ಮುಂಡಗೋಡ: ಭೂತಾಯಿಯ ಮಡಿಲಲ್ಲಿ ಬಿತ್ತಿರುವ ಬೀಜವು ಬೆಳೆಯಾಗಿರುವುದನ್ನು ಕಣ್ತುಂಬಿಕೊಂಡ ರೈತ ಸಮುದಾಯ, ಕುಟುಂಬ ಸದಸ್ಯರ ಜೊತೆಗೂಡಿ ಸೀಗಿ ಹುಣ್ಣಿಮೆಯನ್ನು ಮಂಗಳವಾರ ಆಚರಿಸಿದರು. ಬಿಡವು ನೀಡಿದ ವರುಣ, ನಳ ನಳಿಸುತ್ತಿರುವ ಬೆಳೆಯು ರೈತನ ಸಂತಸ ಮತ್ತಷ್ಟು ಹೆಚ್ಚಿಸಿತು.
ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ಗೋವಿನಜೋಳ ಬೆಳೆದವರು ಹಾನಿ ಅನುಭವಿಸಿದರು. ಆದರೆ ಭತ್ತ ಇನ್ನಿತರ ವಾಣಿಜ್ಯ ಬೆಳೆಗಳು ರೈತನ ಕೈ ಹಿಡಿದಿವೆ. ಇದು ಸೀಗಿ ಹುಣ್ಣಿಮೆ ಆಚರಣೆಯ ಮೇಲೂ ತಕ್ಕ ಮಟ್ಟಿಗೆ ಪರಿಣಾಮ ಬೀರಿರುವುದು ಕಂಡು ಬಂತು.
ಗದ್ದೆಗಳಲ್ಲಿ ಭತ್ತದ ಪೈರು ತೆನೆ ಕಟ್ಟುವ ಹಂತದಲ್ಲಿದೆ. ಹವಾಮಾನ ವೈಪರೀತ್ಯದಿಂದ ಕೆಲವೆಡೆ ತೋಟಗಾರಿಕಾ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆದರೂ, ರೈತ ಸಮುದಾಯ ಸಾಂಪ್ರದಾಯಿಕ ಭೂ ತಾಯಿಗೆ ಪೂಜಿಸುವ ಕಾಯಕದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡರು.
ಹಿಂದಿನ ದಿನಗಳಲ್ಲಿ ಚಕ್ಕಡಿಯೇ ಗದ್ದೆಗೆ ಹೋಗುವ ಸಾರಿಗೆಯ ಕೊಂಡಿಯಾಗಿತ್ತು. ಆದರೆ, ವರ್ಷಗಳು ಉರುಳಿದಂತೆ ಕೃಷಿಕ ಹಾಗೂ ಪದ್ಧತಿಯಲ್ಲೂ ಸಾಕಷ್ಟು ಬದಲಾವಣೆಯಾಗಿದ್ದು, ಕೆಲವು ಕುಟುಂಬಗಳು ಬೈಕ್, ಕಾರುಗಳಲ್ಲಿ ಹೊಲಗದ್ದೆಗಳಿಗೆ ತೆರಳಿ ಸೀಗೆಹುಣ್ಣಿಮೆ ಆಚರಿಸಿದರು.
'ಕೈಗೆ ಬೆಳೆ ಬರುವ ಸಮಯವನ್ನು ಕುಟುಂಬ ಸಮೇತರಾಗಿ ಕಣ್ತುಂಬಿಕೊಳ್ಳುವುದು ರೈತನ ಸಂತಸದ ಕ್ಷಣವಾಗಿರುತ್ತದೆ. ಹೊಲದ ಸುತ್ತಲೂ ಚೆರಗ ಚೆಲ್ಲಿ, ಕೈಗೆ ಬಂದ ಬೆಳೆಗೆ ಪೂಜಿಸಲಾಯಿತು. ತೆನೆಯಲ್ಲಿರುವ ಕಾಳುಗಳು ಗಟ್ಟಿಯಾಗಿ ಕಣಜ ತುಂಬಲಿ ಎಂದು ಪ್ರಾರ್ಥಿಸಲಾಯಿತು. ಗದ್ದೆಯಲ್ಲಿಯೇ ಸಂಜೆವರೆಗೂ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಸಹಭೋಜನ ಮಾಡಿದೆವು' ಎಂದು ರೈತ ವಿಠ್ಠಲ್ ಬಾಳಂಬೀಡ ಹೇಳಿದರು.
'ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಬಿಡಲು ಆಗದು. ರೈತರಿಗೆ ಎಷ್ಟೇ ಕಷ್ಟ ಬಂದರೂ ಭೂತಾಯಿಗೆ ಸೀಮಂತ ಮಾಡುವುದನ್ನು ಮರೆಯುವುದಿಲ್ಲ' ಎಂದು ರೈತ ಬಾಬಣ್ಣ ವಾಲ್ಮೀಕಿ ಹೇಳಿದರು.
'ಗದ್ದೆಯಲ್ಲಿರುವ ಬೆಳೆ ತೆನೆ ಬಿಡುವ ಹಂತದಲ್ಲಿರುವಾಗ, ಭೂತಾಯಿ ಗರ್ಭ ಧರಿಸಿದ್ದಾಳೆ ಎಂಬ ನಂಬಿಕೆಯಿಂದ, ಅವಳಿಗೆ ಸೀಮಂತ ಮಾಡಿ, ಬಯಕೆ ತೀರಿಸುವ ಆಚರಣೆ ಇದಾಗಿದೆ' ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.