ಹೊನ್ನಾವರ: ‘ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಶರಾವತಿ ಭೂಗತ ವಿದ್ಯುತ್ ಯೋಜನೆ ಜಾರಿಗೊಳಿಸುವ ಪ್ರಯತ್ನವನ್ನು ಸರ್ಕಾರ ಮುಂದುವರಿಸಿದರೆ ಯೋಜನೆಯ ವಿರುದ್ಧ ರಾಜ್ಯದಾದ್ಯಂತ ಹೋರಾಟ ಸಂಘಟಿಸಲಾಗುವುದು’ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಎಚ್ಚರಿಸಿದರು.
ಶರಾವತಿ ಭೂಗತ ವಿದ್ಯುತ್ ಯೋಜನೆಯಿಂದಾಗುವ ದುಷ್ಪರಿಣಾಮಗಳ ಕುರಿತ ಮಾಹಿತಿ ಹಂಚಿಕೊಳ್ಳಲು ತಾಲ್ಲೂಕಿನ ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಯೋಜನೆಯ ಹಿನ್ನೆಲೆಯಲ್ಲಿ ಇರುವ ಬಂಡವಾಳಶಾಹಿಗಳು ಯಾರು ಎನ್ನುವುದು ಬಹಿರಂಗವಾಗಬೇಕು. ಹೈಕೋರ್ಟ್ ಆದೇಶದಂತೆ ಕಟ್ಟಿಗೆ ಕೊರೆಯುವ ಕಾರ್ಖಾನೆಗಳಿಗೂ ಅನುಮತಿ ನೀಡುವಂತಿಲ್ಲ. ಪ್ರಸ್ತುತ ಯೋಜನೆಗೆ 16 ಸಾವಿರ ಮರಗಳ ಹನನ ನಡೆಯಲಿದೆ. ಯೋಜನೆ ಜಾರಿಯಾದರೆ ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿರುವ ಸಿಂಗಳಿಕದಂತ ಅಪರೂಪದ ಪ್ರಾಣಿಗಳು ಎಲ್ಲಿಗೆ ಹೋಗಬೇಕು ಹಾಗೂ ಪರಿಸರಕ್ಕೆ ಉಂಟಾಗುವ ನಷ್ಟಕ್ಕೆ ಪರಿಹಾರವೇನು ಎನ್ನುವುದಕ್ಕೆ ಸರ್ಕಾರದ ಬಳಿ ಉತ್ತರವಿಲ್ಲ. ಯೋಜನೆ ಜಾರಿಗೆ ಸಾರ್ವಜನಿಕರು ಅವಕಾಶ ನೀಡಬಾರದು’ ಎಂದರು.
ಧರ್ಮಾಧಿಕಾರಿ ಮಾರುತಿ ಗುರೂಜಿ ಮಾತನಾಡಿ, ‘ಯುನೆಸ್ಕೋ ಮಾನ್ಯತೆ ಪಡೆದ ಪಶ್ಚಿಮ ಘಟ್ಟ ನಾಶವಾದರೆ ಇಡೀ ವಿಶ್ವಕ್ಕೆ ಅಪಾಯ ಎದುರಾಗಲಿದೆ. ಮರ ಕಡಿಯುವುದು ಮನುಷ್ಯನ ಹತ್ಯೆ ಮಾಡಿದ್ದಕ್ಕಿಂತ ಘೋರ ಅಪರಾಧ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಯೋಜನೆ ವಿರೋಧಿ ಹೋರಾಟಕ್ಕೆ ಯುವ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಯೋಜನೆ ಜಾರಿಗೆ ಸಂಬಂಧಿಸಿದಂತೆ ಸೆ.16 ಹಾಗೂ 18ರಂದು ನಡೆಯುವ ಸಾರ್ವಜನಿಕ ಅಹವಾಲು ಸಭೆಗೆ ಖಂಡನೆ ವ್ಯಕ್ತಪಡಿಸುತ್ತ ನಾವೆಲ್ಲ ಸಭೆಗೆ ಹಾಜರಾಗಿ ಯೋಜನೆಗೆ ನಮ್ಮ ವಿರೋಧವನ್ನು ಅಧಿಕೃತವಾಗಿ ದಾಖಲಿಸಲಿದ್ದೇವೆ’ ಎಂದರು.
ಶರಾವತಿ ಕೊಳ್ಳ ಉಳಿಸಿ ಸಮಿತಿಯ ಚಂದ್ರಕಾಂತ ಕೊಚರೇಕರ ಭಾಗವಹಿಸಿದ್ದರು.
18 ರಂದು ಬೈಕ್ ರ್ಯಾಲಿ
‘ಸೆ.18ರಂದು ಗೇರುಸೊಪ್ಪದಲ್ಲಿ ನಡೆಯಲಿರುವ ಸಾರ್ವಜನಿಕ ಅಹವಾಲು ಸಭೆಗೆ ಮುನ್ನ ಯೋಜನೆ ವಿರೋಧಿಸಿ ಹೊನ್ನಾವರದಿಂದ ಗೇರುಸೊಪ್ಪವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗುವುದು’ ಎಂದು ಪರಿಸರ ಕಾರ್ಯಕರ್ತ ಗುರುಪ್ರಸಾದ ಹೆಗಡೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.