗಿತ್ತು. ಈಗ ಮತ್ತೆ ಜೋರಾದ ಮಳೆಯಿಂದ ಗುಡ್ಡದ ಮಣ್ಣು ಕುಸಿದಿದೆ. ಈ ಭಾಗದ ರೈತರಿಗೆ ಸಮಸ್ಯೆಯಾದರೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.